ಕೊಲುವುದನುಚಿತವೆಂದು ಗಗನ
ಸ್ಥಳಕೆ ರಥವನು ಬಿಸುಡೆ ಯೋಜನ
ದಳವಿಯಲಿ ಲಂಘಿಸಿತು ಹಯತತಿ ಸೂತಜರು ಸಹಿತ
ಎಲೆಲೆ ಕಟಕಾಚಾರ್ಯನಕಟಾ
ಕೊಳುಗುಳದೊಳಪದೆಸೆಯ ಕಂಡನೊ
ಗೆಲಿದನೋ ರಿಪುವೆಂದುಲಿಯೆ ನಿಜಪಾಯದಳವಂದು (ದ್ರೋಣ ಪರ್ವ, ೧೩ ಸಂಧಿ, ೧೬ ಪದ್ಯ)
ತಾತ್ಪರ್ಯ:
ಗುರುವನ್ನು ಕೊಲ್ಲುವುದು ಉಚಿತವಲ್ಲೆಂದು ಬಗೆದ ಭೀಮನು ದ್ರೋಣನ ಹೊಸ ರಥವನ್ನು ಹಿಡಿದು ಮತ್ತೆ ಆಕಾಶಕ್ಕೆಸೆದನು. ಸೂತ, ಕುದುರೆ, ದ್ರೋಣರೊಡನೆ ಅದು ಯೋಜನ ದೂರಕ್ಕೆ ಹೋಗಿ ಬಿದ್ದಿತು. ಸೇನಾಪತಿಯು ಯುದ್ಧದಲ್ಲಿ ದುರ್ಗತೀಗೀಡಾದನು, ಶತ್ರುವು ಜಯಿಸಿದನು ಎಂದು ಕೌರವ ಸೈನ್ಯದ ಕಾಲಾಳುಗಳು ಕೂಗಿಕೊಂಡರು.
ಅರ್ಥ:
ಕೊಲು: ಸಾಯಿಸು; ಅನುಚಿತ: ಸರಿಯಿಲ್ಲದು; ಗಗನ: ಆಗಸ; ಸ್ಥಳ: ಜಾಗ; ರಥ: ಬಂಡಿ; ಬಿಸುಡು: ಹೊರಹಾಕು; ಯೋಜನ: ದೂರದ ಅಳತೆಯ ಒಂದು ಪ್ರಮಾಣ, ಹನ್ನೆರಡು ಮೈಲು; ಅಳವು:ಅಳತೆ; ಲಂಘಿಸು: ಹಾರು; ಹಯ: ಕುದುರೆ; ತತಿ: ಗುಂಪು; ಸೂತ: ರಥವನ್ನು ನಡೆಸುವವನು, ಸಾರ; ಸಹಿತ: ಜೊತೆ; ಕಟಕ: ಸೈನ್ಯ; ಆಚಾರ್ಯ: ಗುರು; ಅಕಟ: ಅಯ್ಯೋ; ಕೊಳುಗುಳ: ರಣರಂಗ; ಅಪದೆಸೆ: ಅಪಯಶಸ್ಸು; ಕಂಡು: ನೋಡು; ಗೆಲಿ: ಜಯಿಸು; ರಿಪು: ವೈರಿ; ಉಲಿ: ಕೂಗು; ಪಾಯದಳ: ಸೈನಿಕ;
ಪದವಿಂಗಡಣೆ:
ಕೊಲುವುದ್+ಅನುಚಿತವೆಂದು +ಗಗನ
ಸ್ಥಳಕೆ +ರಥವನು +ಬಿಸುಡೆ +ಯೋಜನದ್
ಅಳವಿಯಲಿ +ಲಂಘಿಸಿತು +ಹಯತತಿ +ಸೂತಜರು +ಸಹಿತ
ಎಲೆಲೆ +ಕಟಕಾಚಾರ್ಯನ್+ಅಕಟಾ
ಕೊಳುಗುಳದೊಳ್+ಅಪದೆಸೆಯ +ಕಂಡನೊ
ಗೆಲಿದನೋ +ರಿಪುವೆಂದ್+ಉಲಿಯೆ +ನಿಜ+ಪಾಯದಳವಂದು
ಅಚ್ಚರಿ:
(೧) ಭೀಮನು ರಥವನ್ನು ಎಸೆದ ಕಾರಣ – ಕೊಲುವುದನುಚಿತವೆಂದು ಗಗನ ಸ್ಥಳಕೆ ರಥವನು ಬಿಸುಡೆ
(೨) ಕಟಕ, ಅಕಟ – ಪ್ರಾಸ ಪದಗಳು