ಪದ್ಯ ೭೬: ಸೇನೆಯು ಏನೆಂದು ನಿಶ್ಚೈಸಿದರು?

ಹುರುಳುಗೆಟ್ಟುದು ಗರುವತನವೆಂ
ದರಸನಾಚಿದನಧಿಕ ಶೌರ್ಯೋ
ತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟದಳಿವ ನಿಶ್ಚೈಸಿ (ವಿರಾಟ ಪರ್ವ, ೯ ಸಂಧಿ, ೭೬ ಪದ್ಯ)

ತಾತ್ಪರ್ಯ:
ತಮ್ಮ ಅಭಿಮಾನಕ್ಕೆ ಕುಂದು ಬಂದಿತೆಂದು ಕೌರವನು ನಾಚಿಕೊಂಡು ಮಹಾ ಶೌರ್ಯದಿಂದ ಮತ್ತೆ ಯುದ್ಧಕ್ಕೆ ನಿಂತನು. ರಾಜನಿಗುಂಟಾದ ಸಂಕಟವನ್ನು ಕಂಡು, ಸೈನ್ಯದ ನಾಯಕರು ಗುಂಪುಗಟ್ಟಿ, ಸಾವು ಇಲ್ಲವೆ ಗೆಲುವು ಎರಡರೊಳಗೊಂದಾಗಬೇಕೆಂದು ನಿಶ್ಚೈಸಿದರು.

ಅರ್ಥ:
ಹುರುಳು: ಸತ್ತ್ವ, ಸಾರ; ಕೆಟ್ಟು: ಹಾಳು; ಗರುವ: ಬಲಶಾಲಿ, ಗರ್ವ; ಅರಸ: ರಾಜ; ನಾಚು: ಅವಮಾನ ಹೊಂದು; ಅಧಿಕ: ಹೆಚ್ಚು; ಶೌರ್ಯ: ಪರಾಕ್ರಮ; ಉತ್ಕರುಷ:ಹೆಚ್ಚಳ, ಮೇಲ್ಮೆ; ಕಲಿ: ಶೂರ; ನಿಂದು: ನಿಲ್ಲು; ಕಾಳಗ: ಯುದ್ಧ; ದೊರೆ: ರಾಜ; ದುಗುಡ: ದುಃಖ; ಕಂಡು: ನೋಡು; ಉರವಣಿಸು: ಆತುರಿಸು; ಸಕಲ: ಎಲ್ಲಾ; ಸುಭಟ: ಸೈನಿಕರು; ಹೊರಳಿಗಟ್ಟು: ಒಟ್ಟು ಸೇರು; ಸೇನೆ: ಸೈನ್ಯ; ನಿಚ್ಚಟ: ಸ್ಪಷ್ಟವಾದುದು; ಅಳಿ: ನಾಶ; ನಿಶ್ಚೈಸು: ನಿರ್ಧರಿಸು;

ಪದವಿಂಗಡಣೆ:
ಹುರುಳುಗೆಟ್ಟುದು +ಗರುವತನವೆಂದ್
ಅರಸ+ ನಾಚಿದನ್+ಅಧಿಕ +ಶೌರ್ಯ
ಉತ್ಕರುಷದಲಿ +ಕಲಿಯಾಗಿ+ ನಿಂದನು+ ಮತ್ತೆ +ಕಾಳಗಕೆ
ದೊರೆಯ +ದುಗುಡವ +ಕಂಡು +ತಮತಮಗ್
ಉರವಣಿಸಿದರು +ಸಕಲ +ಸುಭಟರು
ಹೊರಳಿಗಟ್ಟಿತು +ಸೇನೆ +ನಿಚ್ಚಟದಳಿವ +ನಿಶ್ಚೈಸಿ

ಅಚ್ಚರಿ:
(೧) ದುರ್ಯೋಧನ ಶಕ್ತಿ – ಅಧಿಕ ಶೌರ್ಯೋತ್ಕರುಷದಲಿ ಕಲಿಯಾಗಿ ನಿಂದನು ಮತ್ತೆ ಕಾಳಗಕೆ

ಪದ್ಯ ೨೮: ಕರ್ಣನು ಹಿಂದಕ್ಕೆ ಹೇಗೆ ಸರಿದನು?

ಅರಿಭಟನ ಶರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರ ಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ (ವಿರಾಟ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅರ್ಜುನನು ಕರ್ಣನ ಬಾಣಗಳನ್ನು ನಿಮಿಷದೊಳಗೆ ಸಂಹರಿಸಿ, ಎರಡು ಬಾಣಗಳಿಂದ ಕರ್ನನ ಸಾರಥಿಯನ್ನೂ, ಐದು ಬಾಣಗಳಿಂದ ಅವನ ಕುದುರೆಗಳನ್ನೂ, ನಾಲ್ಕು ಬಾಣಗಳಿಂದ ಅವನ ಕೈಯಲ್ಲಿದ್ದ ಬಿಲ್ಲನ್ನೂ ಕಡಿದು ಹಾಕಲು, ಗೆಲುವಿನ ಆವೇಶದಲ್ಲಿದ್ದ ಕರ್ಣನು ಮೌನದಿಂದ ಹಿಂದಕ್ಕೆ ಸರಿದನು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಶರ: ಬಾಣ; ಜಾಲ: ಬಲೆ; ಸಂಹರಿಸು: ನಾಶಮಾದು; ನಿಮಿಷ: ಕ್ಷಣಮಾತ್ರ; ಸಾರಥಿ: ಸೂತ; ಅಂಬು: ಬಾಣ; ಹಯ: ಕುದುರೆ; ಕರ: ಕೈ; ಬಿಲ್ಲು: ಚಾಪ; ಕಡಿ: ಸೀಳು; ಭಗ್ನ: ನಾಶ; ಉತ್ಕರ್ಷ:ಹೆಚ್ಚಳ, ಮೇಲ್ಮೆ; ಭಂಗ: ನಾಶ; ಮುರಿ: ಸೀಳು; ಮೌನ: ಸುಮ್ಮನಿರುವಿಕೆ;

