ಪದ್ಯ ೪೧: ದುರ್ಯೋಧನನು ಯಾವ ವಿದ್ಯೆಯನ್ನು ಸ್ಮರಿಸಿಕೊಂಡನು?

ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ (ಗದಾ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನು ಸಂಜಯನೊಂದಿಗೆ ಮಾತನಾಡುತ್ತಾ, ಸಂಜಯ ಜೋರಾಗಿ ಅಳಬೇಡ, ಶತ್ರುಗಳು ನಾನಿರುವ ಸ್ಥಳವನ್ನು ತಿಳಿದುಕೊಂಡುಬಿಡುತ್ತಾರೆ. ನನ್ನನ್ನು ಮರೆತು ಹಿಂದಿರುಗಿ ಹೋಗಿ ಪಾಳೆಯವನ್ನು ಎತ್ತಿಸು. ಸ್ತ್ರೀಯರನ್ನು ಗಜಪುರಕ್ಕೆ ಕಳಿಸು, ನನಗೆ ಜಾಗಬಿಡು, ಎನ್ನುತ್ತಾ ತನ್ನ ಮುಂಜೆರಗನ್ನು ಸರಿಯಾಗಿ ಕಟ್ಟಿಕೊಂಡು, ಹಿಂದೆ ತಾನು ಕಲಿತಿದ್ದ ಜಲಸ್ತಂಭವಿದ್ಯೆಯನ್ನು ಸ್ಮರಿಸಿಕೊಂಡನು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ವಿರೋಧಿ: ವೈರಿ; ಅರಿ: ತಿಳಿ; ಮರೆ: ನೆನಪಿನಿಂದ ದೂರಮಾಡು; ಕಳೆ: ಬೀಡು, ತೊರೆ; ಪಾಳೆಯ: ಬೀಡು, ಶಿಬಿರ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳ, ಸ್ತ್ರೀ; ಕಳುಹು: ಕಳುಹಿಸು; ತೆರಹು: ಎಡೆ, ಜಾಗ; ಹೋಗು: ತೆರಳು; ಮುಂಜೆರಗು: ಹೊದ್ದ ವಸ್ತ್ರದ ಅಂಚು, ಸೆರಗಿನ ತುದಿ; ಅಳವಡಿಸು: ಸರಿಮಾಡು; ಸೆಕ್ಕಿ: ಸಿಕ್ಕಿಸು; ಪೂರ್ವ: ಹಿಂದೆ; ಸಲಿಲ: ನೀರು; ಸ್ತಂಭ: ಸ್ಥಿರವಾಗಿರುವಿಕೆ, ನಿಶ್ಚಲತೆ; ವಿದ್ಯೆ: ಜ್ಞಾನ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಒರಲದಿರು +ಸಂಜಯ +ವಿರೋಧಿಗಳ್
ಅರಿವರ್+ಆನಿದ್ದೆಡೆಯನ್+ಇಲ್ಲಿಯೆ
ಮರೆದು +ಕಳೆ +ಪಾಳೆಯವ +ತೆಗಸ್+ಅಬುಜಾಕ್ಷಿಯರ+ ಕಳುಹು
ತೆರಹುಗೊಡು +ನೀ +ಹೋಗೆನುತ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಪೂರ್ವದಲ್
ಅರಿದ +ಸಲಿಲಸ್ತಂಭ+ವಿದ್ಯೆಯನ್+ಅರಸ +ಚಿಂತಿಸಿದ

ಅಚ್ಚರಿ:
(೧) ಅರಿ – ೨, ೬ ಸಾಲಿನ ಮೊದಲ ಪದ
(೨) ಹೆಂಗಸು ಎಂದು ಹೇಳಲು ಅಬುಜಾಕ್ಷಿ ಪದದ ಬಳಕೆ

ಪದ್ಯ ೬೩: ಪಾಂಡವರಿಗಾವುದು ಬೇಡವೆಂದು ದ್ರೌಪದಿ ದುಃಖಿಸಿದಳು?

