ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಬಾಹಿಯ ಚಮರಧಾರಿಗರು
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ (ಗದಾ ಪರ್ವ, ೧ ಸಂಧಿ, ೧೪ ಪದ್ಯ)
ತಾತ್ಪರ್ಯ:
ಬಿರುದಿನ ಹಲಗೆಯನ್ನು ಎಸೆದರು, ಧ್ವಜದ ಕಂಬಗಳನ್ನು ಹೊಡೆದುರುಳಿಸಿದರು. ಕಾಲಿಅನ್ ಪೆಂಡೆಯವನ್ನು ಭೂಮಿಗೆಸೆದರು. ಹಡಪ ಛತ್ರಚಾಮರಧಾರಿಗಳು ಅವನ್ನು ಕೆಳಗೆಸೆದರು. ಆಗ ರಥಿಕರೇ ರಥದಲ್ಲಿ ಉಳಿದರು. ರಥ, ಆನೆ, ಕುದುರೆಗಳನ್ನು ಹತ್ತಿದ ಸುಭಟರು ಭೂಮಿಗೆ ಧುಮುಕಿ ದೂರಕ್ಕೋಡಿದರು.
ಅರ್ಥ:
ಬಿರುದು: ಗೌರವ ಸೂಚಕ ಪದ; ಬಿಸುಟು: ಹೊರಹಾಕು; ಧ್ವಜ: ಬಾವುಟ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ, ಕಲ್ಲು; ಹರಿ: ಕಡಿ, ಕತ್ತರಿಸು; ಹೊಯ್ದು: ಹೊಡೆ; ಕಾಲ: ಪಾದ; ತೊಡರು: ಸಂಬಂಧ, ಸಂಕೋಲೆ; ಧರೆ: ಭೂಮಿ; ಹಡಪ: ಕೈಚೀಲ; ಚಮರಧಾರಿ: ಚಾಮರವನ್ನು ಹಿಡಿದವ; ದೊರೆ: ರಾಜ; ಉಳಿದ: ಮಿಕ್ಕ; ಬೆದರು: ಹೆದರು, ಭಯಗೊಳ್ಳು; ರಥ: ಬಂಡಿ; ಕರಿ: ಆನೆ; ವಾರುವ: ಕುದುರೆ; ಇಳೆ: ಭೂಮಿ; ಅಪ್ಪರಿಸು: ತಟ್ಟು, ತಾಗು; ಹರಹು: ವಿಸ್ತಾರ, ವೈಶಾಲ್ಯ; ಹಾಯ್ದು: ಹೊಡೆ; ಹೊತ್ತು: ಧರಿಸು; ಧುಗುಡ: ದುಃಖ;
ಪದವಿಂಗಡಣೆ:
ಬಿರುದ+ ಬಿಸುಟರು +ಧ್ವಜದ +ಕಂಬವ
ಹರಿಯ +ಹೊಯ್ದರು +ಕಾಲ +ತೊಡರನು
ಧರೆಗೆ +ಬಿಸುಟರು +ಹಡಪ+ ಬಾಹಿಯ +ಚಮರಧಾರಿಗರು
ದೊರೆಗಳ್+ಉಳಿದರು +ಬೆದರಿ +ರಥದಲಿ
ಕರಿಗಳಲಿ +ವಾರುವದಿನ್+ಇಳೆಗ್
ಉಪ್ಪರಿಸಿದರು +ಹರಹಿನಲಿ +ಹಾಯ್ದರು +ಹೊತ್ತ +ದುಗುಡದಲಿ
ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಹಿನಲಿ ಹಾಯ್ದರು ಹೊತ್ತ
(೨) ಬಿಸುಟರು, ಉಪ್ಪರಿಸಿದರು – ಪದಗಳ ಬಳಕೆ