ಪದ್ಯ ೧೯: ಪಾಯದಳದವರು ಹೇಗೆ ಸಿದ್ಧರಾದರು?

ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ (ದ್ರೋಣ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ತಲೆಗೂದಲನ್ನು ಗಂಟುಕಟ್ಟಿ ಒಳಕ್ಕೆ ಸೇರಿಸಿ, ಸೆರಗಿನ ಮುಂಭಾಗವನ್ನು ಸರಿಯಾಗಿಸಿ, ಸಿಕ್ಕಿಸಿ, ಸೊಂಟಕ್ಕೆ ಬಿಗಿದಿದ್ದ ಕಠಾರಿಗಳ ದಾರದ ಕುಚ್ಚನ್ನು ಸರಿಮಾಡಿಕೊಂಡು, ಅಕ್ಕಪಕ್ಕದವರನ್ನು ಜರಿದು ಎಬ್ಬಿಸಿ, ಕರ್ಪೂರ ವೀಳೆಯವನ್ನು ಸ್ವೀಕರಿಸಿ ಆಯುಧಗಳನ್ನು ತಿರುಗಿಸುತ್ತಾ ಕಾಲಾಳುಗಳು ಸಿದ್ಧರಾದರು.

ಅರ್ಥ:
ತುರುಬು: ಕೂದಲಿನ ಗಂಟು, ಮುಡಿ; ಬಲಿ: ಗಟ್ಟಿಯಾಗು; ಔಕು: ಒತ್ತು; ಮೊನೆ: ತುದಿ, ಕೊನೆ; ಮುಂಜೆರಗು: ಸೆರಗಿನ ಮುಂಭಾಗ; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸುತ್ತು: ಬಳಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಬಿಗಿ: ಭದ್ರವಾಗಿರುವುದು; ಕಠಾರಿ: ಬಾಕು, ಚೂರಿ, ಕತ್ತಿ; ದಾರ: ನೂಲು; ಗೊಂಡೆ: ಕುಚ್ಚು; ಕೆದರು: ಹರಡು; ಒರಗು: ಮಲಗು, ಕೆಳಕ್ಕೆ ಬಾಗು; ಎಬ್ಬಿಸು: ಏಳಿಸು; ಜರಿ:ಬಯ್ಯು, ಹಳಿ; ವೀಳೆ: ತಾಂಬೂಲ; ಕೈದು: ಆಯುಧ; ತಿರುಹು: ತಿರುಗಿಸು; ಆಯತ: ಉಚಿತವಾದ; ಪಡೆ: ಸೈನ್ಯ, ಬಲ; ಪಾಯದಳ: ಸೈನಿಕ;

ಪದವಿಂಗಡಣೆ:
ತುರುಬ +ಬಲಿದೊಳಗ್+ಔಕಿ +ಮೊನೆ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಸುತ್ತಿನೊಳ್
ಇರುಕಿ +ಬಿಗಿದ +ಕಠಾರಿ +ದಾರದ +ಗೊಂಡೆಯವ +ಕೆದರಿ
ಒರಗಿದ್+ಎಡಬಲದವರನ್+ಎಬ್ಬಿಸಿ
ಜರೆದು +ವೀಳೆಯಗೊಂಡು +ಕೈದುವ
ತಿರುಹುತ್+ಆಯತವಾಯ್ತು +ಪಡೆ+ಎರಡರಲಿ +ಪಾಯದಳ

ಅಚ್ಚರಿ:
(೧) ಒರಗಿದೆಡಬಲದವರನೆಬ್ಬಿಸಿ – ಒಂದೇ ಪದವಾಗಿ ರಚನೆ

ಪದ್ಯ ೪೭: ಯುದ್ಧರಂಗವು ಯಾರಿಂದ ಆವರಿಸಿತು?

ಚಾರಿವರಿದನು ದನುಜ ಮಡ್ಡು ಕ
ಠಾರಿಯಲಿ ಕರ್ಣಾಸ್ತ್ರಧಾರಾ
ಸಾರದಲಿ ಮೈನನೆದು ಹೊನಲಿದುವರುಣವಾರಿಯಲಿ
ಆರಿವನು ಹೈಡಿಂಬನೀಚೆಯ
ಲಾರು ಭೀಮಜನಿತ್ತಲಾರು ಬ
ಕಾರಿನಂದನನೆನಲು ಬಲವಿರುಳಸುರಮಯವಾಯ್ತು (ದ್ರೋಣ ಪರ್ವ, ೧೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ದೈತ್ಯನು ಕಠಾರಿಯನ್ನು ಹಿಡಿದು ಕೌರವಸೈನ್ಯದಲ್ಲಿ ಚಾತುರ್ಯದಿಂದ ಓಡಾಡುತ್ತಿದ್ದನು. ಅವನ ಮೈಯಿಂದ ರಕ್ತದ ಹೊನಲು ಹರಿಯುತ್ತಿತ್ತು. ಸೈನಿಕರು ಯಾರಿವನು ಎಂದರೆ ಅಲ್ಲಿಯೇ ಹಿಡಿಂಬೆಯ ಮಗ, ಇವನಾರು ಎಂದರೆ ಭೀಮನ ಮಗ, ಇತ್ತ ಬಂದವರಾರು ಎಂದರೆ ಬಕಾರಿಯ ಮಗ ಎನ್ನುತ್ತಿರಲು ಯುದ್ಧರಂಗವೇ ಘಟೋತ್ಕಚ ಮಯವಾಯಿತು.

