ಮಡಿದ ಕರಿಗಳ ಕಾಯವನು ನಿ
ಟ್ಟೊಡಲ ತುರಗಂಗಳನು ಮುಗ್ಗಿದ
ಕೆಡೆದ ತೇರಿನ ಗಾಲಿಗಳ ಕೊಂಡಿಟ್ಟನಾ ಭೀಮ
ಎಡೆಯಲಾ ಕರಿಯೊಡಲನಾ ಹಯ
ದೊಡಲನಾ ರಥ ಚಕ್ರವನು ಕಡಿ
ಕಡಿದು ಬಿಸುಟನು ಹೊದ್ದಿದನು ಕಟ್ಟಳವಿಯಲಿ ಕರ್ಣ (ದ್ರೋಣ ಪರ್ವ, ೧೩ ಸಂಧಿ, ೫೯ ಪದ್ಯ)
ತಾತ್ಪರ್ಯ:
ಆಗ ಭೀಮನು ಅಲ್ಲಿ ಸತ್ತು ಬಿದ್ದಿದ್ದ ಆನೆ, ಕುದುರೆಗಳನ್ನು, ರಥಗಳ ಗಾಲಿಗಳನ್ನು, ಹಿಡಿದೆತ್ತಿ ಕರ್ಣನ ಮೇಲೆಸೆದನು. ಕರ್ಣನು ಆ ಆನೆಯ ದೇಹವನ್ನು, ಕುದುರೆಯ ಅಂಗವನ್ನು, ರಥದ ಚಕ್ರವನ್ನು ಮಧ್ಯದಲ್ಲೇ ಕತ್ತರಿಸಿ ಬಿಸಾಡಿದನು.
ಅರ್ಥ:
ಮಡಿ: ಸಾವು; ಕರಿ: ಆನೆ; ಕಾಯ: ದೇಹ; ಒಡಲು: ದೇಹ; ತುರಗ: ದೇಹ; ಅಂಗ: ದೇಹದ ಭಾಗ; ಮುಗ್ಗು: ಬಾಗು, ಮಣಿ; ಕೆಡೆ: ಬೀಳು, ಕುಸಿ; ತೇರು: ಬಂಡಿ, ರಥ; ಗಾಲಿ: ಚಕ್ರ; ಕೊಂಡು: ಬರೆಮಾಡು; ಎಡೆ: ಸುಲಿ, ತೆಗೆ; ಕರಿ: ಆನೆ; ಹಯ: ಕುದುರೆ; ಕಡಿ: ಕತ್ತರಿಸು; ಬಿಸುಟು: ಹೊರಹಾಕು; ಹೊದ್ದು: ಆವರಿಸು, ಮುಸುಕು; ಅಳವಿ: ಯುದ್ಧ;
ಪದವಿಂಗಡಣೆ:
ಮಡಿದ +ಕರಿಗಳ +ಕಾಯವನು +ನಿ
ಟ್ಟೊಡಲ +ತುರಗ್+ಅಂಗಳನು +ಮುಗ್ಗಿದ
ಕೆಡೆದ +ತೇರಿನ +ಗಾಲಿಗಳ+ ಕೊಂಡಿಟ್ಟನಾ +ಭೀಮ
ಎಡೆಯಲ್+ಆ+ ಕರಿ+ಒಡಲನ್+ಆ+ ಹಯದ್
ಒಡಲನ್+ಆ+ ರಥ +ಚಕ್ರವನು +ಕಡಿ
ಕಡಿದು +ಬಿಸುಟನು +ಹೊದ್ದಿದನು +ಕಟ್ಟಳವಿಯಲಿ +ಕರ್ಣ
ಅಚ್ಚರಿ:
(೧) ಕಾಯ, ಒಡಲು; ತುರಗ, ಹಯ; ಗಾಲಿ, ಚಕ್ರ – ಸಮಾನಾರ್ಥಕ ಪದ