ಪದ್ಯ ೧೬: ಕೃಷ್ಣನು ಯಾವ ವಿದ್ಯೆಯಲ್ಲಿ ನಿಸ್ಸೀಮನೆಂದು ಭೂರಿಶ್ರವನು ಹೇಳಿದನು?

ಅರಿದರೀ ವಿದ್ಯವನು ಕೃಷ್ಣನೊ
ಳರಿದೆಯಾಗಲು ಬೇಕು ಕಪಟದ
ನೆರೆವಣಿಗೆಗಳನು ಅರಿಯರಿಂದ್ರ ದ್ರೋಣ ಶಂಕರರು
ಮರೆ ಮರೆಯಲಿರಿಗಾರನಸುರರ
ಮುರಿದನೆಂಬರು ಕುಹಕತಂತ್ರದ
ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ (ದ್ರೋಣ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಈ ವಿದ್ಯೆಯನು ಅರಿತದ್ದು ಕೃಷ್ಣನಿಂದಲೇ ಇರಬೇಕು. ಕಪಟ ವಿದ್ಯೆಗಳನ್ನು ಇಂದ್ರ, ದ್ರೋಣ, ಶಿವರು ಅರಿಯರು, ಕೃಷ್ಣನು ಮರೆಯಿರಿಗಾರ, ಮೋಸದ ತಂತ್ರಗಳನ್ನು ಮಾಡುವ ಇವನ ಸಂಗದಿಂದ ನೀವು ಅಯ್ಯೋ ಹಾಳಾದಿರಿ ಎಂದು ಭೂರಿಶ್ರವನು ಹೇಳಿದನು.

ಅರ್ಥ:
ಅರಿ: ತಿಳಿ; ವಿದ್ಯ: ಜ್ಞಾನ; ಕಪಟ: ಮೋಸ; ನೆರವಣಿಗೆ: ಪರಿಪೂರ್ಣತೆ, ಒಳ್ತನ; ಶಂಕರ: ಶಿವ; ಮರೆ: ಗುಟ್ಟು, ನೆನಪಿನಿಂದ ದೂರ ಮಾಡು; ಇರಿ: ಕರೆ, ಜಿನುಗು; ಅಸುರರ: ರಾಕ್ಷಸ; ಮುರಿ: ಸೀಳು; ಕುಹಕ: ಮೋಸ; ತಂತ್ರ: ಉಪಾಯ; ಹೊರಿಗೆ: ಹೊಣೆಗಾರಿಕೆ, ಭಾರ; ಸಂಗ: ಜೊತೆ; ಕೆಡು: ಹಾಳು; ಅಕಟ: ಅಯ್ಯೋ;

ಪದವಿಂಗಡಣೆ:
ಅರಿದರ್+ಈ+ ವಿದ್ಯವನು+ ಕೃಷ್ಣನೊಳ್
ಅರಿದೆಯಾಗಲು+ ಬೇಕು +ಕಪಟದ
ನೆರೆವಣಿಗೆಗಳನು +ಅರಿಯರ್+ಇಂದ್ರ +ದ್ರೋಣ +ಶಂಕರರು
ಮರೆ +ಮರೆಯಲಿರಿಗಾರನ್+ಅಸುರರ
ಮುರಿದನೆಂಬರು +ಕುಹಕ+ತಂತ್ರದ
ಹೊರಿಗೆವಾಳನ +ಸಂಗದಲಿ+ ನೀವ್+ ಕೆಟ್ಟರ್+ಅಕಟೆಂದ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಕುಹಕತಂತ್ರದ ಹೊರಿಗೆವಾಳನ ಸಂಗದಲಿ ನೀವ್ ಕೆಟ್ಟರಕಟೆಂದ

ಪದ್ಯ ೫: ಸಂಜಯನು ಧೃತರಾಷ್ಟ್ರನಿಗೆ ಹೇಗೆ ತನ್ನ ತಪ್ಪನ್ನು ತೋರಿದನು?

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ (ದ್ರೋಣ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಸಂಜಯನು ಮಾತನಾಡುತ್ತಾ, ರಾಜ ನೀನೇಕೆ ಈಗ ದುಃಖಿಸುವೆ? ಅವಿವೇಕತನದಿಂದ ಮಗನನ್ನು ಉಬ್ಬಿಸಿ, ಬೆಳೆಸಿ, ಕುಹಕದ ಕುಟಿಲದ ವಿದ್ಯೆಗಳನ್ನು ಕಲಿಸಿದೆ, ವಿವೇಕಿಗಳಿಗೆ ವೀರರಿಗೆ ನಿಮ್ಮಲ್ಲಿ ಸ್ಥಳವಿಲ್ಲ, ಈಗ ದುಃಖಿಸಿ ಏನು ಬಂತು? ಸಹಿಸಿಕೋ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಶೋಕ: ದುಃಖ; ಜೀಯ: ಒಡೆಯ; ಅವಿವೇಕ: ಯುಕ್ತಾಯುಕ್ತ ವಿಚಾರವಿಲ್ಲದ; ಮಗ: ಸುತ; ಹೆಚ್ಚಿಸು: ಏರಿಸು; ಸಾಕು: ಸಲಹು, ರಕ್ಷಿಸು; ಕಲಿಸು: ಹೇಳಿಕೊಟ್ಟ; ಕುಟಿಲ: ಮೋಸ, ವಂಚನೆ; ಕುಹಕ: ಮೋಸ, ವಂಚನೆ; ವಿದ್ಯೆ: ಜ್ಞಾನ; ಆಕೆವಾಳ: ವೀರ, ಪರಾಕ್ರಮಿ; ಹೊರಿಗೆ: ಭಾರ, ಹೊರೆ, ಹೊಣೆಗಾರಿಕೆ; ವಿವೇಕ: ಯುಕ್ತಾಯುಕ್ತ ವಿಚಾರ; ಸಲ್ಲು: ಸರಿಹೊಂದು; ಸಾಕು: ತಡೆ; ಸೈರಿಸು: ತಾಳು; ನೃಪ: ರಾಜ;