ಧರೆಯ ಭಂಡಾರವನು ರಥವನು
ಕರಿತುರಗರಥಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಭೂಮಿ, ಕೋಶ, ಚತುರಂಗ ಸೈನ್ಯ, ಇವೆಲ್ಲವೂ ದುರ್ಯೋಧನನು ನಿಮ್ಮಿಂದ ಕಿತ್ತುಕೊಂಡು ಹೊರಯಟ್ಟಿದನು, ಉಳಿದವಳು ನಾನು, ನನ್ನನ್ನು ಈಗ ಕೀಚಕನಿಗೆ ಕೊಟ್ಟಿರಿ, ಐವರೇ ಇರಲು ನಿಮಗೆ ಅನುಕೂಲವಾಯ್ತು, ರಾಜ್ಯವಾಗಲೀ, ಹೆಂಡತಿಯಾಗಲೀ ನಿಮಗೆ ಭೂಷಣವಲ್ಲ ಅಯ್ಯೋ ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಧರೆ: ಭೂಮಿ; ಭಂಡಾರ: ಬೊಕ್ಕಸ, ಖಜಾನೆ; ರಥ: ತೇರು; ಕರಿ: ಆನೆ; ತುರಗ: ಕುದುರೆ; ಪಾಯದಳ: ಸೈನಿಕರು; ಕುಲ: ವಂಶ; ಅಗ್ರಣಿ: ಶ್ರೇಷ್ಠ, ಮೊದಲಿಗ; ಸೆಳೆ: ವಶಪಡಿಸಿಕೊಳ್ಳು; ಹೊರವಡಿಸು: ದೂರವಿಟ್ಟನು; ದುರುಳ: ದುಷ್ಟ; ಕೊಟ್ಟು: ನೀಡು; ಪರಿಮಿತ: ಮಿತ, ಸ್ವಲ್ಪವಾದ; ಇರವು: ಜೀವಿಸು, ಇರು; ಲೇಸು: ಒಳಿತು; ಅಕಟ: ಅಯ್ಯೋ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಹಲುಬು: ದುಃಖಿಸು;

ಪದವಿಂಗಡಣೆ:
ಧರೆಯ +ಭಂಡಾರವನು +ರಥವನು
ಕರಿ+ತುರಗ+ರಥ+ಪಾಯದಳವನು
ಕುರುಕುಲಾಗ್ರಣಿ +ಸೆಳೆದುಕೊಂಡನು +ನಿಮ್ಮ +ಹೊರವಡಿಸಿ
ದುರುಳ +ಕೀಚಕಗ್+ಎನ್ನ +ಕೊಟ್ಟಿರಿ
ಪರಿಮಿತದಲ್+ಇರವಾಯ್ತು +ನಿಮ್ಮೈ
ವರಿಗೆ +ಲೇಸಾಯ್ತ್+ಅಕಟ+ಎಂದ್+ಅಬುಜಾಕ್ಷಿ +ಹಲುಬಿದಳು

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ಪರಿಮಿತದಲಿರವಾಯ್ತು ನಿಮ್ಮೈವರಿಗೆ

ಪದ್ಯ ೫೯: ದ್ರೌಪದಿ ಏಕೆ ಬಸವಳಿದಳು?

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದ ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳೆದೊಯ್ದ
ಇಂದು ಕೀಚಕನಾಯ ಕಾಲಲಿ
ನೊಂದೆ ನಾನಿದು ಮೂರು ಬಾರಿಯ
ಬಂದ ಭಂಗವೆ ಸಾಕೆನುತ ಬಸವಳಿದಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ಎಲ್ಲರ ಸಮೂಹದಲ್ಲಿ ಪಾಪಿ ದುರ್ಯೋಧನನು ನನ್ನ ಮಾನ ಕಳೆಯಲು ಅಂದು ನನ್ನ ತಲೆಯ ಮುಂಭಾಗವನ್ನು ಹಿಡಿದು ಎಳೆದನು. ಅರಣ್ಯವಾಸದಲ್ಲಿದ್ದಾಗ ಸೈಂಧವನು ನನ್ನನ್ನು ಹೊತ್ತುಕೊಂಡು ಹೋದನು, ಈ ದಿನ ಕೀಚಕನು ನನ್ನನ್ನು ಕಾಲಿನಿಂದ ಒದೆದನು. ಈ ಮೂರು ಭಂಗಗಳೇ ಸಾಕು ಎಂದು ಅತೀವ ದುಃಖಭರಿತಳಾಗಿ ದ್ರೌಪದಿಯು ಬಳಲಿದಳು.

