ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು (ವಿರಾಟ ಪರ್ವ, ೧೧ ಸಂಧಿ, ೨ ಪದ್ಯ)
ತಾತ್ಪರ್ಯ:
ಸೂರ್ಯ ರಥಕ್ಕೆ ಕಟ್ಟಿದ ಏಳು ಕುದುರೆಗಳ ಖುರಪುಟದ ಹೊಡೆತದಿಂದೆದ್ದ ಕೆಂದೂಳೋ, ಕುಂತೀಪುತ್ರರ ಏಳಿಗೆಯನ್ನು ಸೂಚಿಸುವ ರಾಗರಸವೋ? ಪೂರ್ವ ದಿಗ್ಬಾಲಕಿಯ ಬೈತಲೆಗೆ ಹಚ್ಚಿದ ಕುಂಕುಮವೋ, ಎಂಬಂತೆ ಸೂರ್ಯರಶ್ಮಿಗಳು ಕಾಣಿಸಿದವು.
ಅರ್ಥ:
ಕುದುರೆ: ಅಶ್ವ; ಖುರಪುಟ:ಗೊರಸು, ಪ್ರಾಣಿಗಳ ಕೊಳಗು; ಕೆಂದೂಳಿ: ಕೆಂಪಾದ ಮಣ್ಣಿನ ಧೂಳು; ಏಳಿಗೆ: ಅಭಿವೃದ್ಧಿ; ತನಿ: ಹೆಚ್ಚಾಗು, ಅತಿಶಯವಾಗು; ಉಬ್ಬರ: ಅತಿಶಯ; ಪಸರಿಸು: ಹರಡು; ಹೇಳು: ತಿಳಿಸು; ಮಹೇಂದ್ರ: ಇಂದ್ರ; ವರದಿ: ಸುದ್ದಿ, ಸಮಾಚಾರ; ಬಾಲಕಿ: ಹೆಣ್ಣು; ಬೈತಲೆ: ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಕುಂಕುಮ: ಮಂಗಳ ದ್ರವ್ಯ; ಜಾಲ: ಸಮೂಹ; ಹೇಳು: ತಿಳಿಸು; ದಿನಪನ: ರವಿ, ಸೂರ್ಯ; ಚೂಣಿ: ಮುಂದಿನ ಸಾಲು, ಮುಂಭಾಗ; ರಂಜಿಸು: ಹೊಳೆ, ಪ್ರಕಾಶಿಸು;
ಪದವಿಂಗಡಣೆ:
ಏಳು +ಕುದುರೆಯ +ಖುರಪುಟದ +ಕೆಂ
ದೂಳಿಯೋ +ಕುಂತೀ+ ಕುಮಾರಕರ್
ಏಳಿಗೆಯ+ ತನಿರಾಗರಸ+ಉಬ್ಬರಿಸಿ +ಪಸರಿಸಿತೊ
ಹೇಳಲೇನು+ ಮಹೇಂದ್ರ +ವರದಿಗ್
ಬಾಲಕಿಯ +ಬೈತಲೆಯ+ ಕುಂಕುಮ
ಜಾಲವೋ +ಹೇಳೆನಲು +ದಿನಪನ+ ಚೂಣಿ +ರಂಜಿಸಿತು
ಅಚ್ಚರಿ:
(೧) ಉಪಮಾನದ ಪ್ರಯೋಗಗಳು – ಏಳು ಕುದುರೆಯ ಖುರಪುಟದ ಕೆಂದೂಳಿಯೋ, ಮಹೇಂದ್ರ ವರದಿ
ಗ್ಬಾಲಕಿಯ ಬೈತಲೆಯ ಕುಂಕುಮ ಜಾಲವೋ