ಪದವಿಂಗಡಣೆ:
ಶೋಕವೇತಕೆ+ ಜೀಯ +ನೀನ್+ಅವಿ
ವೇಕಿತನದಲಿ +ಮಗನ +ಹೆಚ್ಚಿಸಿ
ಸಾಕಿ +ಕಲಿಸಿದೆ+ ಕುಟಿಲತನವನು+ ಕುಹಕ +ವಿದ್ಯೆಗಳ
ಆಕೆವಾಳರು +ಹೊರಿಗೆಯುಳ್ಳ +ವಿ
ವೇಕಿಗಳು+ ನಿಮ್ಮಲ್ಲಿ+ಸಲ್ಲರು
ಸಾಕ್+ಇದೇತಕೆ +ಸೈರಿಸೆಂದನು+ ಸಂಜಯನು +ನೃಪನ

ಅಚ್ಚರಿ:
(೧) ಅವಿವೇಕ, ವಿವೇಕ – ವಿರುದ್ಧ ಪದಗಳು
(೨) ಕ ಕಾರದ ತ್ರಿವಳಿ ಪದ – ಕಲಿಸಿದೆ ಕುಟಿಲತನವನು ಕುಹಕ
(೩) ಸ ಕಾರದ ಸಾಲು ಪದ – ಸಲ್ಲರು ಸಾಕಿದೇತಕೆ ಸೈರಿಸೆಂದನು ಸಂಜಯನು

ಪದ್ಯ ೧೫: ಸೈನಿಕರಿಗೆ ಯಾವುದು ಅಡ್ಡಿಯೊಡ್ಡಿತು?

ಚೂಣಿ ತಲೆಯೊತ್ತಿದುದು ಹರಣದ
ವಾಣಿ ಕೇಣಿಯ ಕುಹಕವಿಲ್ಲದೆ
ಗೋಣುಮಾರಿಗಳೋಲಗದ ಹಣರುಣವ ನೀಗಿದರು
ಹೂಣಿಗರು ಹುರಿಬಲಿದು ಹಾಣಾ
ಹಾಣಿಯಲಿ ಹೊಯ್ಯಾಡಿದರು ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ (ಭೀಷ್ಮ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮುಂದಿದ್ದ ಸೈನ್ಯದ ತುಕಡಿಗಳು ತಲೆಗೆ ತಲೆಯೊಡ್ಡಿ ಯಾವ ಮಿತಿಯೂ ಇಲ್ಲದ ರಭಸದಿಂದ ತಮ್ಮ ಕತ್ತುಗಳನ್ನು ಮಾರಿ ಒಡೆಯನ ಋಣವನ್ನು ಕಳೆದುಕೊಂಡರು. ಶಪಥ ಮಾಡಿ ಯುದ್ಧಕ್ಕಿಳಿದರು, ಹುರಿಯ ಮೂರು ಭಾಗಗಳು ಹೊಂದಿದಂತೆ ಯುದ್ಧದಲ್ಲಿ ಶತ್ರುಗಳೊಡನೆ ಹಾಣಾಹಾಣಿ ಕಾಳಗವನ್ನು ಮಾಡಿದರು. ಆ ಸಮರದಲ್ಲಿ ಹರಿದ ರಕ್ತ ಪ್ರವಾಹವು ಯುದ್ಧಕ್ಕೆ ಬರುವವರಿಗೆ ಅಡ್ಡಿಯಾಯಿತು.

ಅರ್ಥ:
ಚೂಣಿ: ಮುಂದಿನ ಸಾಲು, ಮುಂಭಾಗ; ತಲೆ: ಶಿರ; ಒತ್ತು: ಆಕ್ರಮಿಸು, ಮುತ್ತು, ಒತ್ತಡ; ಹರಣ: ಜೀವ, ಪ್ರಾಣ, ಅಪಹರಿಸು; ವಾಣಿ: ಮಾತು; ಕೇಣಿ: ಗುತ್ತಿಗೆ, ಗೇಣಿ; ಕುಹಕ: ಮೋಸ, ವಂಚನೆ; ಗೋಣು: ಕಂಠ, ಕುತ್ತಿಗೆ; ಮಾರಿ:ಅಳಿವು, ನಾಶ, ಮೃತ್ಯು; ಓಲಗ: ಅಗ್ರಪೂಜೆಗಾಗಿ ಕೂಡಿದ, ಸೇವೆ; ಉಣು: ತಿನ್ನು; ನೀಗು:ನಿವಾರಿಸಿಕೊಳ್ಳು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ; ಹುರಿ: ಕಾಯಿಸು, ತಪ್ತಗೊಳಿಸು; ಬಲಿ: ಗಟ್ಟಿ, ದೃಢ; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಘನ:ಶ್ರೇಷ್ಠ; ಶೋಣ:ಕೆಂಪು ಬಣ್ಣ; ಸಲಿಲ: ನೀರು; ಶೋಣ ಸಲಿಲ: ರಕ್ತ; ಹೊನಲು: ತೊರೆ, ಹೊಳೆ; ಹೊಯ್ದು: ಹೊಡೆದು; ಹೊಗು: ಪ್ರವೇಶಿಸು; ಬವರಿ: ತಿರುಗುವುದು;