ಅರ್ಥ:
ಚಾರಿವರಿ: ಉಪಾಯದಿಂದ ಮುಂದುವರಿ; ದನುಜ: ರಾಕ್ಷಸ; ಮಡ್ಡು: ಸೊಕ್ಕು, ಅಹಂಕಾರ; ಕಠಾರಿ: ಚೂರಿ, ಕತ್ತಿ; ಅಸ್ತ್ರ: ಶಸ್ತ್ರ, ಆಯುಧ; ಧಾರಾಸಾರ: ವರ್ಷ; ಮೈ: ತನು; ನೆನೆ: ಒದ್ದೆಯಾಗು; ಹೊನಲು: ಪ್ರವಾಹ; ಅರುಣ: ಕೆಂಪು; ವಾರಿ: ನೀರು; ಬಲ: ಸೈನ್ಯ; ಅಸುರ: ರಾಕ್ಷಸ;

ಪದವಿಂಗಡಣೆ:
ಚಾರಿವರಿದನು +ದನುಜ +ಮಡ್ಡು +ಕ
ಠಾರಿಯಲಿ +ಕರ್ಣಾಸ್ತ್ರ+ಧಾರಾ
ಸಾರದಲಿ +ಮೈ+ನನೆದು +ಹೊನಲಿದುವ್+ಅರುಣ+ವಾರಿಯಲಿ
ಆರಿವನು +ಹೈಡಿಂಬನ್+ಈಚೆಯಲ್
ಆರು+ ಭೀಮಜನ್+ಇತ್ತಲಾರು +ಬ
ಕಾರಿನಂದನನ್+ಎನಲು +ಬಲವಿರುಳ್+ಅಸುರಮಯವಾಯ್ತು

ಅಚ್ಚರಿ:
(೧) ಘಟೋತ್ಕಚನನ್ನು ಕರೆದ ಪರಿ – ಹೈಡಿಂಬ, ಭೀಮಜ, ಬಕಾರಿನಂದನ

ಪದ್ಯ ೨೨: ಭೂರಿಶ್ರವನ ತಲೆಯನ್ನು ಯಾರು ಕಡೆದರು?

ತರಣಿಮಂಡಲದಲ್ಲಿ ದೃಷ್ಟಿಯ
ನಿರಿಸಿ ಬಹಿರಿಂದ್ರಿಯದ ಬಳಕೆಯ
ಮುರಿದು ವೇದಾಂತದ ರಹಸ್ಯದ ವಸ್ತು ತಾನಾಗಿ
ಇರಲು ಸಾತ್ಯಕಿ ಕಂಡು ಖತಿಯು
ಬ್ಬರಿಸಿ ಕಿತ್ತ ಕಠಾರಿಯಲಿ ಹೊ
ಕ್ಕುರವಣಿಸಿ ಭೂರಿಶ್ರವನ ತುರುಬಿಂಗೆ ಲಾಗಿಸಿದ (ದ್ರೋಣ ಪರ್ವ, ೧೪ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೂರ್ಯಮಂಡಲದಲ್ಲಿ ದೃಷ್ಟಿಯನ್ನಿಟ್ಟು, ಹೊರಗಡೆಗೆ ಮಾತ್ರ ನೋಡುವ ಇಂದ್ರಿಯಗಳ ವ್ಯಾಪಾರವನ್ನು ನಿಲ್ಲಿಸಿ, ವೇದಾಂತದಲ್ಲಿ ಹೇಳಿರುವ ರಹಸ್ಯವಸ್ತುವೇ ಆದ ಬ್ರಹ್ಮನಲ್ಲಿ ತಾನಾಗಿ ಭೂರಿಶ್ರವನು ಆತ್ಮಾರಾಮನಾಗಿದ್ದನು. ಇದನ್ನು ನೋಡಿದ ಸಾತ್ಯಕಿಯ ಕೋಪವು ಉಕ್ಕಿಬರಲು, ಕಠಾರಿಯನ್ನು ಎಳೆದುಕೊಂಡು ನುಗ್ಗಿ ಭೂರಿಶ್ರವನ ತಲೆಯನ್ನು ಘಾತಿಸಿದನು.

ಅರ್ಥ:
ತರಣಿ: ಸೂರ್ಯ; ಮಂಡಲ: ವರ್ತುಲಾಕಾರ; ದೃಷ್ಟಿ: ನೋಟ; ಇರಿಸು: ಇಡು; ಬಹಿರ: ಹೊರಗೆ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಬಳಕೆ: ಉಪಯೋಗ; ಮುರಿ: ಸೀಳು; ವೇದಾಂತ: ಉಪನಿಷತ್ತುಗಳು; ರಹಸ್ಯ: ಗುಟ್ಟು; ವಸ್ತು: ಸಾಮಾಗ್ರಿ; ಕಂಡು: ನೋಡು; ಖತಿ: ಕೋಪ; ಉಬ್ಬರಿಸು: ಹೆಚ್ಚಾಗು; ಕಠಾರಿ: ಚೂರಿ, ಕತ್ತಿ; ಹೊಕ್ಕು: ಓತ, ಸೇರು; ಉರವಣಿಸು: ಹೆಚ್ಚಾಗು; ತುರುಬು: ತಲೆ; ಲಾಗು: ರಭಸ, ತೀವ್ರತೆ; ಲಾಗಿಸು: ಹೊಡೆ;