ಅರ್ಥ:
ಮಂದೆ: ಗುಂಪು, ಸಮೂಹ; ಎಳಸು: ಸೆಳೆ; ಪಾಪಿ: ದುಷ್ಟ; ಮುಂದಲೆ: ತಲೆಯ ಮುಂಭಾಗ; ಬಂದು: ಆಗಮಿಸು; ಬಳಿಕ: ನಂತರ; ಅರಣ್ಯ: ಕಾಡು; ನಾಯ: ಶ್ವಾನ; ಕಾಲು: ಪಾದ; ನೊಂದೆ: ನೋವುಂಡೆ; ಭಂಗ: ಕಷ್ಟ, ಅವಮಾನ; ಸಾಕು: ನಿಲ್ಲಿಸು; ಬಸವಳಿ: ಬಳಲಿಕೆ, ಆಯಾಸ; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಮಂದೆಗ್+ಎಳಸಿದ +ಪಾಪಿ +ಕೌರವನ್
ಅಂದು +ಮುಂದಲೆವಿಡಿದ+ ಸೈಂಧವ
ಬಂದು +ಬಳಿಕ+ಅರಣ್ಯ+ವಾಸದೊಳ್+ಎನ್ನನ್+ಎಳೆದೊಯ್ದ
ಇಂದು +ಕೀಚಕ+ನಾಯ +ಕಾಲಲಿ
ನೊಂದೆ +ನಾನ್+ಇದು +ಮೂರು +ಬಾರಿಯ
ಬಂದ +ಭಂಗವೆ+ ಸಾಕೆನುತ+ ಬಸವಳಿದಳ್+ಅಬುಜಾಕ್ಷಿ

ಅಚ್ಚರಿ:
(೧) ಭಂಗವನ್ನೆಸೆದವರು – ಕೌರವ, ಸೈಂಧವ, ಕೀಚಕ
(೨) ಬ ಕಾರದ ಪದಗಳು – ಬಾರಿಯ ಬಂದ ಭಂಗವೆ

ಪದ್ಯ ೪: ದ್ರೌಪದಿಯು ಯಾರನ್ನು ನೆನೆದಳು?

ಹರಿ ಹರಿ ಶ್ರೀಕಾಂತ ದಾನವ
ಹರ ಮುಕುಂದ ಮುರಾರಿ ಗತಿ ಶೂ
ನ್ಯರಿಗೆ ನೀನೇ ಗತಿಯಲಾ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ (ವಿರಾಟ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ದ್ರೌಪದಿಯು ಹರಿ, ಹರಿ, ಶ್ರೀಕೃಷ್ಣ, ರಾಕ್ಷಸಾಂತಕ, ಮುಕುಂದ, ಮುರಾರಿ, ಗತಿಯಿಲ್ಲದವರಿಗೆ ನೀನೇ ಗರಿ, ನನ್ನ ಮಾನ ಕೆಡುವ ಹೊತ್ತು ಮತ್ತೆ ಬಂದಿದೆ, ಕೌರವನು ವಸ್ತ್ರಾಪಹರಣ ಮಾಡುವಾಗ ಬಂದ ಗತಿ ಈಗ ಮತ್ತೆ ಬಂದಿದೆ, ಸ್ವಾಮಿ ಕರುಣಾಸಾಗರ್ನೇ, ಇದೇನೆಂದು ನೀನೇ ಬಲ್ಲೆ, ಎಂದು ಮನಸ್ಸಿನಲ್ಲೇ ಕಳವಳಗೊಂಡು ಹೆಜ್ಜೆಯಿಟ್ಟಳು.