ಪದವಿಂಗಡಣೆ:
ಚೂಣಿ +ತಲೆ+ಒತ್ತಿದುದು +ಹರಣದ
ವಾಣಿ +ಕೇಣಿಯ +ಕುಹಕವಿಲ್ಲದೆ
ಗೋಣು+ಮಾರಿಗಳ್+ಓಲಗದ +ಹಣರ್+ಉಣವ +ನೀಗಿದರು
ಹೂಣಿಗರು+ ಹುರಿಬಲಿದು +ಹಾಣಾ
ಹಾಣಿಯಲಿ +ಹೊಯ್ಯಾಡಿದರು +ಘನ
ಶೋಣ +ಸಲಿಲದ +ಹೊನಲು +ಹೊಯ್ದುದು +ಹೊಗುವ +ಬವರಿಗರ

ಅಚ್ಚರಿ:
(೧) ಯುದ್ಧದ ಘೋರತೆಯ ದೃಶ್ಯ, ರಕ್ತವು ನದಿಯಾಗಿ ಹರಿಯಿತು ಎಂದ್ ಹೇಳುವ ಪರಿ – ಘನ
ಶೋಣ ಸಲಿಲದ ಹೊನಲು ಹೊಯ್ದುದು ಹೊಗುವ ಬವರಿಗರ
(೨) ಹ ಕಾರದ ಸಾಲು ಪದಗಳು – ಹೂಣಿಗರು ಹುರಿಬಲಿದು ಹಾಣಾಹಾಣಿಯಲಿ ಹೊಯ್ಯಾಡಿದರು; ಹೊನಲು ಹೊಯ್ದುದು ಹೊಗುವ ಬವರಿಗರ

ಪದ್ಯ ೨೨: ಧೃತರಾಷ್ಟ್ರನು ಯಾರನ್ನು ಕರೆಸುವೆನೆಂದನು?

ಅಹುದು ಮಂತ್ರವಿದೆಂದು ಚಿತ್ತಕೆ
ಬಹರೆ ಕಳುಹಿ ಮನುಷ್ಯರನು ಕರೆ
ಸಹಿತರನು ವಿದುರಾದಿಗಳ ಕೊಂಡೆಯಕೆ ಕಿವಿಗೊಡದೆ
ಕುಹಕವುಂಟೇ ನಮ್ಮ ಕಳುಹುವು
ದಹ ಮತವ ಬೆಸಸೆನಲಿ ನಿಮ್ಮೊಳು
ಕುಹಕವುಂಟೇ ಮಗನೆ ಕರೆಸುವೆನೀಗ ಪಾಂಡವರ (ಸಭಾ ಪರ್ವ, ೧೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಕುತಂತ್ರದ ವಿಚಾರವನ್ನು ಧೃತರಾಷ್ಟ್ರನ ಮುಂದಿಟ್ಟು, ನಾನು ಹೇಳುವುದು ಸರಿಯೆನ್ನಿಸಿದರೆ, ಆಳುಗಳನ್ನು ಕಳಿಸಿ ಪಾಂಡವರನ್ನು ಕರೆಸು, ವಿದುರನೇ ಮೊದಲಾದವರ ಚಾಡಿಮಾತುಗಳನ್ನು ಕೇಳಬೇಡ. ಇದು ವಂಚನೆಯೆನ್ನಿಸಿದರೆ ನಮ್ಮನ್ನು ಕಳಿಸಿಬಿಡು ಎಂದು ದುರ್ಯೋಧನನು ಹೇಳಲು, ಧೃತರಾಷ್ಟ್ರನು ನಿಮ್ಮಲ್ಲಿ ಮೋಸವೇ ಎಂದು ಹೇಳಿ ಅವರ ವಿಚಾರಕ್ಕೆ ಒಪ್ಪಿಗೆ ಸೂಚಿಸುವ ಪರಿಯಲ್ಲಿ ಪಾಂಡವರನ್ನು ಕರೆಸುತ್ತೇನೆಂದನು.

ಅರ್ಥ:
ಮಂತ್ರ: ವಿಚಾರ; ಚಿತ್ತ: ಮನಸ್ಸು; ಬಹರು: ಬರುವುದು; ಕಳುಹು: ಕಳಿಸು, ಬೀಳ್ಕೊಡು; ಮನುಷ್ಯ: ಸೇವಕ, ನರ; ಕರೆ: ಬರೆಮಾಡು; ಸಹಿತ: ಜೊತೆ; ಆದಿ: ಮೊದಲಾದ; ಕೊಂಡೆ: ಕೊಕ್ಕೆ; ಕಿವಿಗೊಡದೆ: ಆಲಿಸಬೇಡ; ಕುಹಕ: ಮೋಸ, ವಂಚನೆ; ಕಳುಹು: ಬೀಳ್ಕೊಡು; ಮತ: ವಿಚಾರ; ಬೆಸ: ಕಾರ್ಯ; ಬೆಸಸು: ಅಪ್ಪಣೆಮಾಡು; ಕರೆಸು: ಬರೆಮಾಡು; ಅಹಿತ: ವೈರಿ;

