ಅರಿಬಲದ ಥಟ್ಟಣೆಯ ಬಿರುಬಿನ
ಬರವನೀಕ್ಷಿಸಿ ಪೂತು ಪಾಂಚಾ
ಲರ ಸಘಾಡಿಕೆ ಸಾಹಸಿಕರೈ ಹಾ ಮಹಾದೇವ
ದೊರೆಯಲೇ ಬಳಿಕೇನು ಪಾಂಡವ
ರರಸಿಯಯ್ಯನು ದ್ರುಪದನಲ್ಲಾ
ಹರಯೆನುತ ಗಹಗಹಿಸಿ ತಲೆದೂಗಿದನು ಕಲಿದ್ರೋಣ (ದ್ರೋಣ ಪರ್ವ, ೧೭ ಸಂಧಿ, ೩೧ ಪದ್ಯ)
ತಾತ್ಪರ್ಯ:
ಶತ್ರು ಸೈನ್ಯದ ಆಗಮನದ ಬಿರುಸನ್ನು ನೋಡಿ, ದ್ರೋನನು ತಲೆದೂಗಿ ಗಹಗಹಿಸಿ ನಕ್ಕು, ಭಲೇ ಪಾಂಚಾಲರ ಜೋರನ್ನು ನೋಡು, ಶಿವ ಶಿವಾ ಇವರು ಮಹಾಸಾಹಸಿಗರು. ದ್ರುಪದನು ಎಷ್ಟೇ ಆಗಲಿ ದೊರೆ, ಮೇಲಾಗಿ ಪಾಂಡವರ ಮಾವ ಎಂದು ತಲೆದೂಗಿದನು.
ಅರ್ಥ:
ಅರಿ: ವೈರಿ; ಬಲ: ಸೈನ್ಯ; ಥಟ್ಟಣೆ: ಗುಂಪು; ಬಿರುಬು: ಆವೇಶ; ಬರವು: ಆಗಮನ; ಈಕ್ಷಿಸು: ನೋಡು; ಪೂತು: ಭಲೇ; ಸಘಾಡ: ರಭಸ; ಸಾಹಸ: ಪರಾಕ್ರಮ; ದೊರೆ: ರಾಜ; ಬಳಿಕ: ನಂತರ; ಅರಸಿ: ರಾಣಿ; ಅಯ್ಯ: ತಂದೆ; ಗಹಗಹಿಸು: ನಗು; ತೂಗು: ಅಲ್ಲಾಡಿಸು; ತಲೆದೂಗು: ಒಪ್ಪಿಗೆ ಸೂಚಿಸು; ಕಲಿ: ಶೂರ;
ಪದವಿಂಗಡಣೆ:
ಅರಿಬಲದ+ ಥಟ್ಟಣೆಯ +ಬಿರುಬಿನ
ಬರವನ್+ಈಕ್ಷಿಸಿ +ಪೂತು +ಪಾಂಚಾ
ಲರ +ಸಘಾಡಿಕೆ+ ಸಾಹಸಿಕರೈ +ಹಾ +ಮಹಾದೇವ
ದೊರೆ+ಅಲೇ +ಬಳಿಕೇನು+ ಪಾಂಡವರ್
ಅರಸಿ+ಅಯ್ಯನು +ದ್ರುಪದನಲ್ಲಾ
ಹರಯೆನುತ +ಗಹಗಹಿಸಿ+ ತಲೆದೂಗಿದನು +ಕಲಿದ್ರೋಣ
ಅಚ್ಚರಿ:
(೧) ಜೋಡಿ ಪದಗಳು – ಬಿರುಬಿನಬರವನೀಕ್ಷಿಸಿ; ಪೂತು ಪಾಂಚಾಲರ; ಸಘಾಡಿಕೆ ಸಾಹಸಿಕರೈ
(೨) ದ್ರುಪದನನ್ನು ಕರೆದ ಪರಿ – ಪಾಂಡವರರಸಿಯಯ್ಯನು