ಗಣಿಕೆಯರನೇಕಾದಶಾಕ್ಷೊ
ಹಿಣಿಯ ನೃಪರಾಣಿಯರನಾ ಪ
ಟ್ಟಣ ಜನದ ಪರಿಜನದ ಬಹುಕಾಂತಾ ಕದಂಬಕವ
ರಣಮಹೀದರುಶನಕೆ ಬಹು ಸಂ
ದಣಿಯ ಕಂಡರು ಧರ್ಮಸುತನಿ
ನ್ನುಣಲಿ ಧರಣಿಯನೆಂದು ಸುಯ್ದರು ಬಯ್ದು ಕಮಲಜನ (ಗದಾ ಪರ್ವ, ೧೧ ಸಂಧಿ, ೨೨ ಪದ್ಯ)
ತಾತ್ಪರ್ಯ:
ಏಕಾದಶಾಕ್ಷೋಣಿಯ ಸೈನ್ಯದಲ್ಲಿದ್ದ ರಾಜರೆಲ್ಲರ ರಾಣಿಯರು, ಪಟ್ಟಣದ ಸ್ತ್ರೀಗಳ ಗುಂಪು, ಗಣಿಕೆಯರು ಇವರೆಲ್ಲರೂ ರಣರಮ್ಗಕ್ಕೆ ಬರುವುದನ್ನು ಅವರು ಕಂಡು, ಇನ್ನು ಧರ್ಮಜನೇ ಈ ಭೂಮಿಯನ್ನು ಅನುಭವಿಸಲಿ, ಎಂದು ಉದ್ಗರಿಸಿ, ನಿಟ್ಟುಸಿರು ಬಿಟ್ಟು ಹಣೆಯ ಬರಹವನ್ನು ಬರೆದ ಚತುರ್ಮುಖ ಬ್ರಹ್ಮನನ್ನು ಬೈದರು.
ಅರ್ಥ:
ಗಣಿಕೆ: ವೇಶ್ಯೆ; ಏಕಾದಶ: ಹನ್ನೊಂದು ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ನೃಪ: ರಾಜ; ರಾಣಿ: ರಸೈ; ಪಟ್ಟಣ: ಊರು; ಜನ: ಮನುಷ್ಯರ ಗುಂಪು; ಪರಿಜನ: ಬಂಧುಜನ; ಬಹು: ಬಹಳ; ಕಾಂತಾ: ಹೆಣ್ಣು; ಕದಂಬ: ಗುಂಪು; ರಣ: ಯುದ್ಧ; ರಣಮಹೀ: ರಣಭೂಮಿ; ; ದರುಶನ: ನೋಟ; ಸಂದಣಿ: ಗುಂಪು; ಕಂಡು: ನೋಡು; ಸುತ: ಮಗ; ಉಣು: ಊಟಮಾಡು; ಧರಣಿ: ಭೂಮಿ; ಸುಯ್ದು: ನಿಟ್ಟುಸಿರು; ಬಯ್ದು: ಜರಿ, ಹಂಗಿಸು; ಕಮಲಜ: ಬ್ರಹ್ಮ ;
ಪದವಿಂಗಡಣೆ:
ಗಣಿಕೆಯರನ್+ಏಕಾದಶ+ಅಕ್ಷೊ
ಹಿಣಿಯ +ನೃಪ+ರಾಣಿಯರನ್ +ಆ+ ಪ
ಟ್ಟಣ +ಜನದ +ಪರಿಜನದ +ಬಹು+ಕಾಂತಾ +ಕದಂಬಕವ
ರಣಮಹೀ+ದರುಶನಕೆ +ಬಹು +ಸಂ
ದಣಿಯ+ ಕಂಡರು +ಧರ್ಮಸುತನಿನ್
ಉಣಲಿ +ಧರಣಿಯನೆಂದು +ಸುಯ್ದರು +ಬಯ್ದು +ಕಮಲಜನ
ಅಚ್ಚರಿ:
(೧) ಸುಯ್ದರು, ಬಯ್ದು – ಪದಗಳ ಬಳಕೆ
(೨) ಜನ, ಪರಿಜನ – ಜನ ಪದದ ಬಳಕೆ