ಅರ್ಥ:
ಹರಿ: ವಿಷ್ಣು; ಕಾಂತ: ಪ್ರಿಯತಮ; ದಾನವ: ರಾಕ್ಷಸ, ದುಷ್ಟ; ಹರ: ಸಂಹರಿಸುವ; ಗತಿ: ಸ್ಥಿತಿ, ಅವಸ್ಥೆ; ಶೂನ್ಯ: ಏನು ಇಲ್ಲದ; ಗರುವ: ಶ್ರೇಷ್ಠ; ಕುಲ: ವಂಶ; ಅಗ್ರಣಿ: ಮೊದಲಿಗ; ಸೆಳೆ: ಜಗ್ಗು, ಎಳೆ; ವಸ್ತ್ರ: ಬಟ್ಟೆ; ಕರುಷ: ಆಕರ್ಷಕ; ಭಯ: ಅಂಜಿಕೆ; ಬಂದಿದೆ: ಆಗಮಿಸಿದೆ; ಕರುಣೆ: ದಯೆ; ಬಲ್ಲೆ: ತಿಳಿದಿರುವೆ; ಅಡಿಯಿಡು: ಹೆಜ್ಜೆಯಿಡು, ಚಲಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ಹರಿ +ಹರಿ +ಶ್ರೀಕಾಂತ +ದಾನವ
ಹರ+ ಮುಕುಂದ +ಮುರಾರಿ+ ಗತಿ +ಶೂ
ನ್ಯರಿಗೆ +ನೀನೇ +ಗತಿಯಲಾ +ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ +ಸೆಳೆದ +ವಸ್ತ್ರಾ
ಕರುಷಣದ +ಭಯ +ಮತ್ತೆ +ಬಂದಿದೆ
ಕರುಣಿ +ನೀನೇ +ಬಲ್ಲೆ+ಎನುತ್+ಅಡಿಯಿಟ್ಟಳ್+ಅಬುಜಾಕ್ಷಿ

ಅಚ್ಚರಿ:
(೧) ಕೃಷ್ಣನನ್ನು ಹೊಗಳುವ ಪರಿ – ಗತಿ ಶೂನ್ಯರಿಗೆ ನೀನೇ ಗತಿಯಲಾ

ಪದ್ಯ ೩೯: ದ್ರೌಪದಿಯು ಕೀಚಕನನ್ನು ಹೇಗೆ ಎಚ್ಚರಿಸಿದಳು?

ನ್ಯಾಯವನು ಮಿಗೆ ಗೆಲಿವುದೀಯ
ನ್ಯಾಯವಧಿಕವು ಧರ್ಮ ಪರರೇ
ಸ್ಥಾಯಿಗಳು ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲವರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದಳಬುಜಾಕ್ಷಿ (ವಿರಾಟ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ನ್ಯಾಯವನ್ನೇ ಗೆಲ್ಲುವುದರಿಂದ ಅನ್ಯಾಯವೇ ಮಿಗಿಲಾದುದು! ಧರ್ಮಪರರೇ ಸ್ಥಿರವಾಗಿ ನಿಲ್ಲುತ್ತಾರೆ, ಕತ್ತಲೆ ಸೂರ್ಯರ ನಡುವಿನ ವ್ಯತ್ಯಾಸ ನಿನಗೂ ನನ್ನ ಪತಿಗಳಿಗೂ ಇದೆ. ಅವರು ನಿನ್ನನ್ನು ಉಳಿಸುವುದಿಲ್ಲ. ಅವರ ಕೈಗುಣವನ್ನು ಬಲ್ಲವರೇ ಬಲ್ಲರು, ಕೀಚಕ, ನಾಯಿಯು ಸಿಂಕಕ್ಕೆ ಇದಿರು ನಿಂತೀತೇ? ಸಾಕು ನಡೆ ಎಂದು ದ್ರೌಪದಿ ಹೇಳಿದಳು.