ಪದವಿಂಗಡಣೆ:
ಅಹುದು +ಮಂತ್ರವಿದೆಂದು +ಚಿತ್ತಕೆ
ಬಹರೆ +ಕಳುಹಿ +ಮನುಷ್ಯರನು +ಕರೆಸ್
ಅಹಿತರನು +ವಿದುರಾದಿಗಳ+ ಕೊಂಡೆಯಕೆ+ ಕಿವಿಗೊಡದೆ
ಕುಹಕವುಂಟೇ +ನಮ್ಮ +ಕಳುಹುವುದ್
ಅಹ+ ಮತವ +ಬೆಸಸೆನಲಿ+ ನಿಮ್ಮೊಳು
ಕುಹಕವುಂಟೇ +ಮಗನೆ +ಕರೆಸುವೆನ್+ಈಗ +ಪಾಂಡವರ

ಅಚ್ಚರಿ:
(೧) ಪಾಂಡವರನ್ನು ಅಹಿತರು ಎಂದು ಕರೆದಿರುವುದು
(೨) ಕುಹಕವುಂಟೇ ಪದದ ಬಳಕೆ, ೪, ೬ ಸಾಲಿನ ಮೊದಲ ಪದ

ಪದ್ಯ ೨೧: ದುರ್ಯೋಧನನು ದುಶ್ಯಾಸನನಿಗೆ ಏನೆಂದು ಆಜ್ಞಾಪಿಸಿದನು?

ಅಹುದಲೇ ಬಳಿಕೇನು ನೀನ ತಿ
ಬಹಳ ಮತಿಯೈ ಕರ್ಣ ನೀನೀ
ಕುಹಕ ಕೋಟಿಯನೆತ್ತ ಬಲ್ಲೆ ವೃಥಾಭಿಮಾನಿಗಳ
ರಹಣಿ ಸಾಕಂತಿರಲಿ ತೊತ್ತಿರ
ಸಹಚರರ ಸೂಳಾಯಿತರ ಕರೆ
ಮಹಿಳೆಯನು ನೂಕೆಂದು ದುಶ್ಯಾಸನಗೆ ನೇಮಿಸಿದ (ಸಭಾ ಪರ್ವ, ೧೬ ಸಂಧಿ, ೨೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಕರ್ಣನ ಮಾತನ್ನು ಸಮರ್ಥಿಸುತ್ತಾ, ಕರ್ಣ ವಿಶಾಲಬುದ್ಧಿಯುಳ್ಳ ನಿನ್ನ ಮಾತು ಸರಿಯಾಗಿದೆ, ಈ ದುರಭಿಮಾನಿಗಳಾದ ಪಾಂಡವರ ಮೋಸಗಳು ನಿನಗೇನು ಗೊತ್ತು, ಅವರ ದುರ್ಮಾರ್ಗಗಳು ಅವರಿಗೇ ಇರಲಿ, ಎಂದು ದುಶ್ಯಾಸನನ್ನು ಕರೆದು ದಾಸಿಯರ ಭವನದಲ್ಲಿ ಸಹಾರರು, ಅವರ ವೇಳೆಗಳನ್ನು ಸರದಿಗಳನ್ನು ಗೊತ್ತುಪಡಿಸುವವರು ಬರಲಿ, ಈ ಹೆಣ್ಣನ್ನು ದಾಸಿಯರ ಭವನಕ್ಕೆ ನೂಕೆಂದು ದುರ್ಯೋಧನನು ದುಶ್ಯಾಸನನಿಗೆ ಆಜ್ಞಾಪಿಸಿದನು.

ಅರ್ಥ:
ಬಳಿಕ: ನಂತರ; ಬಹಳ: ತುಂಬ; ಮತಿ: ಬುದ್ಧಿ; ಕುಹಕ: ಮೋಸ, ವಂಚನೆ; ಕೋಟಿ: ವರ್ಗ, ಕೊನೆ; ಬಲ್ಲೆ: ತಿಳಿ; ವೃಥ: ಸುಮ್ಮನೆ; ಅಭಿಮಾನಿ: ಪ್ರೀತಿಯುಳ್ಳವನು; ರಹಣಿ: ಹೊಂದಿಕೆ, ಕ್ರಮ; ಸಾಕು: ಕೊನೆ, ಅಂತ್ಯ; ತೊತ್ತು: ದಾಸ; ಸಹಚರ: ಅನುಚರ, ಸೇವಕ; ಸೂಳಾಯತ: ಓಲೆಯಕಾರ; ಕರೆ: ಬರೆಮಾಡು; ಮಹಿಳೆ: ಸ್ತ್ರೀ; ನೂಕು: ತಳ್ಳು; ನೇಮಿಸು: ಅಜ್ಞಾಪಿಸು;

ಪದವಿಂಗಡಣೆ:
ಅಹುದಲೇ+ ಬಳಿಕೇನು +ನೀನ್+ಅತಿ
ಬಹಳ +ಮತಿಯೈ +ಕರ್ಣ +ನೀನ್+ಈ
ಕುಹಕ+ ಕೋಟಿಯನೆತ್ತ+ ಬಲ್ಲೆ +ವೃಥ+ಅಭಿಮಾನಿಗಳ
ರಹಣಿ+ ಸಾಕಂತಿರಲಿ+ ತೊತ್ತಿರ
ಸಹಚರರ+ ಸೂಳಾಯಿತರ+ ಕರೆ
ಮಹಿಳೆಯನು +ನೂಕೆಂದು +ದುಶ್ಯಾಸನಗೆ+ ನೇಮಿಸಿದ

ಅಚ್ಚರಿ:
(೧) ದುರ್ಯೋಧನನು ಪಾಂಡವರನ್ನು ನೋಡುವ ಪರಿ – ಕುಹಕ ಕೋಟಿಯನೆತ್ತ ಬಲ್ಲೆ, ವೃಥಾಭಿಮಾನಿಗಳ ರಹಣಿ

ಪದ್ಯ ೫೬: ಪ್ರಾತಿಕಾಮಿಕ ಮತ್ತು ದ್ರೌಪದಿಯ ನಡುವೆ ಯಾವ ಸಂಭಾಷಣೆಯಾಯಿತು?

