ಪದ್ಯ ೧೪: ಪರಾಕ್ರಮಿಗಳು ಹೇಗೆ ಓಡಿದರು?

ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೊಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಬಾಹಿಯ ಚಮರಧಾರಿಗರು
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ (ಗದಾ ಪರ್ವ, ೧ ಸಂಧಿ, ೧೪ ಪದ್ಯ)

ತಾತ್ಪರ್ಯ:
ಬಿರುದಿನ ಹಲಗೆಯನ್ನು ಎಸೆದರು, ಧ್ವಜದ ಕಂಬಗಳನ್ನು ಹೊಡೆದುರುಳಿಸಿದರು. ಕಾಲಿಅನ್ ಪೆಂಡೆಯವನ್ನು ಭೂಮಿಗೆಸೆದರು. ಹಡಪ ಛತ್ರಚಾಮರಧಾರಿಗಳು ಅವನ್ನು ಕೆಳಗೆಸೆದರು. ಆಗ ರಥಿಕರೇ ರಥದಲ್ಲಿ ಉಳಿದರು. ರಥ, ಆನೆ, ಕುದುರೆಗಳನ್ನು ಹತ್ತಿದ ಸುಭಟರು ಭೂಮಿಗೆ ಧುಮುಕಿ ದೂರಕ್ಕೋಡಿದರು.

ಅರ್ಥ:
ಬಿರುದು: ಗೌರವ ಸೂಚಕ ಪದ; ಬಿಸುಟು: ಹೊರಹಾಕು; ಧ್ವಜ: ಬಾವುಟ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ, ಕಲ್ಲು; ಹರಿ: ಕಡಿ, ಕತ್ತರಿಸು; ಹೊಯ್ದು: ಹೊಡೆ; ಕಾಲ: ಪಾದ; ತೊಡರು: ಸಂಬಂಧ, ಸಂಕೋಲೆ; ಧರೆ: ಭೂಮಿ; ಹಡಪ: ಕೈಚೀಲ; ಚಮರಧಾರಿ: ಚಾಮರವನ್ನು ಹಿಡಿದವ; ದೊರೆ: ರಾಜ; ಉಳಿದ: ಮಿಕ್ಕ; ಬೆದರು: ಹೆದರು, ಭಯಗೊಳ್ಳು; ರಥ: ಬಂಡಿ; ಕರಿ: ಆನೆ; ವಾರುವ: ಕುದುರೆ; ಇಳೆ: ಭೂಮಿ; ಅಪ್ಪರಿಸು: ತಟ್ಟು, ತಾಗು; ಹರಹು: ವಿಸ್ತಾರ, ವೈಶಾಲ್ಯ; ಹಾಯ್ದು: ಹೊಡೆ; ಹೊತ್ತು: ಧರಿಸು; ಧುಗುಡ: ದುಃಖ;

ಪದವಿಂಗಡಣೆ:
ಬಿರುದ+ ಬಿಸುಟರು +ಧ್ವಜದ +ಕಂಬವ
ಹರಿಯ +ಹೊಯ್ದರು +ಕಾಲ +ತೊಡರನು
ಧರೆಗೆ +ಬಿಸುಟರು +ಹಡಪ+ ಬಾಹಿಯ +ಚಮರಧಾರಿಗರು
ದೊರೆಗಳ್+ಉಳಿದರು +ಬೆದರಿ +ರಥದಲಿ
ಕರಿಗಳಲಿ +ವಾರುವದಿನ್+ಇಳೆಗ್
ಉಪ್ಪರಿಸಿದರು +ಹರಹಿನಲಿ +ಹಾಯ್ದರು +ಹೊತ್ತ +ದುಗುಡದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹರಹಿನಲಿ ಹಾಯ್ದರು ಹೊತ್ತ
(೨) ಬಿಸುಟರು, ಉಪ್ಪರಿಸಿದರು – ಪದಗಳ ಬಳಕೆ

ಪದ್ಯ ೩೬: “ಸೋತೆನು ತಂದೆ”, ಎಂದು ದುರ್ಯೋಧನನು ಏಕೆ ಹೇಳಿದ?