ಪದವಿಂಗಡಣೆ:
ತರಣಿಮಂಡಲದಲ್ಲಿ +ದೃಷ್ಟಿಯನ್
ಇರಿಸಿ +ಬಹಿರ್+ಇಂದ್ರಿಯದ +ಬಳಕೆಯ
ಮುರಿದು +ವೇದಾಂತದ +ರಹಸ್ಯದ +ವಸ್ತು +ತಾನಾಗಿ
ಇರಲು +ಸಾತ್ಯಕಿ +ಕಂಡು +ಖತಿ
ಉಬ್ಬರಿಸಿ +ಕಿತ್ತ +ಕಠಾರಿಯಲಿ +ಹೊಕ್ಕ್
ಉರವಣಿಸಿ +ಭೂರಿಶ್ರವನ +ತುರುಬಿಂಗೆ +ಲಾಗಿಸಿದ

ಅಚ್ಚರಿ:
(೧) ತಲೆಯನ್ನು ಕಡೆದನು ಎಂದು ಹೇಳುವ ಪರಿ – ಭೂರಿಶ್ರವನ ತುರುಬಿಂಗೆ ಲಾಗಿಸಿದ
(೨) ಉರವಣಿಸಿ, ಉಬ್ಬರಿಸಿ, ಇರಿಸಿ – ಪ್ರಾಸ ಪದಗಳು

ಪದ್ಯ ೪೭: ಕೌರವರೇಕೆ ತಮ್ಮ ತಮ್ಮಲ್ಲೇ ಕಾದಾಡಿದರು?

ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು
ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ
ಧುರದ ಭರ ಮಿಗೆ ಕೊಂಡು ಬೆದರ
ಳ್ಳಿರಿಯೆ ಬೆರಗಿನ ಬಳಿಯಲೊದಗಿ
ತ್ತರರೆ ಪಾಂಡವರೆನುತ ಹೊಯ್ದಾಡಿದರು ತಮ್ಮೊಳಗೆ (ದ್ರೋಣ ಪರ್ವ, ೮ ಸಂಧಿ, ೪೭ ಪದ್ಯ)

ತಾತ್ಪರ್ಯ:
ರಾವುತರು ಆನೆಗಳನ್ನು , ಜೋದರು ಕುದುರೆಗಳನ್ನು, ಕಾಲಾಳುಗಳು ರಥಗಳನ್ನು ಹತ್ತಿದರು. ಮಹಾರಥರು ಈಟಿ, ಸಬಳ ಕಠಾರಿ ಉಬ್ಬಣಗಳನ್ನು ಹಿಡಿದು ಕಾಲಾಳುಗಳಾದರು. ಯುದ್ಧವು ಸಮೀಪಿಸಿ ಉಗ್ರವಾಗಿದೆಯೆಂದು ಭಯಗೊಂಡು ತಮ್ಮ ಪಕ್ಕದಲ್ಲಿದ್ದವರೇ ಪಾಂಡವ ಯೋಧರೆಂದು ತಿಳಿದು ತಮ್ಮ ತಮ್ಮಲ್ಲೇ ಕಾದಾಡಿದರು.

ಅರ್ಥ:
ಕರಿ: ಆನೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಜೋಧ: ಆನೆಮೇಲೆ ಕೂತು ಯುದ್ಧಮಾಡುವವ; ತುರಗ: ಅಶ್ವ; ಕಾಲಾಳು: ಸೈನಿಕ; ರಥ: ಬಂಡಿ; ವರ: ಶ್ರೇಷ್ಠ; ಮಹಾರಥ: ಪರಾಕ್ರಮಿ; ಸಬಳ: ಈಟಿ; ಕಠಾರಿ: ಬಾಕು, ಚೂರಿ, ಕತ್ತಿ; ಉಬ್ಬಣ: ಹೆಚ್ಚು, ಅಧಿಕ; ಧುರ: ಯುದ್ಧ, ಕಾಳಗ; ಭರ: ರಭಸ; ಮಿಗೆ: ಮತ್ತು,ಅಧಿಕವಾಗಿ; ಬೆದರು: ಹೆದರು; ಅಳ್ಳಿರಿ: ಚುಚ್ಚು; ಬೆರಗು: ಆಶ್ಚರ್ಯಪಡು, ವಿಸ್ಮಯ; ಬಳಿ: ಹತ್ತಿರ; ಒದಗು: ಲಭ್ಯ, ದೊರೆತುದು; ಅರರೆ: ಓಹೋ; ಹೊಯ್ದಾಡು: ಹೋರಾಡು;

