ಪದ್ಯ ೩೨: ಯಾರಿಗೆ ಯಾರು ಶತ್ರುಗಳೆಂದು ವ್ಯಾಸರು ತಿಳಿಸಿದರು?

ಅಜ್ಞರವದಿರು ನೀವು ನೆರೆ ಸ
ರ್ವಜ್ಞರವದಿರಧರ್ಮನಿಷ್ಠರು
ಯಜ್ಞ ದೀಕ್ಷಿತರಿಂದು ನೀವು ಸಮಸ್ತ ಜಗವರಿಯೆ
ಅಜ್ಞರರಿಗಳು ನಿಪುಣರಿಗೆ ವರ
ಯಾಜ್ಞಿಕರಿಗಾಚಾರಹೀನರ
ಭಿಜ್ಞಮತವಿದು ತಪ್ಪದೆಂದನು ಮುನಿ ನೃಪಾಲಂಗೆ (ಸಭಾ ಪರ್ವ, ೧೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ವೇದವ್ಯಾಸರು ತಮ್ಮ ಮಾತನ್ನು ಮುಂದುವರಿಸುತ್ತಾ, ಕೌರವರು ತಿಳಿಯದವರು, ಅಜ್ಞಾನಿಗಳು, ನೀವು ಎಲ್ಲವನ್ನು ತಿಳಿದ ಸರ್ವಜ್ಞರು, ಅಧರ್ಮದಲ್ಲೇ ನಿಪುಣರಾದವರು ಅವರು, ನೀವು ಲೋಕವೇ ತಿಳಿದಮ್ತೆ ಯಜ್ಞದೀಕ್ಷಿತರಾದವರು. ತಿಳಿದವರಿಗೆ ತಿಳಿಯದವರು ಶತ್ರುಗಳು, ಆಚಾರಹೀನರಿಗೆ ಯಜ್ಞನಿರತರು ಶತ್ರುಗಳು. ತಿಳಿದವರು ಹೇಳುವ ಮಾತಿದು, ಇದು ಎಂದು ತಪ್ಪುವುದಿಲ್ಲ ಎಂದು ವ್ಯಾಸರು ತಿಳಿಸಿದರು.

ಅರ್ಥ:
ಅಜ್ಞ: ತಿಳಿವಳಿಕೆ ಇಲ್ಲದವನು, ದಡ್ಡ; ನೆರೆ: ಗುಂಪು; ಸರ್ವಜ್ಞ: ಎಲ್ಲಾ ತಿಳಿದವ; ಅಧರ್ಮ: ಕೆಟ್ಟ ಹಾದಿ; ನ್ಯಾಯವಲ್ಲದುದು; ನಿಷ್ಠ:ಶ್ರದ್ಧೆಯುಳ್ಳವನು; ಯಜ್ಞ: ಕ್ರತು, ಅಧ್ವರ; ದೀಕ್ಷೆ: ಸಂಸ್ಕಾರ, ವ್ರತ, ನಿಯಮ; ಸಮಸ್ತ: ಎಲ್ಲಾ; ಜಗ: ಜಗತ್ತು; ಅರಿ: ತಿಳಿ; ಅರಿ: ವೈರಿ; ನಿಪುಣ: ಪಾರಂಗತ, ಪ್ರವೀಣ; ವರ: ಶ್ರೇಷ್ಠ; ಯಾಜ್ಞಿಕ: ಯಜ್ಞ ಸಂಬಂಧಿತ ಕಾರ್ಯವನ್ನು ಮಾಡುವವ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ:ಕೆಟ್ಟದು, ಕೀಳಾದುದು; ಅಭಿಜ್ಞ: ಚೆನ್ನಾಗಿ ತಿಳಿದವನು; ಮತ: ವಿಚಾರ; ತಪ್ಪದು: ಆದಮೇಲೆ; ಮುನಿ: ಋಷಿ; ನೃಪಾಲ: ರಾಜ; ಅವದಿರು: ಅವರು;

ಪದವಿಂಗಡಣೆ:
ಅಜ್ಞರ್+ಅವದಿರು +ನೀವು +ನೆರೆ+ ಸ
ರ್ವಜ್ಞರ್+ ಅವದಿರ್+ಅಧರ್ಮ+ನಿಷ್ಠರು
ಯಜ್ಞ +ದೀಕ್ಷಿತರಿಂದು+ ನೀವು+ ಸಮಸ್ತ+ ಜಗವರಿಯೆ
ಅಜ್ಞರ್+ಅರಿಗಳು +ನಿಪುಣರಿಗೆ +ವರ
ಯಾಜ್ಞಿಕರಿಗ್+ಆಚಾರ+ಹೀನರ್
ಅಭಿಜ್ಞ+ಮತವಿದು+ ತಪ್ಪದೆಂದನು+ ಮುನಿ +ನೃಪಾಲಂಗೆ

ಅಚ್ಚರಿ:
(೧) ಅಜ್ಞರು, ಸರ್ವಜ್ಞ, ಯಜ್ಞ, ಅಭಿಜ್ಞ – ಜ್ಞ ಅಕ್ಷರದ ಬಳಕೆ

ಪದ್ಯ ೮೨: ಯಾರು ಮಗನಾಗಲು ಯೋಗ್ಯ?