ಅಹುದು ತನ್ನನು ಮುನ್ನ ಸೋತನು
ಮಹಿಳೆಗೊಡ್ಡಿದೆನೆಂದು ನಿಮ್ಮನು
ಮಹಿಪ ಸೋತನು ತಾಯೆ ಬಿಜಯಂಗೈಯಬೇಹುದೆನೆ
ವಿಹಿತವಿದು ಮಾನುಷವೆ ದೈವದ
ಕುಹಕವೈಸಲೆ ಮಗನೆ ತಾನೇ
ಬಹೆನು ನೀ ಹೋಗೊಮ್ಮೆ ಹೇಳೀ ಮಾತನಾ ಸಭೆಗೆ (ಸಭಾ ಪರ್ವ, ೧೫ ಸಂಧಿ, ೫೬ ಪದ್ಯ)

ತಾತ್ಪರ್ಯ:
ಹೌದು ತಾಯೆ ರಾಜನು ಮೊದಲು ತನ್ನನ್ನು ಸೋತು ಆಮೇಲೆ ನಿಮ್ಮನ್ನು ಪಣವಾಗಿ ಜೂಜಿನಲ್ಲಿಟ್ಟು ಸೋತನು, ತಾಯೆ ನೀವು ಕೌರವನ ಆಸ್ಥಾನಕ್ಕೆ ಬೇಗನೇ ಬನ್ನಿ ಎಂದು ಪ್ರಾತಿಕಾಮಿಕನು ಹೇಳಲು, ದ್ರೌಪದಿಯು ಇದು ಮನುಷ್ಯರ ಕಾರ್ಯವಲ್ಲ, ಇದರಲ್ಲಿ ದೈವದ ಕುಹಕವಿದೆ ಎಂದು ತಿಳಿದು, ನಾನೇ ಸಭೆಗೆ ಬರುತ್ತೇನೆ ಅದಕ್ಕಿಂತ ಮುಂಚೆ ನೀನು ಹೋಗಿ ಈ ಮಾತನ್ನು ಸಭೆಗೆ ತಿಳಿಸು ಎಂದಳು.

ಅರ್ಥ:
ಅಹುದು: ಹೌದು; ಮುನ್ನ: ಮೊದಲು; ಸೋಲು: ಪರಾಭಾ; ಮಹಿಳೆ: ಹೆಣ್ಣು; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ಮಹಿಪ: ರಾಜ; ಬಿಜಯಂಗೈ: ದಯಮಾಡಿಸು, ಹೊರಡು; ವಿಹಿತ: ಯೋಗ್ಯ, ಔಚಿತ್ಯ; ಮಾನುಷ: ಮನುಷ್ಯ; ದೈವ: ಭಗವಂತ; ಕುಹಕ: ಮೋಸ, ವಂಚನೆ; ಮಗ: ಸುತ; ಬಹೆನು: ಬರುವೆ; ಹೋಗು: ತೆರಳು; ಹೇಳು: ತಿಳಿಸು; ಮಾತು: ವಾಣಿ; ಸಭೆ: ಓಲಗ;

ಪದವಿಂಗಡಣೆ:
ಅಹುದು +ತನ್ನನು +ಮುನ್ನ +ಸೋತನು
ಮಹಿಳೆಗ್+ಒಡ್ಡಿದೆನ್+ಎಂದು +ನಿಮ್ಮನು
ಮಹಿಪ+ ಸೋತನು+ ತಾಯೆ +ಬಿಜಯಂಗೈಯಬೇಹುದ್+ಎನೆ
ವಿಹಿತವಿದು +ಮಾನುಷವೆ +ದೈವದ
ಕುಹಕವ್+ಐಸಲೆ +ಮಗನೆ +ತಾನೇ
ಬಹೆನು+ ನೀ +ಹೋಗ್+ಒಮ್ಮೆ +ಹೇಳ್+ಈ+ ಮಾತನ್+ಆ+ ಸಭೆಗೆ

ಅಚ್ಚರಿ:
(೧) ದ್ರೌಪದಿಯ ತಿಳುವಳಿಕೆ – ವಿಹಿತವಿದು ಮಾನುಷವೆ ದೈವದ ಕುಹಕವೈಸಲೆ

ಪದ್ಯ ೩೨: ಧೃತರಾಷ್ಟ್ರನ ಮನವು ಹೇಗಿತ್ತು?

