ಪದ್ಯ ೨೭: ಭೀಷ್ಮನು ಯಾರ ಎದುರು ರಥವನ್ನು ನಿಲ್ಲಿಸಲು ಹೇಳಿದನು?

ಸಕಲ ದೆಸೆಯಲಿ ಮುರಿದು ಬಹ ನಾ
ಯಕರ ಕಂಡನು ಪಾರ್ಥನಸುರಾಂ
ತಕಗೆ ತೋರಿದನಕಟ ನೋಡಿದಿರೆಮ್ಮವರ ವಿಧಿಯ
ನಕುಲನಿಲ್ಲಾ ಭೀಮನೋ ಸಾ
ತ್ಯಕಿಯೊ ಸೇನಾಪತಿಯೊ ಕಟಕಟ
ವಿಕಳರೋಡಿದರೋಡಲಿದಿರಿಗೆ ರಥವ ಹರಿಸೆಂದ (ಭೀಷ್ಮ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲ್ಲಾ ದಿಕ್ಕುಗಳಿಂದಲೂ ಓಡಿ ಬರುತ್ತಿದ್ದ ತಮ್ಮ ಸೈನ್ಯವನ್ನು ಅರ್ಜುನನು ನೋಡಿ ಶ್ರೀಕೃಷ್ಣನಿಗೆ ತೋರಿಸೆ, ನಮ್ಮವರ ವಿಧಿಯನ್ನು ನೋಡಿದೆಯಾ? ನಕುಲ, ಭೀಮ, ಸಾತ್ಯಕಿ, ಧೃಷ್ಟದ್ಯುಮ್ನರು ಅಲ್ಲಿಲ್ಲವೇ ಅಥವಾ ಭ್ರಮೆಗೊಂಡು ಓಡಿ ಹೋದರೇ? ಕೃಷ್ಣಾ ಭೀಷ್ಮನೆದುರಿಗೆ ರಥವನ್ನು ನಿಲ್ಲಿಸು ಎಂದು ಹೇಳಿದನು.

ಅರ್ಥ:
ಸಕಲ: ಎಲ್ಲಾ; ದೆಸೆ: ದಿಕ್ಕು; ಮುರಿ: ಸೀಳು; ಬಹ: ಬಹಳ; ನಾಯಕ: ಒಡೆಯ; ಕಂಡು: ನೋಡು; ಅಸುರ: ರಾಕ್ಷಸ; ಅಂತಕ: ಯಮ; ತೋರು: ಗೋಚರಿಸು; ಅಕಟ: ಅಯ್ಯೋ; ನೋಡು: ವೀಕ್ಷಿಸು; ವಿಧಿ: ನಿಯಮ; ಕಟಕಟ: ಅಯ್ಯಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಓಡು: ಧಾವಿಸು; ಇದಿರು: ಎದುರು; ರಥ: ಬಂಡಿ; ಹರಿಸು: ಚಲಿಸು;

ಪದವಿಂಗಡಣೆ:
ಸಕಲ+ ದೆಸೆಯಲಿ +ಮುರಿದು +ಬಹ +ನಾ
ಯಕರ +ಕಂಡನು +ಪಾರ್ಥನ್+ಅಸುರಾಂ
ತಕಗೆ +ತೋರಿದನ್+ಅಕಟ +ನೋಡಿದಿರ್+ಎಮ್ಮವರ +ವಿಧಿಯ
ನಕುಲನ್+ಇಲ್ಲಾ +ಭೀಮನೋ +ಸಾ
ತ್ಯಕಿಯೊ +ಸೇನಾಪತಿಯೊ +ಕಟಕಟ
ವಿಕಳರ್+ಓಡಿದರ್+ಓಡಲ್+ಇದಿರಿಗೆ +ರಥವ+ ಹರಿಸೆಂದ

ಅಚ್ಚರಿ:
(೧) ಅಕಟ, ಕಟಕಟ – ಪದಗಳ ಬಳಕೆ
(೨) ವಿಕಳರೋಡಿದರೋಡಲಿದಿರಿಗೆ – ಪದದ ಬಳಕೆ