ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೨೭ ಪದ್ಯ)
ತಾತ್ಪರ್ಯ:
ಎಲೈ ಕೌರವ, ಗದಾಯುದ್ಧವನ್ನು ಅಭ್ಯಾಸ ಮಾಡಿದವರಿಗೆ ನಾನೀಗ ಹೊಡೆಯುವ ಹೊಡೆತವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ. ನಿನ್ನನ್ನು ನೀನು ಕಾಪಾಡಿಕೊಳ್ಳಲು ಶಿವನ ರಕ್ಷಣೆಯನ್ನು ಬೇಡು, ನೀನಾದರೋ ಒಬ್ಬ ಅಲ್ಪ ಹೋಗು ಎನ್ನುತ್ತಾ ಭೀಮನು ವಿಷಾದ ಭರದಿಂದ ತನ್ನ ಕೈಯ ಶಕ್ತಿಯನ್ನೆಲ್ಲಾಬಿಟ್ಟು ಕೌರವನನ್ನು ಅಪ್ಪಳಿಸಿದನು.
ಅರ್ಥ:
ಕಾದುಕೋ: ರಕ್ಷಿಸು; ಭೇದ: ಸೀಳು, ಬಿರುಕು, ಛಿದ್ರ; ಸಂಭೇದ: ಸೀಳುವ; ಗದೆ: ಮುದ್ಗರ; ಅಭ್ಯಾಸಿ: ವಿದ್ಯಾರ್ಥಿ; ದುರ್ಭೇದ: ಕಷ್ಟಕರವಾದ; ನೋಡು: ವೀಕ್ಷಿಸು; ಹೊಯ್ಲು: ಹೊಡೆತ; ಮರೆ: ರಕ್ಷಣೆ; ಮಹೇಶ್ವರ: ಈಶ್ವರ; ಹೋದೆ: ಚಿಕ್ಕ ಗಿಡ, ಪೊದೆ; ಜಡಿ: ಗದರಿಸು, ಬೆದರಿಸು; ವಿಷಾದ: ದುಃಖ; ಭರ: ವೇಗ; ಕಾಣು: ತೋರು; ಕೈದಣಿ: ಕೈ ಆಯಾಸಗೊಳ್ಳು; ಅಪ್ಪಳಿಸು: ತಟ್ಟು, ತಾಗು; ಕಲಿ: ಶೂರ;
ಪದವಿಂಗಡಣೆ:
ಕಾದುಕೊಳು +ಕೌರವ +ಗದಾ+ಸಂ
ಭೇದದ್+ಅಭ್ಯಾಸಿಗಳಿಗಿದೆ +ದು
ರ್ಭೇದ +ನೋಡಾ +ಹೊಯ್ಲಿಗಿದು +ಮರೆವೊಗು +ಮಹೇಶ್ವರನ
ಹೋದೆ +ಹೋಗಿನ್ನೆನುತ +ಜಡಿದು +ವಿ
ಷಾದ+ಭರದಲಿ +ಮುಂದುಗಾಣದೆ
ಕೈದಣಿಯಲ್+ಅಪ್ಪಳಿಸಿದನು +ಕಲಿಭೀಮ +ಕುರುಪತಿಯ
ಅಚ್ಚರಿ:
(೧) ಸಂಭೇದ, ದುರ್ಭೇದ – ಪದಗಳ ಬಳಕೆ
(೨) ಕೌರವನನ್ನು ಹಂಗಿಸುವ ಪರಿ – ಹೋದೆ ಹೋಗಿನ್ನೆನುತ
(೩) ಕ ಕಾರದ ತ್ರಿವಳಿ ಪದ – ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