ಪದ್ಯ ೫೨: ಅರ್ಜುನನು ವೈರಿಪಡೆಗೆ ಏನು ಹೇಳಿದ?

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುನಿಂದರು ಮತ್ತೆ ಕಾಳಗಕೆ
ಅರಸು ಮೋಹರ ಮುರಿದ ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ (ವಿರಾಟ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೆಂದೂಳಿನ್ನೆಬ್ಬಿಸುತ್ತಾ ವಿರಾಟನ ತುರುಗಳು ಊರಿಗೆ ಓಡುತ್ತಾ ಹೋದವು. ಉತ್ತರ ಅರ್ಜುನರಿಬ್ಬರೂ ಯುದ್ಧಕ್ಕೆ ಸಿದ್ಧರಾಗಿ ನಿಂತರು. ರಾಜನ ಸೈನ್ಯವು ಸೋತು ಹೋಯಿತು, ಈ ಅಪಮಾನವನ್ನು ತೊಡೆದು ಹಾಕಬಲ್ಲ ವೀರರನ್ನು ಯುದ್ಧಕ್ಕೆ ಬರಲು ಹೇಳು ಎಂದು ಅರ್ಜುನನು ಬಾಣವನ್ನು ತೂಗುತ್ತಾ ನಿಂತನು.

ಅರ್ಥ:
ತಿರುಗು: ಹಿಂದಿರುಗು; ಕೆಂದೂಳಿ: ಕೆಂಪಾದ ಧೂಳು; ತುರು: ಹಸು; ಪುರ: ಊರು; ಹಾಯ್ದು: ಚಲಿಸು; ನಲವು: ಸಂತೋಷ; ಕಾಳಗ: ಯುದ್ಧ; ಅರಸು: ರಾಜ; ಮೋಹರ: ಯುದ್ಧ; ಮುರಿ: ಸೀಳು; ಹರಿಬ: ಕೆಲಸ, ಕಾರ್ಯ; ಮರಳು: ಹಿಂದಕ್ಕೆ ಬರು; ಬಾಣ: ಶರ; ತೂಗು: ಅಲ್ಲಾಡಿಸು, ತೂಗಾಡಿಸು;

ಪದವಿಂಗಡಣೆ:
ತಿರುಗಿ +ಕೆಂದೂಳಿಡುತ +ತುರುಗಳು
ಪುರಕೆ+ ಹಾಯ್ದವು +ನಲವು +ಮಿಗಲ್
ಉತ್ತರ+ ಕಿರೀಟಿಗಳಾಂತು+ನಿಂದರು+ ಮತ್ತೆ +ಕಾಳಗಕೆ
ಅರಸು+ ಮೋಹರ +ಮುರಿದ +ಹರಿಬವ
ಮರಳಿಚುವ +ಮಿಡುಕುಳ್ಳ+ ವೀರರ
ಧುರಕೆ +ಬರಹೇಳೆನುತ +ಬಾಣವ +ತೂಗಿದನು +ಪಾರ್ಥ

ಅಚ್ಚರಿ:
(೧) ಯುದ್ಧಕ್ಕೆ ಆಹ್ವಾನವನ್ನು ನೀಡುವ ಪರಿ – ಅರಸು ಮೋಹರ ಮುರಿದ ಹರಿಬವ ಮರಳಿಚುವ ಮಿಡುಕುಳ್ಳ ವೀರರ ಧುರಕೆ ಬರಹೇಳೆನುತ

ನಿಮ್ಮ ಟಿಪ್ಪಣಿ ಬರೆಯಿರಿ