ಇಹಪರದ ಸುಖ ಸಂಗತಿಯ ಸಂ
ಗ್ರಹಿಸಿ ವೇದಾಚಾರದಲಿ ಸ
ನ್ನಿಹಿತನಾಗಿ ಸಮಸ್ತ ಕಳೆಯ ಲಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ಈ ಲೋಕ ಮತ್ತು ಪರಲೋಕದಲ್ಲಿಯೂ ಸುಖವನ್ನು ಹೊಂದುವ ಆಚಾರವನ್ನು ನಡೆಸುತ್ತಾ, ವೇದವಿಹಿತ ಮಾರ್ಗದಲ್ಲಿ ಜೀವನವನ್ನು ನಡೆಸುತ್ತಾ, ಎಲ್ಲಾ ಕಲೆಗಳಲ್ಲಿಯೂ ನಿಪುಣನಾಗಿ, ಶತ್ರುಗಳನ್ನು ನಿಗ್ರಹಿಸಿ, ಶರಣಾಗತರನ್ನು ಪಾಲಿಸುತ್ತಿದ್ದರೆ ಅವನು ಮಗನೆಂದು ಕರೆಸಿಕೊಳ್ಳಲು ಯೋಗ್ಯನಾಗುತ್ತಾನೆ ಎಂದು ವಿದುರ ತಿಳಿಸಿದರು.

ಅರ್ಥ:
ಇಹ: ಈ ಲೋಕ, ಭೂಮಿ; ಪರ: ಪರಲೋಕ; ಸುಖ: ಸಂತೋಷ, ನಲಿವು; ಸಂಗತಿ: ವಿಚಾರ; ಸಂಗ್ರಹ: ಕ್ರೂಡಿಸು; ವೇದ: ಜ್ಞಾನ; ಆಚಾರ: ಕಟ್ಟುಪಾಡು, ಸಂಪ್ರದಾಯ; ಸನ್ನಿಹಿತ:ಹತ್ತಿರದಲ್ಲಿರುವ, ಸಮೀಪದ; ಸಮಸ್ತ: ಎಲ್ಲಾ; ಕಳೆ: ಕಲೆ, ಲಲಿತವಿದ್ಯೆ, ಕುಶಲವಿದ್ಯೆ ಸಮರ: ಯುದ್ಧ; ನಿರ್ವಹಿಸು:ಕೆಲಸವನ್ನು ನೆರ ವೇರಿಸುವಿಕೆ; ಶರಣಾಗತ: ರಕ್ಷಣೆ ಬೇಡುವವ; ಪಾಲಿಸು: ಪೋಷಿಸು; ಮಗ: ಸುತ; ಭೂಪಾಲ: ರಾಜ; ಅಭಿಜ್ಞ: ತಿಳಿದವ, ಜ್ಞಾನಿ;

ಪದವಿಂಗಡಣೆ:
ಇಹಪರದ+ ಸುಖ +ಸಂಗತಿಯ +ಸಂ
ಗ್ರಹಿಸಿ+ ವೇದಾಚಾರದಲಿ +ಸ
ನ್ನಿಹಿತನಾಗಿ +ಸಮಸ್ತ+ ಕಳೆಯಲ್ +ಅಭಿಜ್ಞನೆಂದೆನಿಸಿ
ಅಹಿತ ಕುಲವನು ಸಮರದಲಿ ನಿ
ರ್ವಹಿಸಿ ಶರಣಾಗತರ ಪಾಲಿಸು
ತಿಹಡವನು ಮಗನೆನಿಸುವನು ಭೂಪಾಲ ಕೇಳೆಂದ

ಅಚ್ಚರಿ:
(೧) ಸುಖ ಸಂಗತಿಯ ಸಂಗ್ರಹಿಸಿ – ಸ ಕಾರದ ಪದಗಳ ಬಳಕೆ
(೨) ಒಳ್ಳೆಯ ಮಗನಾಗಲು ೫ ರೀತಿಯ ಗುಣಗಳನ್ನು ತಿಳಿಸಿರುವ ಪದ್ಯ