ಕಳುಹಿದನು ಲೋಮಶನನವನೀ
ತಳಕೆ ಸುರಪತಿ ಸಿತಹಯನ ಕೌ
ಶಲವನೊಡಹುಟ್ಟಿದರಿಗರುಹಲಿಕಭ್ರಮಾರ್ಗದಲಿ
ಇಳಿದನಾ ಮುನಿಪತಿ ಧರಿತ್ರೀ
ತಳಕೆ ಕಾಮ್ಯಕನಾಮ ವನದಲಿ
ತಳಿರಗೂಡಾರದಲಿ ಕಂಡನು ಧರ್ಮನಂದನನ (ಅರಣ್ಯ ಪರ್ವ, ೧೦ ಸಂಧಿ, ೨ ಪದ್ಯ)
ತಾತ್ಪರ್ಯ:
ದೇವಲೋಕಕ್ಕೆ ಹೋಗಿದ್ದ ಲೋಮಶ ಮಹರ್ಷಿಗೆ ಅರ್ಜುನನ ವಿಜಯವನ್ನು ಧರ್ಮಜನಿಗೆ ತಿಳಿಸಲು ದೇವೇಂದ್ರನು ಧರ್ಮರಾಜನ ಬಳಿಗೆ ಕಳುಹಿಸಿದನು. ಲೋಮಶನು ಆಕಾಶಮಾರ್ಗವಾಗಿ ಕಾಮಾಕ್ಯವನದಲ್ಲಿ ಇಳಿದು ಪರ್ಣಕುಟೀರದಲ್ಲಿದ್ದ ಧರ್ಮರಾಜನನ್ನು ಕಂಡನು.
ಅರ್ಥ:
ಕಳುಹು: ತೆರಳು; ತಳ: ಕೆಳಗು, ಪಾತಾಳ; ಸುರಪತಿ: ಇಂದ್ರ; ಸಿತಹಯ: ಬಿಳಿಯ ಕುದುರೆ; ಕೌಶಲ: ಚದುರು; ಒಡಹುಟ್ಟು: ಜೊತೆಗೆ ಜನ್ಮತಾಳು; ಅರುಹು: ಹೇಳು; ಅಭ್ರ: ಆಗಸ; ಮಾರ್ಗ: ದಾರಿ; ಇಳಿ: ಕೆಳಗೆ ಬಾ; ಮುನಿ: ಋಷಿ; ಪತಿ: ಒಡೆಯ; ಧರಿತ್ರೀ: ಭೂಮಿ; ವನ: ಕಾಡು; ನಾಮ: ಹೆಸರು; ತಳಿರಗೂಡು: ಪರ್ಣಕುಟೀರ; ಕಂಡು: ನೋಡು; ನಂದನ: ಮಗ; ಅವನೀ: ಭೂಮಿ;
ಪದವಿಂಗಡಣೆ:
ಕಳುಹಿದನು +ಲೋಮಶನನ್+ಅವನೀ
ತಳಕೆ+ ಸುರಪತಿ +ಸಿತಹಯನ +ಕೌ
ಶಲವನ್+ಒಡಹುಟ್ಟಿದರಿಗ್+ಅರುಹಲಿಕ್+ಅಭ್ರ+ಮಾರ್ಗದಲಿ
ಇಳಿದನಾ+ ಮುನಿಪತಿ+ ಧರಿತ್ರೀ
ತಳಕೆ +ಕಾಮ್ಯಕನಾಮ+ ವನದಲಿ
ತಳಿರಗೂಡಾರದಲಿ+ ಕಂಡನು +ಧರ್ಮನಂದನನ
ಅಚ್ಚರಿ:
(೧) ಅವನೀತಳ, ಧರಿತ್ರೀತಳ – ಭೂಮಿಯನ್ನು ಕರೆದ ಪರಿ
(೨) ಅರ್ಜುನನನ್ನು ಕರೆದ ಪರಿ – ಸಿತಹಯನ
(೩) ಮುನಿಪತಿ, ಸುರಪತಿ – ಪ್ರಾಸ ಪದಗಳು