ಪದವಿಂಗಡಣೆ:
ಕರಿಗಳನು+ ರಾವುತರು +ಜೋಧರು
ತುರಗವನು +ಕಾಲಾಳು +ರಥವನು
ವರ+ಮಹಾರಥರ್+ಈಟಿ +ಸಬಳ +ಕಠಾರಿ+ಉಬ್ಬಣವ
ಧುರದ +ಭರ +ಮಿಗೆ +ಕೊಂಡು +ಬೆದರ್
ಅಳ್ಳಿರಿಯೆ +ಬೆರಗಿನ +ಬಳಿಯಲ್+ಒದಗಿತ್ತ್
ಅರರೆ +ಪಾಂಡವರೆನುತ+ ಹೊಯ್ದಾಡಿದರು +ತಮ್ಮೊಳಗೆ

ಅಚ್ಚರಿ:
(೧) ಕೌರವರಲ್ಲಿನ ಗೊಂದಲವನ್ನು ಸೂಚಿಸುವ ಪರಿ – ಕರಿಗಳನು ರಾವುತರು ಜೋಧರು
ತುರಗವನು ಕಾಲಾಳು ರಥವನು ವರಮಹಾರಥರೀಟಿ ಸಬಳ ಕಠಾರಿಯುಬ್ಬಣವ

ಪದ್ಯ ೨: ಸೇವಕರು ಯಾರನ್ನು ನೋಡಿದರು?

ಅವನಿಪನ ಖಂಡೆಯವ ನಕುಲನ
ಪವನಸುತನ ಕಠಾರಿಯನು ನೃಪ
ನಿವಹದಾಯುಧತತಿಯನೊಯ್ಯನೆ ತೆಗೆದು ಬೈಚಿಟ್ಟು
ಬವರದಲಿ ಸುತನಳಿದನೋ ಕೌ
ರವರ ಕೈವಶವಾದನೋ ಸಂ
ಭವಿಪ ಹದನೇನೆಂಬ ನೃಪತಿಯ ಕಂಡರೈತಂದು (ದ್ರೋಣ ಪರ್ವ, ೭ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನ ಖಡ್ಗ, ಭೀಮ ನಕುಲರ ಕಠಾರಿಗಳು, ಉಳಿದವರ ಆಯುಧಗಳನ್ನು ಮುಚ್ಚಿಟ್ಟರು. ಅಭಿಮನ್ಯುವು ಅಳಿದಣೊ, ಕೌರವರಿಗೆ ಸೆರೆಸಿಕ್ಕನೋ ಏನಾಯಿತು ಎಂದು ಕೊಳ್ಳುತ್ತಿದ್ದ ಧರ್ಮಜನನ್ನು ಕಂಡರು.

ಅರ್ಥ:
ಅವನಿಪ: ರಾಜ; ಖಂಡೆಯ: ಕತ್ತಿ, ಖಡ್ಗ; ಪವನಸುತ: ವಾಯುಪುತ್ರ (ಭೀಮ); ಕಠಾರಿ: ಚೂರಿ, ಕತ್ತಿ; ನೃಪ: ರಾಜ; ನಿವಹ: ಗುಂಪು; ಆಯುಧ: ಶಸ್ತ್ರ; ತತಿ: ಗುಂಪು; ಒಯ್ಯು: ತೆರಳು; ತೆಗೆ: ಹೊರತರು; ಬೈಚಿಟ್ಟು: ಮುಚ್ಚಿಟ್ಟು; ಬವರ: ಯುದ್ಧ; ಸುತ: ಪುತ್ರ; ಅಳಿ: ಮರಣ; ಸಂಭವಿಪ: ಸಾಧ್ಯತೆ, ಶಕ್ಯತೆ; ಹದ: ಸ್ಥಿತಿ; ನೃಪತಿ: ರಾಜ; ಕಂಡು: ನೋಡು; ಐತಂದು: ಬಂದು ಸೇರು;

ಪದವಿಂಗಡಣೆ:
ಅವನಿಪನ +ಖಂಡೆಯವ +ನಕುಲನ
ಪವನಸುತನ+ ಕಠಾರಿಯನು+ ನೃಪ
ನಿವಹದ್+ಆಯುಧ+ತತಿಯನ್+ಒಯ್ಯನೆ +ತೆಗೆದು +ಬೈಚಿಟ್ಟು
ಬವರದಲಿ +ಸುತನಳಿದನೋ +ಕೌ
ರವರ+ ಕೈವಶವಾದನೋ +ಸಂ
ಭವಿಪ +ಹದನೇನೆಂಬ+ ನೃಪತಿಯ +ಕಂಡರ್+ಐತಂದು

ಅಚ್ಚರಿ:
(೧) ಅವನಿಪ, ನೃಪ – ಸಮಾನಾರ್ಥಕ ಪದ

ಪದ್ಯ ೭೦: ದುರ್ಯೋಧನನ ಮಕ್ಕಳು ಹೇಗೆ ಯುದ್ಧಕ್ಕೆ ಬಂದರು?

ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆ ಮುಸುಂಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡೆಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ (ದ್ರೋಣ ಪರ್ವ, ೫ ಸಂಧಿ, ೭೦ ಪದ್ಯ)

ತಾತ್ಪರ್ಯ:
ಅತುಲ ಬಾಹುಬಲ ಪರಾಕ್ರಮಿಯಾದ ಅಭಿಮನ್ಯುವಿನೊಡನೆ ದುರ್ಯೋಧನನ ಮಕ್ಕಳು ಸಮರಕ್ಕಿಳಿದರು. ಬಿಲ್ಲು, ಖಡ್ಗ, ದಂಡ, ಹಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬನಗಳನ್ನು ಹಿಡಿದು ಬಂದ ಅವರೆಲ್ಲರೂ ಗಂಧಾನುಲೇಪನ ಮಾಡಿಕೊಂಡಿದ್ದರು.

ಅರ್ಥ:
ಚಂಡ: ಶೂರ, ಪರಾಕ್ರಮಿ; ಭುಜಬಲ: ಶೂರ; ಮಕ್ಕಳು: ಪುತ್ರ; ತಂಡ: ಗುಂಪು; ಎದ್ದು: ಮೇಲೇಳು; ಬಿಗಿ: ಭದ್ರವಾಗಿರುವುದು; ಬಿಲ್ಲು: ಚಾಪ; ದಂಡ:ಕೋಲು, ದಡಿ; ಅಲಗು: ಆಯುಧಗಳ ಹರಿತವಾದ ಅಂಚು; ಮುದ್ಗರ: ಗದೆ; ಕಠಾರಿ: ಬಾಕು, ಚೂರಿ; ಉಬ್ಬಣ: ಚೂಪಾದ ಆಯುಧ; ಗಂಡುಗಲಿ: ಅತ್ಯಂತ ಪರಾಕ್ರಮಿ, ಮಹಾಶೂರ; ಕವಿ: ಆವರಿಸು; ಅದಿರು: ನಡುಕ, ಕಂಪನ; ಖಂಡ: ತುಂಡು, ಚೂರು; ಮುಡುಹು: ಹೆಗಲು, ಭುಜಾಗ್ರ; ಗಂಧ: ಚಂದನ; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಮೈಸಿರಿ: ದೇಹದ ಸೌಂದರ್ಯ; ಪರಿಮಳ: ಸುವಾಸನೆ; ಪೂರ: ಬಹಳವಾಗಿ; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಚಂಡ +ಭುಜಬಲನೊಡನೆ +ಮಕ್ಕಳ
ತಂಡವೆದ್ದುದು +ಬಿಗಿದ +ಬಿಲ್ಲಿನ
ದಂಡವ್+ಅಲಗೆ+ ಮುಸುಂಡಿ +ಮುದ್ಗ +ಕಠಾರಿ+ಉಬ್ಬಣದ
ಗಂಡುಗಲಿಗಳು +ಕವಿದರ್+ಅದಿರುವ
ಖಂಡೆಯದ +ಮುಡುಹುಗಳ+ ಗಂಧದ
ಮಂಡನದ+ ಮೈಸಿರಿಯ+ ಪರಿಮಳ +ಪೂರರೊಗ್ಗಿನಲಿ

ಅಚ್ಚರಿ:
(೧) ಆಯುಧಗಳ ಹೆಸರು – ಅಲಗೆ, ಮುಸುಂಡಿ, ಮುದ್ಗರ, ಕಠಾರಿ, ಉಬ್ಬಣ
(೨) ಭುಜಬಲ, ಗಂಡುಗಲಿ – ಪರಾಕ್ರಮಿಯೆಂದು ಹೇಳುವ ಪದ

ಪದ್ಯ ೪೯: ಅಭಿಮನ್ಯುವು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಬಿಗಿದ ಗಂಡುಡಿಗೆಯಲಿ ಹೊನ್ನಾ
ಯುಗದ ಹೊಳೆವ ಕಠಾರಿಯನು ಮೊನೆ
ಮಗುಚಿ ಸಾದು ಜವಾಜಿ ಕತ್ತುರಿ ಗಂಧಲೇಪದಲಿ
ಮಗಮಗಿಪ ಹೊಂದೊಡರ ಹಾರಾ
ದಿಗಳಲೊಪ್ಪಂಬಡೆದು ನಸುನಗೆ
ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು (ದ್ರೋಣ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪೌರುಷದ ಉಡುಗೆಯನ್ನು ತೊಟ್ಟು, ಬಂಗಾರದ ಹಿಡಿಕೆಯ ಕತ್ತಿಯನ್ನು ಒರೆಯಲ್ಲಿಟ್ಟು, ಸಾದು, ಜವಾಜಿ, ಕಸ್ತೂರಿ, ಗಂಧಗಳನ್ನು ಲೇಪಿಸಿಕೊಂಡು ಬಂಗಾರದ ಹಾರಾದಿಗಳಿಂದ ಶೋಭಿತನಾಗಿ, ಹಸನ್ಮುಖಿಯಾಗಿ ಅಭಿಮನ್ಯುವು ಯುದ್ಧಕ್ಕೆ ಅನುವಾದನು.

