ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ (ಗದಾ ಪರ್ವ, ೧ ಸಂಧಿ, ೮ ಪದ್ಯ)
ತಾತ್ಪರ್ಯ:
ಸುತ್ತು ಗುರಾಣಿಗಳ ಮೇಲೆ ಬಾಣಗಳನ್ನು ಬಿಟ್ಟರು. ಈಟಿಗಳಿಂದ ಇರಿದರು. ರಾವುತರು ರಥಧ್ವಜವನ್ನು ಹೊಡೆದರು. ಆನೆಗಳ ಸೇನೆ ಮುತ್ತಿತು. ಈ ಮುತ್ತಿಗೆಯನ್ನು ಬಿಡಿಸಿ ಅರ್ಜುನನನ್ನು ರಕ್ಷಿಸುವವರಿದ್ದರೆ ಕರೆ ಎಂದು ಕುರುಸೇನೆ ಆರ್ಭಟಿಸಿತು.
ಅರ್ಥ:
ಹಲಗೆ: ಒಂದು ಬಗೆಯ ಗುರಾಣಿ; ಸುತ್ತು: ಬಳಸು; ಕಣೆ: ಬಾಣ; ತೆತ್ತಿಸು: ಜೋಡಿಸು, ಕೂಡಿಸು; ಈಚೆ: ಹೊರಗೆ; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೆ ತರು; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೀಲಿಸು: ಜೋಡಿಸು; ರಥ: ಬಂಡಿ; ಧ್ವಜ: ಬಾವುಟ; ಮುತ್ತು: ಆವರಿಸು; ಗಜ: ಆನೆ; ಸೇನೆ: ಸೈನ್ಯ; ಬರಹೇಳು: ಆಗಮಿಸು; ವೇಢೆಯ: ಹಯಮಂಡಲ; ಕಿತ್ತು: ಕತ್ತರಿಸು; ಮಗುಚು: ಹಿಂದಿರುಗು, ಮರಳು; ಮುಸುಕು: ಹೊದಿಕೆ;
ಪದವಿಂಗಡಣೆ:
ಸುತ್ತು+ಹಲಗೆಯ +ಮೇಲೆ +ಕಣೆಗಳ
ತೆತ್ತಿಸಿದರ್+ಈಚಿನಲಿ +ಸಬಳಿಗರ್
ಎತ್ತಿದರು +ರಾವುತರು +ಕೀಲಿಸಿದರು +ರಥ+ಧ್ವಜವ
ಮುತ್ತಿದವು +ಗಜಸೇನೆ +ಪಾರ್ಥನ
ತೆತ್ತಿಗರ +ಬರಹೇಳು +ವೇಢೆಯ
ಕಿತ್ತು +ಮಗುಚುವರಾರ್+ಎನುತ +ಮುಸುಕಿತ್ತು +ಕುರುಸೇನೆ
ಅಚ್ಚರಿ:
(೧) ಹಲಗೆ, ಕಣೆ, ಸಬಳಿ – ಆಯುಧಗಳ ಹೆಸರು