ಅರ್ಥ:
ನ್ಯಾಯ: ಯೋಗ್ಯವಾದುದು; ಮಿಗೆ: ಮತ್ತು, ಅಧಿಕವಾಗಿ; ಗೆಲುವು: ಜಯ; ಅನ್ಯಾಯ: ಸರಿಯಲ್ಲದ; ಅಧಿಕ: ಹೆಚ್ಚು; ಧರ್ಮ: ಧಾರಣೆ ಮಾಡಿದುದು ಪರರು: ಅನ್ಯರು; ಸ್ಥಾಯಿ: ಸ್ಥಿರವಾಗಿರುವುದು, ಕಾಯಂ; ತಿಮಿರ: ಅಂಧಕಾರ; ಭಾಸ್ಕರ: ರವಿ; ಅಂತರ: ದೂರ; ಕಾಯು: ರಕ್ಷಣೆ; ಕೈಗುಣ: ಲಕ್ಷಣ; ಆಯತ:ಉಚಿತವಾದ; ಬಲ್ಲ: ತಿಳಿದ; ನಾಯಿ: ಶ್ವಾನ, ಕುನ್ನಿ; ಸಿಂಹ: ಕೇಸರಿ; ಇದಿರು: ಎದುರು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಪದ; ಹೋಗು: ತೆರಳು; ಅಬುಜಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ನ್ಯಾಯವನು +ಮಿಗೆ +ಗೆಲಿವುದ್+ಈ+
ಅನ್ಯಾಯವ್+ಅಧಿಕವು+ ಧರ್ಮ +ಪರರೇ
ಸ್ಥಾಯಿಗಳು +ತಿಮಿರಕ್ಕೆ +ಭಾಸ್ಕರಗ್+ಆವುದ್+ಅಂತರವು
ಕಾಯರ್+ಎನ್ನವರ್+ಅವರ+ ಕೈಗುಣದ್
ಆಯತವ +ಬಲ್ಲವರೆ +ಬಲ್ಲರು
ನಾಯಿ+ ಸಿಂಹಕ್ಕಿದಿರೆ+ ಫಡ+ ಹೋಗೆಂದಳ್+ಅಬುಜಾಕ್ಷಿ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ನಾಯಿ ಸಿಂಹಕ್ಕಿದಿರೆ, ತಿಮಿರಕ್ಕೆ ಭಾಸ್ಕರಗಾವುದಂತರವು
(೨) ಹಿತನುಡಿ – ಧರ್ಮ ಪರರೇ ಸ್ಥಾಯಿಗಳು

ಪದ್ಯ ೬೫: ದ್ರೌಪದಿಯು ಗಾಂಧಾರಿಗೆ ಏನು ಹೇಳಿದಳು?

ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ (ಸಭಾ ಪರ್ವ, ೧೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಗಾಂಧಾರಿಯನ್ನು ಉದ್ದೇಶಿಸುತ್ತಾ, ಹಿಂದಿನದೆಲ್ಲವನ್ನೂ ನಾನು ಮರೆತಿದ್ದೇನೆ, ನನ್ನ ಪೂರ್ವಕರ್ಮದ ಪ್ರಾರಬ್ಧವಾಗಿ ಪರಿಣಮಿಸಿದಾಗ ಹರಿಭಕ್ತಿಯಿಂದ ನಾನು ಪಾರಾದೆ. ನಮ್ಮ ಪ್ರಾರಬ್ಧಕ್ಕೆ ಇನ್ನೊಬ್ಬರನ್ನು ನಿಂದಿಸುವುದು ನೀಚತನ. ಪಾಂಡವರೇನೂ ತಿಳಿಗೇಡಿಗಳಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮರೆದೆ: ನೆನಪಿನಿಂದ ಹೊರಹಾಕು; ವಿಗಡ: ಭೀಕರ; ವಿಧಿ:ಆಜ್ಞೆ, ಆದೇಶ, ನಿಯಮ; ಎಚ್ಚರ: ಹುಷಾರಾಗಿರುವಿಕೆ; ಹರಿ: ವಿಷ್ಣು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮುಖ: ಆನನ; ಮುರಿ: ಸೀಳು; ಪೂರ್ವ: ಹಿಂದಿನ; ದುಷ್ಪ್ರಾರಬ್ಧ: ಹಿಂದೆ ಮಾಡಿದ ಕೆಟ್ಟ ಪಾಪದ ಫಲ; ಕರ್ಮ: ಕೆಲಸ, ಕಾರ್ಯ; ಫಲ: ಪ್ರಯೋಜನ; ಹೆರರ: ಬೇರೆಯವರ; ಖೂಳ: ದುಷ್ಟ; ಅರಿ: ತಿಳಿ; ಸುತ: ಮಗ; ಉರುಬು:ಅತಿಶಯವಾದ ವೇಗ; ಬಿನ್ನಹ: ಮನ್ನಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಅಕ್ಷಿ: ಕಣ್ಣು;

ಪದವಿಂಗಡಣೆ:
ಮರೆದೆನ್+ಆಗಳೆ +ವಿಗಡ +ವಿಧಿ
ಎಚ್ಚರಿಸಿದರೆ +ಹರಿಭಕ್ತಿ+ ಮುಖದಲಿ
ಮುರಿದುದ್+ಎಮ್ಮಯ +ಪೂರ್ವ +ದುಷ್ಪ್ರಾರಬ್ಧ+ ಕರ್ಮಫಲ
ಹೆರರನ್+ಎಂಬುದು +ಖೂಳತನವೇನ್
ಅರಿಯದವರೇ+ ಪಾಂಡುಸುತರ್
ಎಂದ್+ಉರುಬೆಯಲಿ +ಬಿನ್ನವಿಸಿದಳು+ ಗಾಂಧಾರಿಗ್+ಅಬುಜಾಕ್ಷಿ

ಅಚ್ಚರಿ:
(೧) ಭಗವಂತನ ಆರಾಧನೆಯ ಮುಖ್ಯತೆಯನ್ನು ಹೇಳುವ ಪರಿ – ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ

ಪದ್ಯ ೯೪: ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಯಾರಿಂದ ನಿರೀಕ್ಷಿಸಿದಳು?

ಅಕಟ ಧರ್ಮಜ ಭೀಮ ಫಲುಗುಣ
ನಕುಲ ಸಹದೇವಾದ್ಯರಿರ ಬಾ
ಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ
ವಿಕಳರಾದಿರೆ ನಿಲ್ಲಿ ನೀವೀ
ಗಕುಟಿಲರಲಾ ಭೀಷ್ಮ ಗುರು ಬಾ
ಹ್ಲಿಕ ಕೃಪಾದಿಗಳುತ್ತರವ ಕೊಡಿಯೆಂದಳಬುಜಾಕ್ಷಿ (ಸಭಾ ಪರ್ವ, ೧೫ ಸಂಧಿ, ೯೪ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ, ಅಯ್ಯೋ ಯುಧಿಷ್ಠಿರ, ಭೀಮ, ಅರ್ಜುನ, ನಕುಲ, ಸಹದೇವರೇ ನಿಮ್ಮ ಪತ್ನಿಯನ್ನು ಮರಣದ ಗಂಟಲಿಗೆ ಒಪ್ಪಿಸಿ ಕೊಟ್ಟಿರಾ? ಭ್ರಮೆಯಿಂದ ವಿವೇಚನೆಯನ್ನೇ ಕಳೆದುಕೊಂಡಿರಾ? ಹಾಗೆ ಆಗಲಿ, ಆದರೆ ಭೀಷ್ಮ, ದ್ರೋಣ, ಬಾಹ್ಲಿಕ, ಕೃಪನೇ ಮೊದಲಾದವರೇ ನನ್ನ ಪ್ರಶ್ನೆಗೆ ಉತ್ತರವನ್ನು ನೀಡಲಿ ಎಂದು ದ್ರೌಪದಿ ಕೇಳಿದಳು.