ಅರ್ಥ:
ಬಿಗಿ: ಬಂಧಿಸು, ಭದ್ರವಾಗಿ ಕಟ್ಟು; ಗಂಡುಡಿಗೆ: ಪೌರುಷದ ಬಟ್ಟೆ; ಉಡಿಗೆ: ಬಟ್ಟೆ; ಹೊನ್ನು: ಚಿನ್ನ; ಹೊಳೆ: ಪ್ರಕಾಶ; ಕಠಾರಿ: ಚೂರಿ, ಕತ್ತಿ; ಮೊನೆ: ಚೂಪಾದ; ಮಗುಚು: ಹಿಂದಿರುಗಿಸು; ಸಾದು: ಸಿಂಧೂರ; ಜವಾಜಿ:ಸುವಾಸನಾದ್ರವ್ಯ; ಕತ್ತುರಿ: ಕಸ್ತೂರಿ; ಗಂಧ: ಚಂದನ; ಲೇಪ: ಬಳಿಯುವಿಕೆ, ಹಚ್ಚುವಿಕೆ; ಮಗಮಗಿಪ: ಸುವಾಸನೆಯನ್ನು ಬೀರು; ಹೊಂದು: ಸೇರು; ಒಡರು: ತೊಡಗು; ಹಾರ: ಮಾಲೆ; ಒಪ್ಪು: ನಸುನಗೆ: ಹಸನ್ಮುಖ; ಮೊಗ: ಮುಖ; ಸೊಂಪು: ಸೊಗಸು, ಚೆಲುವು; ಆಹವ: ಯುದ್ಧ; ಅನುವು: ಆಸ್ಪದ, ಅನುಕೂಲ;

ಪದವಿಂಗಡಣೆ:
ಬಿಗಿದ +ಗಂಡುಡಿಗೆಯಲಿ +ಹೊನ್ನಾ
ಯುಗದ +ಹೊಳೆವ +ಕಠಾರಿಯನು +ಮೊನೆ
ಮಗುಚಿ +ಸಾದು +ಜವಾಜಿ +ಕತ್ತುರಿ +ಗಂಧ+ಲೇಪದಲಿ
ಮಗಮಗಿಪ+ ಹೊಂದ್+ಒಡರ +ಹಾರಾ
ದಿಗಳಲ್+ಒಪ್ಪಂಬಡೆದು+ ನಸುನಗೆ
ಮೊಗದ +ಸೊಂಪಿನಲ್+ಆಹವಕ್+ಅನುವಾದನ್+ಅಭಿಮನ್ಯು

ಅಚ್ಚರಿ:
(೧) ಗಂಡುಡಿಗೆ, ಸಾದು, ಜವಾಜಿ, ಕತ್ತುರಿ, ಗಂಧ, ಹಾರ – ಅಭಿಮನ್ಯು ಅಲಂಕಾರಗೊಂಡ ಪರಿ

ಪದ್ಯ ೧೨: ದುರ್ಯೋಧನನ ಸ್ಥಿತಿ ಹೇಗಿತ್ತು?

ಗಾಹು ಕೊಳ್ಳದ ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ (ದ್ರೋಣ ಪರ್ವ, ೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶತ್ರುಗಳು ಎದುರಿಸಲಾಗದಂತಹ ಭೀಮಾರ್ಜುನರ ಪರಾಕ್ರಮವನ್ನು ನೆನೆಯುತ್ತಾ, ಕಠಾರಿಯ ಹಿಡಿಕೆಯ ಮೇಲೆ ಗಲ್ಲವನ್ನಿಟ್ಟು, ಕಿರೀಟವನ್ನು ತೂಗುತ್ತಾ, ಕಂಬನಿಗಲು ಅವಿರಳವಾಗಿ ದಲದಳನೆ ಸುರಿಯುತ್ತಿರಲು, ಶೋಕಾಗ್ನಿಯು ಸುಡುತ್ತಿರುವ ಮನಸ್ಸಿನಿಂದ ಕೌರವನು ಓಲಗನ್ನಿತ್ತನು.

ಅರ್ಥ:
ಗಾಹು: ಮೋಸ, ವಂಚನೆ; ಕೊಳ್ಳು: ತೆಗೆದುಕೋ; ಸಾಹಸ: ಪರಾಕ್ರಮ; ಎಣಿಸು: ಲೆಕ್ಕಮಾಡು; ಕಠಾರಿ: ಚೂರಿ, ಕತ್ತಿ; ಮೋಹ:ಭ್ರಾಂತಿ, ಭ್ರಮೆ; ಗಲ್ಲ: ಕೆನ್ನೆ; ಮಕುಟ: ಕಿರೀಟ; ಅಹುಗಳು: ಸರಿಯೆಂದು ತಲೆಯನ್ನು ತೂಗಾಡು; ಉಹೆ: ಎಣಿಕೆ, ಅಂದಾಜು; ತನಿ: ಹೆಚ್ಚಾಗು; ಮೋಹರ: ಯುದ್ಧ; ಘನ: ಶ್ರೇಷ್ಠ; ಶೋಕ: ದುಃಖ; ವಹ್ನಿ: ಬೆಂಕಿ; ಮೇಹುಗಾಡು: ಮೇಯುವ ಕಾಡು; ಮನ: ಮನಸ್ಸು; ಓಲಗ: ದರ್ಬಾರು;

ಪದವಿಂಗಡಣೆ:
ಗಾಹು +ಕೊಳ್ಳದ +ಭೀಮ +ಪಾರ್ಥರ
ಸಾಹಸವನ್+ಎಣಿಸುತ +ಕಠಾರಿಯ
ಮೋಹಳದ +ಮೇಲಿಟ್ಟ +ಗಲ್ಲದ +ಮಕುಟದ್+ಒಲಹುಗಳ
ಊಹೆದೆಗಹಿನ +ಕಂಬನಿಯ +ತನಿ
ಮೋಹರದ+ ಘನ +ಶೋಕ+ವಹ್ನಿಯ
ಮೇಹುಗಾಡಿನ+ ಮನದ+ ಕೌರವನಿತ್ತನ್+ಓಲಗವ

ಅಚ್ಚರಿ:
(೧) ದುರ್ಯೋಧನನ ಚಿತ್ರಣ – ಕಠಾರಿಯ ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ

ಪದ್ಯ ೨೨: ದುಶ್ಯಾಸನ ದಳವು ಹೇಗಿತ್ತು?