ಹಾಸಗರ್ವದ ಮೋನದಲಿ ಸಂ
ತೋಷಗರ್ವದ ದುಗುಡದಲಿ ಸುವಿ
ಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾ
ವಾಸ ಗೃಹ ಧೃತರಾಷ್ಟ್ರನಿದ್ದನು ವಿಕೃತಭಾವದಲಿ (ಸಭಾ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮನಸ್ಸಿನ ಚಿತ್ರಣದ ಸೊಗಸಾಗಿ ಇಲ್ಲಿ ವರ್ಣಿಸಲಾಗಿದೆ. ಮೌನದಿಂದ ಒಳಗೇ ನಗುತ್ತಾ, ನೋಟಕ್ಕೆ ದುಃಖಿಸುತ್ತಾ ಒಳಗೇ ಸಂತೋಷಪಡುತ್ತಾ ಖೇದದಲ್ಲಿ ಸಂಭ್ರಮದ ಗರ್ವವನ್ನು ಮುಚ್ಚಿಟ್ಟು ಚಿಂತೆಯಲ್ಲಿ ತನ್ನ ಮಕ್ಕಳೀಗ ಏಕಚತ್ರಾಧಿಪತಿಗಳೆಂಬ ಆನಂದದಲ್ಲಿ, ಪಾಂಡವರ ಒಡೆಯರಾದರೆಂಬ ಗರ್ವವನ್ನು ಮನದೊಳಗೆ ಹುದುಗಿಸಿ, ಠಕ್ಕಿನ ಗಣಿಯೂ, ಕುಟಿಲೋಪಾಯದ ಕುಹಕದ ವಾಸಗೃಹವೂ ಆಗಿದ್ದ ಧೃತರಾಷ್ಟ್ರನು ಮನೋವಿಕಾರದಲ್ಲಿ ಮುಳುಗಿದ್ದನು.

ಅರ್ಥ:
ಹಾಸ: ಸಂತೋಷ, ಪಾಶ; ವರ್ಗ: ಗುಂಫು; ಮೋನ: ಮೌನ; ಸಂತೋಷ: ಹರ್ಷ; ದುಗುಡ: ದುಃಖ; ವಿಲಾಸ: ಕ್ರೀಡೆ, ವಿಹಾರ, ಅಂದ; ಗರ್ವ: ಅಹಂಕಾರ; ಖೇದ: ದುಃಖ, ಉಮ್ಮಳ; ಮದ: ಮತ್ತು, ಅಮಲು; ಚಿಂತೆ: ಯೋಚನೆ; ವೈಸಿಕ: ಠಕ್ಕು, ಮೋಸ; ಕಣಿ: ನೋಟ, ಕಾಣ್ಕೆ; ಕುಟಿಲ: ಮೋಸ, ವಂಚನೆ; ಮಂತ್ರ: ವಿಚಾರ, ಆಲೋಚನೆ; ಮೀಸಲು: ಮುಡಿಪು, ಪ್ರತ್ಯೇಕ; ಕುಹಕ: ಮೋಸ, ವಂಚನೆ; ವಿದ್ಯಾ: ಜ್ಞಾನ; ವಾಸ: ಮನೆ, ವಾಸಸ್ಥಳ; ಗೃಹ: ಮನೆ; ವಿಕೃತ: ಬದಲಾದವನು; ಭಾವ: ಭಾವನೆ, ಚಿತ್ತವೃತ್ತಿ; ಅಳಿ: ಕೊನೆ;

ಪದವಿಂಗಡಣೆ:
ಹಾಸ+ಗರ್ವದ+ ಮೋನದಲಿ+ ಸಂ
ತೋಷ+ಗರ್ವದ +ದುಗುಡದಲಿ +ಸುವಿ
ಳಾಸ +ಗರ್ವದ +ಖೇದದಲಿ+ ಮದಗರ್ವ +ಚಿಂತೆಯಲಿ
ವೈಸಿಕದ +ಕಣಿ +ಕುಟಿಲ +ಮಂತ್ರದ
ಮೀಸಲಳಿಯದ +ಕುಹಕ+ ವಿದ್ಯಾ
ವಾಸ +ಗೃಹ +ಧೃತರಾಷ್ಟ್ರನಿದ್ದನು +ವಿಕೃತ+ಭಾವದಲಿ

ಅಚ್ಚರಿ:
(೧) ದ್ವಂದ್ವ ಭಾವವನ್ನು ವಿವರಿಸುವ ಪರಿ – ಹಾಸಗರ್ವದ ಮೋನದಲಿ ಸಂತೋಷಗರ್ವದ ದುಗುಡದಲಿ ಸುವಿಳಾಸ ಗರ್ವದ ಖೇದದಲಿ ಮದಗರ್ವ ಚಿಂತೆಯಲಿ
(೨) ಧೃತರಾಷ್ಟ್ರನ ಮನೋವಿಕಾರವನ್ನು ವಿವರಿಸುವ ಪರಿ – ವೈಸಿಕದ ಕಣಿ ಕುಟಿಲ ಮಂತ್ರದ
ಮೀಸಲಳಿಯದ ಕುಹಕ ವಿದ್ಯಾವಾಸ ಗೃಹ ಧೃತರಾಷ್ಟ್ರನಿದ್ದನು ವಿಕೃತಭಾವದಲಿ

ಪದ್ಯ ೩೫: ಧರ್ಮಜನು ಶಕುನಿಗೆ ಏನು ಉತ್ತರವಿನ್ನಿತ್ತನು?

