ಪದ್ಯ ೨೩: ಮಗುವಿನ ಬಳಿ ಯಾರು ಬಂದರು?

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದರುತಿರ್ದನು ಶಿಶುಗಳರಸನು ರವಿಯನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ (ಆದಿ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ಮಗುವು ನದಿಯ ದಡದ ಮೇಲೆ ಮರಳಿನ ರಾಶಿಯನ್ನು ಕಾಲಲ್ಲಿ ಹೊಡೆಯುತ್ತಾ ಕೈಗಲನ್ನು ಕೊಡವುತ್ತಾ ಸೂರ್ಯನನ್ನೇ ನೋಡುತ್ತಾ ಜೊರಾಗಿ ಅಳುತ್ತಿತ್ತು. ಇದನ್ನು ನೋಡಿದ ಸಾರತಿಯನೊಬ್ಬನು ಸಂತೋಷಾತಿರೇಕದಿಂದ ಮೈಮರೆತು ಉಬ್ಬಿ, ಶಿವಶಿವಾ ಇದು ಎಲ್ಲಿಂದ ದೊರಕಿದ ನಿಧಿಯೆನ್ನುತ್ತಾ ಮಗುವಿನ ಬಳಿ ಬಂದನು.

ಅರ್ಥ:
ಕೆದರು: ಹರಡು; ಕಾಲು: ಪಾದ; ಮಳಲು: ಮರಳು; ರಾಶಿ: ಗುಂಪು; ಒದೆ: ನೂಕು; ಕೈ: ಹಸ್ತ; ಕೊಡಹು: ಅಲ್ಲಾಡಿಸು, ಕೊಡವು, ಜಾಡಿಸು ; ಒದರು: ಕಿರುಚು, ಗರ್ಜಿಸು; ಶಿಶು: ಮಗು; ಅರಸ: ರಾಜ; ರವಿ: ಸೂರ್ಯ; ಈಕ್ಷಿಸು: ನೋಡು; ಕಂಡು: ನೋಡು; ಸೂತ: ಸಾರಥಿ; ಮುದ: ಸಮ್ತಸ; ಮದ: ದರ್ಪ; ಮರೆ: ಎಚ್ಚರತಪ್ಪು; ಉಬ್ಬು: ಹಿಗ್ಗು, ಗರ್ವಿಸು; ನಿಧಿ: ಐಶ್ವರ್ಯ; ನಡೆ: ಚಲಿಸು;

ಪದವಿಂಗಡಣೆ:
ಕೆದರಿ +ಕಾಲಲಿ +ಮಳಲ +ರಾಶಿಯನ್
ಒದೆದು +ಕೈಗಳ +ಕೊಡಹಿ +ಭೋಯೆಂದ್
ಒದರುತಿರ್ದನು +ಶಿಶುಗಳ್+ಅರಸನು +ರವಿಯನ್+ಈಕ್ಷಿಸುತ
ಇದನು +ಕಂಡನು +ಸೂತನೊಬ್ಬನು
ಮುದದ +ಮದದಲಿ +ತನ್ನ+ ಮರೆದ್
ಉಬ್ಬಿದನ್+ಇದೆತ್ತಣ+ ನಿಧಿಯೊ +ಶಿವಶಿವಯೆಂದು +ನಡೆತಂದ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ಶಿಶುಗಳರಸನು, ಎತ್ತಣ ನಿಧಿಯೊ;

ಪದ್ಯ ೫೬: ಭೀಮನು ಆನೆಗಳನ್ನು ಹೇಗೆ ಹೊಯ್ದನು?

ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ (ಗದಾ ಪರ್ವ, ೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಭೀಮನು ಧರ್ಮಜನನ್ನು ಹಿಂದಕ್ಕಿಟ್ಟು ಗಜಸೈನ್ಯವನ್ನು ಅದು ಚೆದುರಿ ಹೋಗುವಂತೆ ಬಡಿದನು. ಆನೆಗಳನ್ನು ಹಾರಿಹೋಗುವಂತೆ ಮಾಡಿ ಹೊಡೆದು ಬೊಬ್ಬಿರಿದನು. ಅವನ್ನು ಅಣಸಿನಿಂದ ತಿವಿದು, ಗದೆಯ ಮೊನೆಯಿಂದ ಎರಡೆರಡು ಆನೆಗಳನ್ನೆತ್ತಿ ಎಸೆದನು. ಎಡಬಲದ ಬವರಿಯಲ್ಲಿ ತಡೆಗಾಲು ಕೊಟ್ಟು ಹೊಡೆದನು.

ಅರ್ಥ:
ಅವನಿಪ: ರಾಜ; ಹಿಂದಿಕ್ಕು: ಹಿಂದೆ ಸರಿಸು; ಗಜ: ಆನೆ; ಯೂಥ: ಗುಂಪು, ಹಿಂಡು; ವಿಭಾಡಿಸು: ನಾಶಮಾಡು; ಹಿಂಡ: ಗುಂಪು; ಕೆದರು: ಹರಡು; ಅವಗಡಿಸು: ಕಡೆಗಣಿಸು; ಹಾರು: ಲಂಘಿಸು; ಊದು: ಕೂಗು; ಒದೆ: ತಳ್ಳು, ನೂಕು; ಬೊಬ್ಬಿರಿ: ಗರ್ಜಿಸು; ತಿವಿ: ಚುಚ್ಚು; ಅಣಸು: ಆನೆಯ ದಂತಕ್ಕೆ ಅಳವಡಿಸುವ ಲೋಹದ ಕಟ್ಟು; ಮೊನೆ: ತುದಿ, ಕೊನೆ, ಹರಿತವಾದ; ಸವಡಿ: ಜೊತೆ, ಜೋಡಿ; ಎತ್ತು: ಮೇಲಕ್ಕೆ ತರು; ಬಲ: ಶಕ್ತಿ; ಬವರಿ: ತಿರುಗುವುದು; ತಡೆಗಾಲು: ಅಡ್ಡಮಾಡುತ್ತಿರವ ಕಾಲು; ಹೊಯ್ದು: ಹೊಡೆ;

ಪದವಿಂಗಡಣೆ:
ಅವನಿಪನ +ಹಿಂದಿಕ್ಕಿ +ಗಜ+ಯೂ
ಥವ +ವಿಭಾಡಿಸಿ +ಹಿಂಡ +ಕೆದರಿದನ್
ಅವಗಡಿಸಿದನು +ಹಾರಲ್+ ಊದಿದನ್+ಒದೆದು +ಬೊಬ್ಬಿರಿದ
ತಿವಿದನ್+ಅಣಸಿನಲ್+ಊರಿ +ಮೊನೆಯಲಿ
ಸವಡಿ+ ಆನೆಯನ್+ಎತ್ತಿದನು +ಬಲ
ಬವರಿ+ಎಡಬವರಿಯಲಿ +ತಡೆಗಾಲ+ಒಯ್ದನಾ +ಭೀಮ

ಅಚ್ಚರಿ:
(೧) ಯೂಥ, ಹಿಂಡು – ಸಾಮ್ಯಾರ್ಥ ಪದ
(೨) ಬಲಬವರಿ, ಎಡಬವರಿ – ಪದಗಳ ಬಳಕೆ

ಪದ್ಯ ೪೭: ಪಾಂಡವರ ಸೈನ್ಯವು ಹೇಗೆ ಒಟ್ಟುಗೂಡಿತು?