ಹಲಗೆ ಕಡೆತಲೆ ಹರಿಗೆ ಖಂಡೆಯ
ಹೊಳೆವ ಮಡ್ಡು ಕಠಾರಿ ಡೊಂಕಣಿ
ಬಿಲು ಸರಳು ತೋಡಿಟ್ಟಿ ಮುದ್ಗರ ಪಿಂಡಿವಾಳ ಚಯ
ತಲೆಯ ನೇಣಿನ ಕೈಯ ಚೌರಿಯ
ಲುಳಿಯ ಜೋಡಿನ ಕಟಿಯ ಗಂಟೆಯ
ದಳವನೀಕ್ಷಿಸು ಪಾರ್ಥ ದುಶ್ಯಾಸನನ ಪಯದಳವ (ಭೀಷ್ಮ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೈನ್ಯದಲ್ಲಿನ ಗುರಾಣಿ, ಕತ್ತಿ, ಕಠಾರಿ, ಡೊಂಕಣಿ, ಬಿಲ್ಲು ಬಾಣ, ಮುದ್ಗರ, ಭಿಂಡಿವಾಳ, ಕತ್ತಿಗೆ ಹಾಕಿ ಕೊಲ್ಲುವ ಹಗ್ಗಗಳಿಂದ ಸಜ್ಜಿತವಾಗಿದೆ, ಸೊಂಟದಲ್ಲಿ ಕಿರುಗೆಜ್ಜೆ ಕಟ್ಟಿದ್ದಾರೆ. ಎದ್ದು ಕಾಣುವ ಪಾದರಕ್ಷೆಗಳು, ನೋಡು ಅರ್ಜುನ ಅದು ದುಶ್ಯಾಸನ ಕಾಲಾಳಿನ ಸೈನ್ಯ.

ಅರ್ಥ:
ಹಲಗೆ: ಪಲಗೆ, ಒಂದು ಬಗೆಯ ಗುರಾಣಿ; ಕಡಿತಲೆ: ಕತ್ತಿ, ಖಡ್ಗ; ಹರಿಗೆ: ಚಿಲುಮೆ; ಖಂಡೆಯ: ಕತ್ತಿ, ಖಡ್ಗ; ಹೊಳೆ: ಪ್ರಖಾಸಹ್; ಮಡ್ಡು: ಸೊಕ್ಕು, ಅಹಂಕಾರ; ಕಠಾರಿ: ಬಾಕು, ಚೂರಿ, ಕತ್ತಿ; ಡೊಂಕಣಿ: ಈಟಿ; ಬಿಲು: ಬಿಲ್ಲು, ಚಾಪ; ಸರಳು: ಬಾಣ; ತೋಡಿಟ್ಟ: ದೇಹವನ್ನು ಬಗೆವಷ್ಟು ಚೂಪಾದ ಈಟಿ; ಮುದ್ಗರ: ಗದೆ; ಪಿಂಡಿವಾಳ: ಒಂದು ಬಗೆಯ ಆಯುಧ, ಈಟಿ; ಚಯ: ಸಮೂಹ; ತಲೆ: ಶಿರ; ನೇಣು: ಹಗ್ಗ, ಹುರಿ; ಕೈ: ಹಸ್ತ; ಚೌರಿ: ಚಾಮರ; ಲುಳಿ: ರಭಸ; ಜೋಡು: ಜೊತೆ; ಕಟಿ: ಸೊಂಟ; ಗಂಟೆ: ಕಿರುಗೆಜ್ಜೆ; ದಳ: ಸಮೂಹ, ಸೈನ್ಯ; ಈಕ್ಷಿಸು: ನೋದು; ಪಯದಳ: ಕಾಲಾಳು;

ಪದವಿಂಗಡಣೆ:
ಹಲಗೆ +ಕಡೆತಲೆ+ ಹರಿಗೆ +ಖಂಡೆಯ
ಹೊಳೆವ +ಮಡ್ಡು +ಕಠಾರಿ+ ಡೊಂಕಣಿ
ಬಿಲು +ಸರಳು +ತೋಡಿಟ್ಟಿ +ಮುದ್ಗರ +ಪಿಂಡಿವಾಳ+ ಚಯ
ತಲೆಯ +ನೇಣಿನ +ಕೈಯ +ಚೌರಿಯ
ಲುಳಿಯ +ಜೋಡಿನ +ಕಟಿಯ +ಗಂಟೆಯ
ದಳವನೀಕ್ಷಿಸು +ಪಾರ್ಥ +ದುಶ್ಯಾಸನನ+ ಪಯದಳವ

ಅಚ್ಚರಿ:
(೧) ಆಯುಧಗಳ ಹೆಸರು – ಕಡೆತಲೆ, ಖಂಡೆಯ, ಮಡ್ಡು, ಕಠಾರಿ, ದೊಂಕಣಿ, ಬಿಲು, ಸರಳು, ತೋಡಿಟ್ಟಿ, ಮುದ್ಗರ, ಪಿಂಡಿವಾಳ

ಪದ್ಯ ೫೧: ಅರ್ಜುನನು ಯುದ್ಧಕ್ಕೆ ಹೇಗೆ ಸಿಂಗಾರಗೊಂಡನು?