ಅಹುದು ಹೊಲ್ಲೆಹವಾವುದಾಡಲು
ಬಹುದು ಸುಜನರ ಕೂಡೆ ನೀವೇ
ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು
ಸಹೃದಯರಿಗತಿ ಕುಟಿಲರಲಿ ನಿ
ಸ್ಪೃಹರಿಗತಿರಾಗಿಗಳೊಡನೆ ದು
ಸ್ಸಹಕಣಾ ಸಮ್ಮೇಳವೆಂದನು ಧರ್ಮಸುತ ನಗುತ (ಸಭಾ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶಕುನಿಯ ಹಂಗಿಸುವ ನುಡಿಗೆ ಧರ್ಮರಾಯನು, ಶಕುನಿ ನೀವು ಹೇಳಿದ್ದು ನಿಜ, ಸಜ್ಜನರ ಜೊತೆಗೆ ಪಗಡೆಯಾಡಬಹುದು. ನೀವಿಬ್ಬರೂ (ಶಕುನಿ, ದುರ್ಯೋಧನ) ಕುಹಕವಿದ್ಯಾ ಸಾರ್ವಭೌಮರು. ಸಹೃದಯರಿಗೂ, ಮೋಸಗಾರರಿಗೂ, ಅತಿಯಾದ ಆಸೆಯುಳ್ಳವರಿಗೂ, ನಿಸ್ಪೃಹರಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಧರ್ಮಜನು ನಗುತ್ತಾ ಹೇಳಿದನು.

ಅರ್ಥ:
ಅಹುದು: ಹೌದು; ಹೊಲ್ಲ: ಹೀನ ವ್ಯಕ್ತಿ, ಕೆಟ್ಟವನು; ಸುಜನ: ಒಳ್ಳೆಯ ವ್ಯಕ್ತಿ; ಕುಹಕ: ಮೋಸ, ವಂಚನೆ; ಸಾರ್ವಭೌಮ: ಚಕ್ರವರ್ತಿ; ಸಹೃದಯ: ಒಳ್ಳೆಯ ವ್ಯಕ್ತಿ; ಕುಟಿಲ: ಕೆಟ್ಟ, ನೀಚ; ನಿಸ್ಪೃಹ: ಆಸೆ ಇಲ್ಲದವ; ರಾಗಿ: ಭೋಗಭಾಗ್ಯಗಳಲ್ಲಿ ಅನುರಾಗವುಳ್ಳ; ದುಸ್ಸಹ: ಸಹಿಸಲಸಾಧ್ಯವಾದ; ಸಮ್ಮೇಳ: ಸಹವಾಸ; ನಗು: ಸಂತಸ;

ಪದವಿಂಗಡಣೆ:
ಅಹುದು +ಹೊಲ್ಲೆಹವಾವುದ್+ಆಡಲು
ಬಹುದು+ ಸುಜನರ+ ಕೂಡೆ +ನೀವೇ
ಕುಹಕ+ ವಿದ್ಯಾ+ಸಾರ್ವಭೌಮರು +ಶಕುನಿ +ಕೌರವರು
ಸಹೃದಯರಿಗ್+ಅತಿ +ಕುಟಿಲರಲಿ+ ನಿ
ಸ್ಪೃಹರಿಗ್+ಅತಿರಾಗಿಗಳ್+ಒಡನೆ+ ದು
ಸ್ಸಹಕಣಾ +ಸಮ್ಮೇಳವೆಂದನು +ಧರ್ಮಸುತ +ನಗುತ

ಅಚ್ಚರಿ:
(೧) ಸಹೃದಯ, ಕುಟಿಲ, ನಿಸ್ಪೃಹ, ಅತಿರಾಗಿ – ವಿವಿಧ ಜನರ ಸ್ವಭಾವ
(೨) ಶಕುನಿಯನ್ನು ಕರೆದ ಬಗೆ – ನೀವೇ ಕುಹಕ ವಿದ್ಯಾ ಸಾರ್ವಭೌಮರು ಶಕುನಿ ಕೌರವರು

ಪದ್ಯ ೬೧: ಧೃತರಾಷ್ಟ್ರ ಯಾರ ಜೊತೆ ಉಪಾಯವನ್ನು ವಿಮರ್ಶಿಸುವುದು ಒಳಿತೆಂದನು?

ಅಹುದು ತಪ್ಪೇನಿದುವೆ ಸಾಧನ
ವಹುದು ವಿದುರನ ಬುದ್ಧಿಗಭಿಮತ
ವಹಡೆ ಕರೆಸುವೆವೈಸಲೇ ಬೆಸಸುವೆನು ವಿದುರಂಗೆ
ಕುಹಕವಾತನಲಿಲ್ಲ ನೋಡುವ
ನಿಹಪರತ್ರದ ಹಿತವನಿದ ನಿ
ರ್ವಹಿಸಿ ಕೊಡುವರೆ ಮಂತ್ರವೆಂದನು ಮಗಗೆ ಧೃತರಾಷ್ಟ್ರ (ಸಭಾ ಪರ್ವ, ೧೩ ಸಂಧಿ, ೬೧ ಪದ್ಯ)

