ನುಡಿಗೆ ಮುಂಚುವ ಬಾಣ ಮಾರುತ
ನಡಸಿ ಬೀಸುವ ಲಾಗು ತಲೆಗಳ
ತೊಡಬೆಗಳಚುವ ಬೇಗವನು ಬಣ್ಣಿಸುವರೆನ್ನಳವೆ
ಕಡಲ ಕಡಹದಲುರಿವ ಗರಳವ
ನುಡುಗಿದವರಿವರೋ ಶಿವಾಯೆಂ
ದೊಡನೊಡನೆ ಪಡೆ ನಡುಗಲೊರಸಿದನಾ ಮಹಾರಥರ (ದ್ರೋಣ ಪರ್ವ, ೧೮ ಸಂಧಿ, ೧೯ ಪದ್ಯ)
ತಾತ್ಪರ್ಯ:
ಮಾತಿಗಿಂತ ಮೊದಲೇ ಹೋಗುವ ಬಾಣಗಳು, ಅವುಗಳಿಂದ ಬೀಸುವ ಗಾಳಿ, ತಲೆಗಳ ತೊಡಕನ್ನು ಕತ್ತರಿಸುವ ವೇಗಗಳನ್ನು ಹೇಳಲು ಅಸಾಧ್ಯ. ಸಮುದ್ರ ಮಥನದಲ್ಲಿ ಉದಿಸಿದ ವಿಷವನ್ನು ಕುಡಿದವನು ಇವನೋ ಶಿವನೋ ಎನ್ನುವಂತೆ ಮೇಲಿಂದ ಮೇಲೆ ಆ ಸೈನ್ಯವನ್ನು ಕಡಿದು ಹಾಕಿದನು.
ಅರ್ಥ:
ನುಡಿ: ಮಾತು; ಮುಂಚು: ಮುಂದೆ; ಬಾಣ: ಅಂಬು; ಮಾರುತ: ಗಾಳಿ; ಅಡಸು: ಬಿಗಿಯಾಗಿ ಒತ್ತು; ಬೀಸು: ತೂರು, ತೂಗಾದು; ಲಾಗು: ನೆಗೆಯುವಿಕೆ; ತಲೆ: ಶಿರ; ತೊಡಬೆಳಗಚು: ಆಯುಧಗಳ ಸಮೂಹವನ್ನು ಕಳಚು; ಬೇಗ: ಶೀಘ್ರ; ಬಣ್ಣಿಸು: ವಿವರಿಸು; ಅಳವು: ಶಕ್ತಿ; ಕಡಲು: ಸಾಗರ; ಕಡಹು:ಅಲ್ಲಾಡಿಸು; ಉರಿ: ಜ್ವಾಲೆ, ಸಂಕಟ; ಗರಳ: ವಿಷ; ಉಡುಗು: ಒಳಹೋಗು; ಶಿವ: ಶಂಕರ; ಪಡೆ: ಸೈನ್ಯ; ನಡುಗು: ಹೆದರು; ಒರಸು: ನಾಶ; ಮಹಾರಥ: ಪರಾಕ್ರಮಿ;
ಪದವಿಂಗಡಣೆ:
ನುಡಿಗೆ +ಮುಂಚುವ +ಬಾಣ +ಮಾರುತನ್
ಅಡಸಿ +ಬೀಸುವ +ಲಾಗು +ತಲೆಗಳ
ತೊಡಬೆಗಳಚುವ +ಬೇಗವನು +ಬಣ್ಣಿಸುವರೆನ್ನ್+ಅಳವೆ
ಕಡಲ +ಕಡಹದಲ್+ಉರಿವ +ಗರಳವನ್
ಉಡುಗಿದವರ್+ಇವರೋ +ಶಿವಾ+ಯೆಂ
ದೊಡನೊಡನೆ+ ಪಡೆ +ನಡುಗಲ್+ಒರಸಿದನಾ +ಮಹಾರಥರ
ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಕಡಹದಲುರಿವ ಗರಳವನುಡುಗಿದವರಿವರೋ ಶಿವಾ