ಬಳೆಯ ನುಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗುಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ (ವಿರಾಟ ಪರ್ವ, ೭ ಸಂಧಿ, ೫೧ ಪದ್ಯ)

ತಾತ್ಪರ್ಯ:
ಕೌರವ ಬಲದ ಕತ್ತನ್ನು ಮುರಿಯುವಂತೆ ಕೈಯಲ್ಲಿದ್ದ ಬಳೆಗಲನ್ನು ನೆಲಕ್ಕೆ ಬಡಿದು ಪುಡಿ ಮಾಡಿದನು. ಮಲ್ಲರಿಗೆ ಯೋಗ್ಯವಾಗುವಂತೆ ವಸ್ತ್ರವನ್ನು ಮಡಿಚಿ ತೊಟ್ಟನು. ತಲೆಯ ಕೂದಲು ಜಡೆಯನ್ನು ತೆಗೆದು, ಹಣೆಗೆ ವೀರ ತಿಲಕವನ್ನಿಟ್ಟುಕೊಂಡು, ಸೊಂತದಲ್ಲಿ ಕಠಾರಿಯನ್ನು, ಗೊಂಡೆಯ ಕುಚ್ಚು ಕಾಣಿಸುವಂತೆ ಧರಿಸಿ, ಗಂಡು ವೇಷವನ್ನು ಅರ್ಜುನನು ತೊಟ್ಟನು.

ಅರ್ಥ:
ಬಳೆ: ಕಂಕಣ, ಕೈಗೆ ಹಾಕುವ ಗಾಜು, ಲೋಹ ಗಳ ದುಂಡನೆಯ ಆಭರಣ; ನುಗ್ಗು: ಚೂರು, ನುಚ್ಚು, ಪುಡಿ; ಒತ್ತು: ಚುಚ್ಚು, ತಿವಿ; ಬಲ: ಸೈನ್ಯ; ಗಂಟಲು: ಕಂಠ; ಮುರಿ: ಚೂರುಮಾಡು; ಲಘು: ವೇಗವಾದ, ಶೀಘ್ರವಾದ; ಸಾಹಸಿ: ಪರಾಕ್ರಮಿ; ಘಳಿ: ನೆರಗೆ, ಮಡಿಸಿದ ಸೀರೆ; ಉಟ್ಟು: ತೊಡು; ಮಲ್ಲ: ಜಟ್ಟಿ; ಗಂಟು: ಸೇರಿಸಿ ಕಟ್ಟಿದುದು, ಕಟ್ಟು; ತಲೆ: ಶಿರ; ನವಿರು: ಕೂದಲು, ಕೇಶ; ಹಿಣಿಲು: ಬಿಗಿದು ಸುತ್ತಿದ ತಲೆಗೂದಲು, ಮುಡಿ; ಇರಿ: ತಿವಿ; ತಿಲಕ: ಹಣೆಯಲ್ಲಿಡುವ ಬೊಟ್ಟು; ಕಿಗ್ಗುಟ್ಟು: ಕೆಳಭಾಗದ ಕಟ್ಟು; ಕಠಾರಿ: ಚೂರಿ, ಕತ್ತಿ; ಹೊಳೆ: ಪ್ರಕಾಶ; ಗೊಂಡೆ: ಕುಚ್ಚು; ಮೆರೆ: ತೋರು, ಹೊಳೆ; ಗಂಡು: ಪುರುಷ; ಅಂದ: ಸೊಬಗು; ಕೈಕೊಂಡ: ತೊಡು;

ಪದವಿಂಗಡಣೆ:
ಬಳೆಯ +ನುಗ್ಗೊತ್ತಿದನು +ಕೌರವ
ಬಲದ +ಗಂಟಲ +ಬಳೆಯ +ಮುರಿವವೊಲ್
ಅಲಘು +ಸಾಹಸಿ +ಘಳಿಯನುಟ್ಟನು +ಮಲ್ಲಗಂಟಿನಲಿ
ತಲೆ +ನವಿರ +ಹಿಣಿಲಿರಿದು +ತಿಲಕವ
ಗೆಲಿದು +ಕಿಗ್ಗುಟ್ಟಿನ +ಕಠಾರಿಯ
ಹೊಳೆವ +ಗೊಂಡೆಯ +ಮೆರೆಯೆ +ಗಂಡಂದವನು +ಕೈಕೊಂಡ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೌರವಬಲದ ಗಂಟಲ ಬಳೆಯ ಮುರಿವವೊಲ್