ತಾತ್ಪರ್ಯ:
ತನ್ನ ಮಗನ ವಿಚಾರವನ್ನು ಕೇಳಿ, ಹೌದು ನೀನು ಹೇಳುತ್ತಿರುವುದು ಸರಿಯಾಗಿದೆ, ಇದರಲ್ಲೇನು ತಪ್ಪಿಲ್ಲ. ಸರಿಯಾದ ಮಾರ್ಗವೇನೋ ಹೌದು, ವಿದುರನನ್ನು ಕರೆಸಿ ಕೇಳುತ್ತೇನೆ, ವಿದುರನು ಇಹಪರಗಳಿಗೆ ಹಿತವಾವುದು ಎಂದು ಬಲ್ಲವನು. ಆತ ಕುಹಕಿಯಲ್ಲ, ಅವನು ಇದಕ್ಕೆ ಒಪ್ಪಿದರೆ ಇದೇ ಸರಿಯಾದ ಆಲೋಚನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ಸರಿಯಿಲ್ಲದ; ಸಾಧನ: ಸಾಧಿಸುವಿಕೆ, ಗುರಿಮುಟ್ಟುವಿಕೆ; ಬುದ್ಧಿ: ಚಿತ್ತ, ಅಭಿಮತ: ಅಭಿಪ್ರಾಯ; ಕರೆಸು: ಬರೆಮಾಡು; ಐಸಲೇ: ಅಲ್ಲವೇ; ಬೆಸಸು: ಹೇಳು, ಆಜ್ಞಾಪಿಸು; ಕುಹಕ: ಮೋಸ, ವಂಚನೆ; ನೋಡು: ವೀಕ್ಷಿಸು; ಇಹಪರ: ಈ ಲೋಕ ಮತ್ತು ಪರಲೋಕ; ಹಿತ: ಒಳಿತು; ನಿರ್ವಹಿಸು: ಮಾಡು, ಪೂರೈಸು; ಕೊಡು: ನೀಡು; ಮಂತ್ರ: ವಿಚಾರ, ಆಲೋಚನೆ; ಮಗ: ಪುತ್ರ;

ಪದವಿಂಗಡಣೆ:
ಅಹುದು +ತಪ್ಪೇನ್+ಇದುವೆ +ಸಾಧನ
ವಹುದು +ವಿದುರನ +ಬುದ್ಧಿಗ್+ಅಭಿಮತ
ವಹಡೆ +ಕರೆಸುವೆವ್+ಐಸಲೇ +ಬೆಸಸುವೆನು+ ವಿದುರಂಗೆ
ಕುಹಕವ್+ಆತನಲ್+ಇಲ್ಲ +ನೋಡುವನ್
ಇಹಪರತ್ರದ+ ಹಿತವನ್+ಇದ +ನಿ
ರ್ವಹಿಸಿ +ಕೊಡುವರೆ +ಮಂತ್ರವೆಂದನು+ ಮಗಗೆ+ ಧೃತರಾಷ್ಟ್ರ

ಅಚ್ಚರಿ:
(೧) ವಿದುರನ ಗುಣ – ಕುಹಕವಾತನಲಿಲ್ಲ, ನೋಡುವನಿಹಪರತ್ರದ ಹಿತವನ್

ಪದ್ಯ ೧೬: ಉತ್ತರನು ತನ್ನ ಸಾಮರ್ಥ್ಯವನ್ನು ಹೇಗೆ ಕೊಚ್ಚುಕೊಂಡನು?

ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ (ವಿರಾಟ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪೌರುಷದ ಬಗ್ಗೆ ಜಂಬ ಕೊಚ್ಚುಕೊಳ್ಳುತ್ತಾ, ಹೌದೌದು ಕೌರವನು ಹಿಂದೆ ಮೋಸದಿಂದ ಪಾಂಡವರನ್ನು ಸೋಲಿಸಿ ಹಸ್ತಿನಾಪುರವನ್ನು ತೆಗೆದುಕೊಂಡನಲ್ಲವೆ, ಇದರಲ್ಲಿ ಅವನದೇನು ತಪ್ಪು, ಇದು ಹಾಗೆಯೇ ಎಂದು ಕೊಂಡು ನನ್ನನ್ನು ಕೆಣಕಿದ್ದಾನೆ, ಗೋವುಗಳನ್ನು ಸಾಹಸದಿಂದ ಹಿಂಪಡೆದು, ಹಸ್ತಿನಾಪುರಕ್ಕೆ ಲಗ್ಗೆಹಾಕಿ ಸೂರೆಗೊಳ್ಳುತ್ತೇನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ದೋಷ; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಕುಹಕ: ಮೋಸ; ಸೋಲು: ಪರಾಜಯ; ಮಹಿ: ಭೂಮಿ; ಕೊಂಡು: ತೆಗೆದುಕೊ; ಕೆಣಕು: ಪ್ರಚೋದಿಸು; ಸಹಸ: ಸಾಹಸ, ಧೈರ್ಯ; ತುರು: ಗೋವು; ನಿರ್ವಹಿಸು: ನಿಭಾಯಿಸು; ಸೂರೆಗೊಂಬು:ಕೊಳ್ಳೆಹೋಡಿ,ಲೂಟಿ; ಪುರ: ಊರು; ಹಸ್ತಿ: ಆನೆ;

ಪದವಿಂಗಡಣೆ:
ಅಹುದಹುದು +ತಪ್ಪೇನು +ಜೂಜಿನ
ಕುಹಕದಲಿ +ಪಾಂಡವರ +ಸೋಲಿಸಿ
ಮಹಿಯ+ಕೊಂಡಂತ್+ಎನ್ನ +ಕೆಣಕಿದನೇ+ ಸುಯೋಧನನು
ಸಹಸದಿಂದವೆ +ತುರುವ +ಮರಳಿಚಿ
ತಹೆನು +ಬಳಿಕಾ+ ಕೌರವನ+ ನಿ
ರ್ವಹಿಸಲೀವೆನೆ+ ಸೂರೆಗೊಂಬೆನು +ಹಸ್ತಿನಾಪುರವ