ಅರ್ಥ:
ಅಕಟ: ಅಯ್ಯೋ; ಆದಿ: ಮೊದಲಾಗಿ; ಬಾಲಕಿ: ಹೆಣ್ಣು; ಒಪ್ಪು: ಸಮ್ಮತಿ; ಕೊಡು: ನೀಡು; ಮೃತ್ಯು: ಸಾವು; ತಾಳಿಗೆ: ಗಂಟಲು; ವಿಕಳ: ಭ್ರಮೆ, ಭ್ರಾಂತಿ, ಖಿನ್ನತೆ; ಕುಟಿಲ: ಮೋಸ; ಉತ್ತರ: ಪರಿಹಾರ; ಕೊಡಿ: ನೀಡಿ; ಅಬುಜಾಕ್ಷಿ: ಕಮಲದ ಕಣ್ಣಿನವಳು, ಹೆಣ್ಣು (ದ್ರೌಪದಿ)

ಪದವಿಂಗಡಣೆ:
ಅಕಟ +ಧರ್ಮಜ +ಭೀಮ +ಫಲುಗುಣ
ನಕುಲ +ಸಹದೇವ+ಆದ್ಯರಿರ+ ಬಾ
ಲಿಕಿಯನ್+ಒಪ್ಪಿಸಿ +ಕೊಟ್ಟಿರೇ +ಮೃತ್ಯುವಿನ +ತಾಳಿಗೆಗೆ
ವಿಕಳರಾದಿರೆ+ ನಿಲ್ಲಿ+ ನೀವೀಗ್
ಅಕುಟಿಲರಲಾ +ಭೀಷ್ಮ +ಗುರು+ ಬಾ
ಹ್ಲಿಕ+ ಕೃಪಾದಿಗಳ್+ಉತ್ತರವ+ ಕೊಡಿ+ಎಂದಳ್+ಅಬುಜಾಕ್ಷಿ

ಅಚ್ಚರಿ:
(೧) ದ್ರೌಪದಿಯ ಸಂಕಟ – ಬಾಲಿಕಿಯನೊಪ್ಪಿಸಿ ಕೊಟ್ಟಿರೇ ಮೃತ್ಯುವಿನ ತಾಳಿಗೆಗೆ,
ವಿಕಳರಾದಿರೆ
(೨) ದ್ರೌಪದಿಯನ್ನು ಕರೆದ ಪರಿ – ಬಾಲಕಿ, ಅಬುಜಾಕ್ಷಿ

ಪದ್ಯ ೬೩: ದುಶ್ಯಾಸನನು ದ್ರೌಪದಿಯನ್ನು ಹೇಗೆ ಜರೆದನು?

ಬಂದನವನಬುಜಾಕ್ಷಿಯಿದಿರಲಿ
ನಿಂದನೆಲೆಗೇ ಗರುವತನವಿದು
ಹಿಂದೆ ಸಲುವುದು ಸಲ್ಲದಿದು ಕುರುರಾಜ ಭವನದಲಿ
ಇಂದು ಮರೆ ನಡೆ ನಮ್ಮ ತೊತ್ತಿರ
ಮುಂದೆ ಮೆರೆ ನಡೆ ಮಂಚದಿಂದಿಳಿ
ಯೆಂದು ಜರೆದನು ಕೌರವಾನುಜನಾ ಮಹಾಸತಿಯ (ಸಭಾ ಪರ್ವ, ೧೫ ಸಂಧಿ, ೬೩ ಪದ್ಯ)