ಸ್ಥಳವೆ ಜಲರೂಪದಲಿ ಜಲವೇ
ಸ್ಥಳದ ಪಾಡಿನಲಿದ್ದುದನು ಕೆಲ
ಬಲನ ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು
ಹೂಳಹನೇ ಕಂಡೆನು ವಿವೇಕದ
ಕಳಿವು ಚಿತ್ತದ ಸೆರೆದುಹಾರದೊ
ಳುರಿದವಕ್ಷಿಗಳಿಂತು ಸೋತೆನು ತಂದೆ ಕೇಳೆಂದ (ಸಭಾ ಪರ್ವ, ೧೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆ ಆಲಯದಲ್ಲಿ ನೆಲವು ನೀರಿನಂತೆ ನೀರೇ ನೆಲದಂತೆ ಕಾಣುತ್ತಿತ್ತು. ಅಕ್ಕಪಕ್ಕದ ಭಿತ್ತಿಯ ಕಂಬಗಳು, ಕಂಬದ ನಡುವೆ ಭಿತ್ತಿಗಳು ಇರುವಂತೆ ಬೆಳಕಿನಲ್ಲಿ ಕಾಣಿಸಿತು. ವಿವೇಕ ಹಾರಿಹೋಯಿತು, ಮನಸ್ಸಿನ ನಿರ್ಧಾರ ತಪ್ಪಿ ಕಣ್ಣುಗಳು ಉರಿದ ಹಾಗಾಯಿತು, ಅಪ್ಪಾ ನಾನು ಸೋತುಹೋದೆ ಎಂದು ತನ್ನ ಅಳಲನ್ನು ತೋಡಿಕೊಂಡನು.

ಅರ್ಥ:
ಸ್ಥಳ: ಜಾಗ; ಜಲ: ನೀರು; ರೂಪ: ಆಕಾರ, ಆಕೃತಿ; ಪಾಡಿ: ಕಾಡು, ಪ್ರಾಂತ್ಯ; ಕೆಲಬಲ:ಅಕ್ಕಪಕ್ಕ; ಭಿತ್ತಿ: ಮುರಿಯುವ, ಒಡೆಯುವ; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ನಡುವೆ: ಮಧ್ಯ; ಭಿತ್ತಿ: ಗೋಡೆ, ಆಶ್ರಯ; ಹೊಳಹು: ಪ್ರಕಾಶ, ಕಾಂತಿ; ಕಂಡು: ನೋಡು; ವಿವೇಕ: ಯುಕ್ತಾಯುಕ್ತ ವಿಚಾರ; ಅಳಿವು: ಸಾವು; ಚಿತ್ತ: ಮನಸ್ಸು; ಸೆರೆ: ಹಿಡಿತ; ಹಾರು: ಲಂಘಿಸು, ಜಿಗಿ; ಉರಿ: ಜ್ವಾಲೆ; ಅಕ್ಷಿ: ಕಣ್ಣು; ಸೋಲು: ಪರಾಭವ; ತಂದೆ: ಅಪ್ಪ; ಕೇಳು: ಆಲಿಸು;

ಪದವಿಂಗಡಣೆ:
ಸ್ಥಳವೆ +ಜಲರೂಪದಲಿ+ ಜಲವೇ
ಸ್ಥಳದ +ಪಾಡಿನಲ್+ಇದ್ದುದನು +ಕೆಲ
ಬಲನ+ ಭಿತ್ತಿಯ+ ಕಂಬ +ಕಂಬದ+ ನಡುವೆ +ಭಿತ್ತಿಗಳು
ಹೂಳಹನೇ +ಕಂಡೆನು +ವಿವೇಕದ
ಕಳಿವು +ಚಿತ್ತದ +ಸೆರೆದು+ಹಾರದೊಳ್
ಉರಿದವ್+ಅಕ್ಷಿಗಳ್+ಇಂತು +ಸೋತೆನು+ ತಂದೆ+ ಕೇಳೆಂದ

ಅಚ್ಚರಿ:
(೧) ಪದಗಳ ಬಳಕೆ – ಸ್ಥಳವೆ ಜಲರೂಪದಲಿ ಜಲವೇ ಸ್ಥಳ; ಭಿತ್ತಿಯ ಕಂಬ ಕಂಬದ ನಡುವೆ ಭಿತ್ತಿಗಳು

ಪದ್ಯ ೪೩: ವಿಷ್ಣುವು ಯಾವ ರೂಪದಲ್ಲಿ ಹಿರಣ್ಯಕಶಿಪುವಿನ ಮುಂದೆ ಬಂದನು?

ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ (ಸಭಾ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪ್ರಹ್ಲಾದನಿಗೆ ತಂದೆಯಿಂದಾದ ಹಿಂಸೆ ಬೇಸರಗಳನ್ನು ಶ್ರೀಹರಿಯ ನಾಮಸ್ಮರಣೆಯು ಕಳೆದವು. ಬಳಿಕ ಹಿರಣ್ಯಕಶಿಪುವು ಈ ಕಂಬದಲಿ ನಿನ್ನ ಶ್ರೀಹರಿಯನ್ನು ತೋರಿಸು ಎನ್ನುತ್ತಾ ದೃಷ್ಟಿಸಿದ ಕಂಬದಲ್ಲಿ ರೌದ್ರನಾದ ಶ್ರೀನರಸಿಂಹನ ಆವಿರ್ಭಾವವಾಯಿತು. ಆ ನರಸಿಂಹಸ್ವಾಮಿಯ ಕಣ್ನುಗಳು ಸಿಡಿಲಿನ ಸಹೋದರರಂತಿದ್ದವು, ಅವನ ಹಣೆಯ ಬೆಂಕಿಯು ಬೀದಿಯನ್ನೇ ಉರಿಸಿದವು.

ಅರ್ಥ:
ಕಾದು: ಹೋರಾದು; ನಾಮ: ಹೆಸರು; ಅಸುರ: ರಾಕ್ಷಸ; ಬೇಸರ: ಬೇಜಾರು, ದುಃಖ; ಬಳಿಕ: ನಂತರ; ದಯ: ಕರುಣೆ; ಅಂಬುಧಿ: ಸಾಗರ; ದನುಜ: ರಾಕ್ಷಸ; ಪತಿ: ಒಡೆಯ; ದಿಟ್ಟಿಸು: ನೋಡು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಆವಿರ್ಭಾವ: ಪ್ರಕಟವಾಗುವುದು; ಸಿಡಿಲು: ಚಿಮ್ಮು; ಸಹೋದರ: ತಮ್ಮ/ಅಣ್ಣ; ಕಣ್ಣು: ನಯನ; ಭಾಳ: ಹಣೆ; ಬೀದಿ: ರಸ್ತೆ; ಕಿಚ್ಚು: ಬೆಂಕಿ; ರೌದ್ರ: ಭಯಂಕರ; ರೂಪ: ಆಕಾರ;

ಪದವಿಂಗಡಣೆ:
ಕಾದುದ್+ಈತನ +ನಾಮವ್+ಆ+ ಪ್ರ
ಹ್ಲಾದನ್+ಅಸರು +ಬೇಸರನು +ಬಳಿಕ್
ಈ+ ದಯಾಂಬುಧಿ +ದನುಜಪತಿ +ದಿಟ್ಟಿಸಿದ +ಕಂಬದಲಿ
ಆದುದ್+ಆವಿರ್ಭಾವ +ಸಿಡಿಲಿನ
ಸೋದರದ+ ಕಣ್ಣುಗಳ +ಭಾಳದ
ಬೀದಿ+ಕಿಚ್ಚಿನ +ರೌದ್ರದಲಿ +ನರಸಿಂಹ+ ರೂಪಾಗಿ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಯಾಂಬುಧಿ ದನುಜಪತಿ ದಿಟ್ಟಿಸಿದ
(೨) ನರಸಿಂಹನ ವರ್ಣನೆ: ಆದುದಾವಿರ್ಭಾವ ಸಿಡಿಲಿನ ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