ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನಭೂಷಣವ
ಅಭವಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ (ವಿರಾಟ ಪರ್ವ, ೧೧ ಸಂಧಿ, ೭೮ ಪದ್ಯ)
ತಾತ್ಪರ್ಯ:
ವೈಭವವು ಒಂದಕ್ಕೆ ಐದಾಯಿತು. ಬ್ರಾಹ್ಮಣ ಸಭೆಯನ್ನು ಯುಧಿಷ್ಠಿರನು ಆರಾಧಿಸಿದನು. ರಾಜರು ವಧೂ ವರರಿಗೆ ರತ್ನಾಭರಣಗಳನ್ನು ಮುಯ್ಯಿ ಮಾಡಿದರು. ಅಭಿಮನ್ಯುವು ಶ್ರೀಕೃಷ್ಣನ ಪತ್ನಿಯರಿಗೆ ನಮಸ್ಕರಿಸಿದನು. ಅವರು ಶಿವನ ಹೋಲುವ ಅಸಮಾನ ವೀರನಾಗು ಎಂದು ಉತ್ತಮ ಕುಲಭೂಷಣನಾದ ಅಭಿಮನ್ಯುವನ್ನು ಆಶೀರ್ವದಿಸಿದರು.
ಅರ್ಥ:
ವಿಭವ: ಸಿರಿ, ಸಂಪತ್ತು; ಐವಡಿ: ಐದು ಪಟ್ಟು; ದ್ವಿಜ: ಬ್ರಾಹ್ಮಣ; ಸಭೆ: ಓಲಗ, ದರ್ಬಾರು; ಆರಾಧಿಸು: ಪೂಜಿಸು; ಅವನೀ: ಭೂಮಿ; ವಿಭು: ಒಡೆಯ; ಇತ್ತು: ನೀಡು; ಉಡುಗೊರೆ: ಕಾಣಿಕೆ; ರತ್ನ: ಬೆಲೆಬಾಳುವ ಮಣಿ; ಭೂಷಣ: ಅಲಂಕರಿಸುವುದು, ಶೃಂಗರಿಸುವುದು; ಅಭವ: ಹುಟ್ಟಿಲ್ಲದುದು, ಬ್ರಹ್ಮ, ಶಿವ; ಸನ್ನಿಭ: ಸದೃಶ; ವೀರ: ಪರಾಕ್ರಮ; ಇಭಗಮನೆ:ಆನೆಯಂತೆ ಮಂದವಾದ ನಡಿಗೆ ಉಳ್ಳವಳು; ಅರಸಿ: ರಾಣಿ; ಅಭಿಜನ: ವಂಶ, ಪರಿಜನ; ಅಮಲ: ನಿರ್ಮಲ; ತಿಲಕ: ಶ್ರೇಷ್ಠ; ಹರಸು: ಆಶೀರ್ವದಿಸು; ಹರುಷ: ಸಂತಸ;
ಪದವಿಂಗಡಣೆ:
ವಿಭವವ್+ಐವಡಿಯಾಗೆ +ಸದ್ವಿಜ
ಸಭೆಯನ್+ಆರಾಧಿಸಿದನ್+ಅವನೀ
ವಿಭುಗಳ್+ಇತ್ತರು +ಮುಯ್ಗಳ್+ಉಡುಗೊರೆ +ರತ್ನ+ಭೂಷಣವ
ಅಭವಸನ್ನಿಭ +ವೀರನಾಗೆಂದ್
ಇಭಗಮನೆಯರು +ಕೃಷ್ಣನ್+ಅರಸಿಯರ್
ಅಭಿಜನಾಮಲ+ ತಿಲಕನನು +ಹರಸಿದರು +ಹರುಷದಲಿ
ಅಚ್ಚರಿ:
(೧) ಆಶೀರ್ವದಿಸುವ ಪರಿ – ಅಭವಸನ್ನಿಭ ವೀರನಾಗೆಂದಿಭಗಮನೆಯರು ಕೃಷ್ಣನರಸಿಯರಭಿಜನಾಮಲ ತಿಲಕನನು ಹರಸಿದರು