ತಾತ್ಪರ್ಯ:
ದುಶ್ಯಾಸನನು ಮಹಾಪತಿವ್ರತೆಯಾದ ದ್ರೌಪದಿಯ ಮುಂದೆ ಬಂದನು, ಎಲೇ, ನಿನ್ನ ಈ ಹಿರಿಮೆ ದರ್ಪವೆಲ್ಲವೂ ಈ ಹಿಂದೆ ಇಂದ್ರಪ್ರಸ್ಥದಲ್ಲಿ ಸಲ್ಲುತ್ತಿದ್ದವು, ಇಂದು ಕೌರವನ ಅರಮನೆಯಲ್ಲಿ ಇವೆಲ್ಲ ಸಲ್ಲದು, ಹಿಂದಿದ್ದ ಠೀವಿಯನ್ನು ಮರೆತುಬಿಡು, ನಡೆ ನಮ್ಮ ದಾಸಿಯರೊಡನೆ ನಿನ್ನ ಹಿರಿಮೆಯನ್ನು ತೋರಿಸು, ನಡೆ ಮಂಚದಿಂದ ಇಳಿ ಎಂದು ದ್ರೌಪದಿಯನ್ನು ತೆಗಳಿದನು.

ಅರ್ಥ:
ಬಂದು: ಆಗಮಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಇದಿರು: ಎದುರು; ನಿಂದು: ನಿಲ್ಲು; ಗರುವತನ: ಗರ್ವ, ದರ್ಪ; ಹಿಂದೆ: ಮೊದಲು; ಸಲುವು: ಸರಿಹೊಂದು; ಸಲ್ಲದು: ಸರಿಹೊಂದದು; ಭವನ: ಅರಮನೆ; ಮರೆ: ನೆನಪಿನಿಂದ ದೂರ ಮಾಡು; ನಡೆ: ಚಲಿಸು; ತೊತ್ತು: ದಾಸಿ; ಮೆರೆ: ಖ್ಯಾತಿಹೊಂದು; ಮಂಚ: ಪಲ್ಲಂಗ; ಇಳಿ: ಕೆಳಗೆ ಬಾ; ಜರೆ: ಬಯ್ಯು, ತೆಗಳು; ಅನುಜ: ತಮ್ಮ; ಸತಿ: ಪತಿವ್ರತೆ, ಗರತಿ; ಮಹಾ: ಶ್ರೇಷ್ಠ;

ಪದವಿಂಗಡಣೆ:
ಬಂದನ್+ಅವನ್+ಅಬುಜಾಕ್ಷಿ+ಇದಿರಲಿ
ನಿಂದನ್+ಎಲೆಗ್+ಈ+ ಗರುವತನವಿದು
ಹಿಂದೆ +ಸಲುವುದು+ ಸಲ್ಲದಿದು +ಕುರುರಾಜ +ಭವನದಲಿ
ಇಂದು +ಮರೆ +ನಡೆ +ನಮ್ಮ +ತೊತ್ತಿರ
ಮುಂದೆ +ಮೆರೆ +ನಡೆ+ ಮಂಚದಿಂದ್+ಇಳಿ
ಎಂದು +ಜರೆದನು +ಕೌರವ+ಅನುಜನ್+ಆ+ ಮಹಾ+ಸತಿಯ

ಅಚ್ಚರಿ:
(೧) ಮೊದಲನೆ ಸಾಲು ಒಂದೇ ಪದವಾಗಿರುವುದು – ಬಂದನವನಬುಜಾಕ್ಷಿಯಿದಿರಲಿ
(೨) ಮರೆ ನಡೆ, ಮೆರೆ ನಡೆ – ಪದಗಳ ಬಳಕೆ – ೪,೫ ಸಾಲು
(೩) ಸಲುವುದು, ಸಲ್ಲದಿದು – ಪದಗಳ ಬಳಕೆ
(೪) ದ್ರೌಪದಿಯನ್ನು ಅಬುಜಾಕ್ಷಿ, ಮಹಾಸತಿ ಎಂದು ಕರೆದಿರುವುದು