ಪದವಿಂಗಡಣೆ:
ಅರಿಭಟನ +ಶರಜಾಲವನು +ಸಂ
ಹರಿಸಿದನು +ನಿಮಿಷದಲಿ +ಫಲುಗುಣನ್
ಎರಡು +ಶರದಲಿ +ಸಾರಥಿಯನ್+ಐದ್+ಅಂಬಿನಲಿ +ಹಯವ
ಶರ +ಚತುಷ್ಟಯದಿಂದ +ಕರ್ಣನ
ಕರದ +ಬಿಲ್ಲನು +ಕಡಿಯೆ +ಭಗ್ನ
ಉತ್ಕರುಷ+ ಭಂಗಿತನಾಗಿ +ಮುರಿದನು +ಮೌನದಲಿ +ಕರ್ಣ

ಅಚ್ಚರಿ:
(೧) ಕರ್ಣನು ಹಿಂದಕ್ಕೆ ಸರಿದ ಪರಿ – ಭಗ್ನೋತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ

ಪದ್ಯ ೨೯: ಕರ್ಣನು ಪಟ್ಟಾಭಿಷಿಕ್ತನಾದ ನಂತರದ ದೃಶ್ಯ ಹೇಗಿತ್ತು?

ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ (ಕರ್ಣ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕರ್ಣನಿಗೆ ಸೇನಾಧಿಪತ್ಯದ ಪಟ್ಟಾಭಿಷೇಕವಾಯಿತು. ಬ್ರಾಹ್ಮಣರು ಮಂತ್ರಾಕ್ಷತೆಗಳ ಮಳೆ ಕರೆದರು. ಗುಡುಗಿನ ಮೊಳಗಿನಂತಹ ಜಯಘೋಷಗಳಾದವು. ಅಶ್ವತ್ಥಾಮನೇ ಮೊದಲಾದ ಮಹಾಪ್ರಧಾನರು ಸೇನಾಧಿಪತಿಯನ್ನು ಕಂಡು ಗೌರವಿಸಿದರು. ವಂದಿಮಾಗಧರು ಕರ್ಣನ ಬಿರುದುಗಳನ್ನು ಹೊಗಳಿದರು.

ಅರ್ಥ:
ವಿರಚಿಸು: ನಿರ್ಮಿಸು; ಅಭಿಷೇಕ:ಪಟ್ಟ ಕಟ್ಟುವಾಗ ಮಾಡಿಸುವ ಮಂಗಳಸ್ನಾನ; ಪಟ್ಟ: ಪದವಿ; ಉತ್ಕರುಷ: ಹೆಚ್ಚಳ; ಮಂತ್ರಾಕ್ಷತೆ: ಭಕಾರ್ಯಗಳಲ್ಲಿ ಮಂತ್ರ ಪೂರ್ವಕವಾಗಿ ಬಳಸುವ ಅರಿಸಿನ ಯಾ ಕುಂಕುಮದಲ್ಲಿ ಕಲಸಿದ ಅಕ್ಕಿ; ಮಳೆ: ವರ್ಷ; ಕರೆ: ಬರೆಮಾಡು; ಅವನೀಸುರ: ಬ್ರಾಹ್ಮಣ; ಅವನಿ: ಭೂಮಿ; ಜಯರವ: ವಿಜಯಘೋಷ; ಮೇಘ: ಮೋಡ; ಘೋಷ: ಜೋರಾದ ಶಬ್ದ; ಗುರು: ಆಚಾರ್ಯ; ಸುತ: ಮಗ; ಆಗಿ: ಉಳಿದ; ಮಹಾ: ಶ್ರೇಷ್ಠ; ಪ್ರಧಾನ: ಮುಖ್ಯ; ದರುಶನ: ನೋಟ; ಬಿರುದು: ಗೌರವಸೂಚಕ ಹೆಸರು; ಉಬ್ಬಟೆ: ಅತಿಶಯ, ಹಿರಿಮೆ; ಲಹರಿ: ರಭಸ, ಆವೇಗ; ಮಸಗು: ಹರಡು; ವಂದಿ:ಹೊಗಳು ಭಟ್ಟ; ಜಲಧಿ: ಸಾಗರ;

ಪದವಿಂಗಡಣೆ:
ವಿರಚಿಸಿತು +ಪಟ್ಟಾಭಿಷೇಕ+
ಉತ್ಕರುಷ +ಮಂತ್ರಾಕ್ಷತೆಯ +ಮಳೆಗಳ
ಕರೆದರ್+ಅವನೀಸುರರು+ ಜಯ+ರವ+ಮೇಘ+ಘೋಷದಲಿ
ಗುರುಸುತ+ಆದಿ+ ಮಹಾ+ಪ್ರಧಾನರು
ದರುಶನವ +ನೀಡಿದರು +ಕರ್ಣನ
ಬಿರುದಿನ್+ಉಬ್ಬಟೆ+ಲಹರಿ +ಮಸಗಿತು +ವಂದಿ+ಜಲಧಿಯಲಿ

ಅಚ್ಚರಿ:
(೧) ಉಪಮಾನಗಳ ಪ್ರಯೋಗ: ಮಂತ್ರಾಕ್ಷತೆಯ ಮಳೆ; ಜಯರವಮೇಘ ಘೋಷ; ಬಿರುದಿನುಬ್ಬಟೆ ಲಹರಿ ಮಸಗಿತು ವಂದಿ ಜಲಧಿಯಲಿ