ಕೆದರಿತೀ ಬಲ ಬೆರಳ ತುಟಿಗಳೊ
ಳೊದರಿತಾ ಚಲ ತಾಪಶಿಖಿಯಲಿ
ಕುದಿದುದೀ ಬಲ ಭೀತಿಕಂಚುಕ ಕಳೆದುದಾ ಬಲಕೆ
ಕದಡಿತೀ ಬಲ ರೋಮಪುಳಕ
ಹೊದೆದುದಾ ಬಲ ಹಿಂಡೊಡೆದು ನೆರೆ
ಕದುಬಿತೀ ಬಲ ನೆರೆದುದಾ ಬಲ ನರನ ರಥ ಸುಳಿಯೆ (ದ್ರೋಣ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅರ್ಜುನನ ರಥವು ಬರಲು, ಕೌರವಸೈನ್ಯವು ಕೆದರಿತು, ತುಟಿಯ ಮೇಲೆ ಬೆರಳಿಟ್ಟು ಸಂತೋಷದಿಂದ ಪಾಂಡವ ಸೈನ್ಯವು ಗರ್ಜಿಸಿತು. ಈ ಸೈನ್ಯವು ತಾಪದ ಬೆಂಕಿಯಲ್ಲಿ ಕುದಿಯಿತು. ಆ ಸೈನ್ಯಕ್ಕೆ ಭೀತಿಯ ಕಂಚುಕ ಬಿಟ್ಟು ಹೋಯಿತು, ಈ ಸೈನ್ಯವು ಕದಡಿತು. ಆ ಸೈನ್ಯವು ರೋಮಾಂಚನಗೊಂಡಿತು. ಈ ಸೈನ್ಯ ಹಿಂದೊಡೆದು ಚೆಲ್ಲಿತು. ಕೆದರಿ ಹೋಗಿದ್ದ ಆ ಸೈನ್ಯ ಒಟ್ಟುಗೂಡಿತು.

ಅರ್ಥ:
ಕೆದರು: ಹರಡು; ಬಲ: ಸೈನ್ಯ; ಬೆರಳು: ಅಂಗುಲಿ; ತುಟಿ: ಅಧರ; ಉದುರು: ಕೆಳಗೆ ಬೀಳು; ಚಲ: ದೃಢತೆ; ತಾಪ: ಬಿಸಿ, ಸೆಕೆ; ಶಿಖಿ: ಬೆಂಕಿ; ಕುದಿ: ಸಂಕಟ, ಮರಳು; ಬಲ: ಸೈನ್ಯ; ರೋಮ: ಕೂದಲು; ಪುಳಕ: ರೋಮಾಂಚನ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಬಲ: ಸೈನ್ಯ; ಹಿಂಡು: ಗುಂಪು; ನೆರೆ: ಗುಂಪು; ಕದುಬು: ಒತ್ತು, ಆವೇಶ; ರಥ: ಬಂಡಿ; ಸುಳಿ: ಆವರಿಸು, ಮುತ್ತು;

ಪದವಿಂಗಡಣೆ:
ಕೆದರಿತ್+ಈ+ ಬಲ +ಬೆರಳ +ತುಟಿಗಳೊಳ್
ಉದರಿತಾ +ಚಲ +ತಾಪ+ಶಿಖಿಯಲಿ
ಕುದಿದುದ್+ಈ+ ಬಲ+ ಭೀತಿ+ಕಂಚುಕ +ಕಳೆದುದ್+ಆ+ ಬಲಕೆ
ಕದಡಿತ್+ಈ+ ಬಲ +ರೋಮ+ಪುಳಕ
ಹೊದೆದುದಾ +ಬಲ +ಹಿಂಡೊಡೆದು +ನೆರೆ
ಕದುಬಿತ್+ಈ+ ಬಲ+ ನೆರೆದುದಾ +ಬಲ +ನರನ+ ರಥ+ ಸುಳಿಯೆ

ಅಚ್ಚರಿ:
(೧) ಈ ಬಲ, ಆ ಬಲ – ಪಾಂಡವ, ಕೌರವ ಸೈನ್ಯವನ್ನು ಕರೆದ ಪರಿ