ಎಡದ ದಂಡೆಯೊಳೊತ್ತಿ ಹೊಯುಳ
ಕದುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ (ಗದಾ ಪರ್ವ, ೭ ಸಂಧಿ, ೨೪ ಪದ್ಯ)
ತಾತ್ಪರ್ಯ:
ಎಡದಂಡೆಯಿಂದೊತ್ತಿ, ಹೊಡೆತದ ಭರವನ್ನು ತಪ್ಪಿಸಿ ಭೀಮನು ಕೌರವನ ಮುಡುಹನ್ನು ಹೊಡೆದನು. ದೇವತೆಗಳು ಭಲೇ ಎಂದು ಹೊಗಳಿದರು. ಕೌರವನು ಆ ಪೆಟ್ಟನ್ನು ಗದೆಯಿಂದ ತಪ್ಪಿಸಿ ಭೀಮನ ಸೊಂಟಕ್ಕೆ ಹೊಡೆದನು. ಭೀಮನ ಚಲನೆ ನಿಂತಿತು. ನಗುತ್ತಿದ್ದ ಪಾಂಡವಸೇನೆಯು ನಾಚಿ ತಲೆ ತಗ್ಗಿಸಿತು.
ಅರ್ಥ:
ಎಡ: ವಾಮಭಾಗ; ದಂಡೆ: ಹತ್ತಿರ, ಸಮೀಪ, ದಡ; ಒತ್ತು: ನೂಕು; ಹೊಯ್: ಹೊಡೆ; ಕಡುಹು: ಸಾಹಸ, ಹುರುಪು, ಉತ್ಸಾಹ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಮಝ: ಭಲೇ; ಭಾಪು: ಭಲೇ; ಸುರ: ಅಮರ, ದೇವತೆ; ಸ್ತೋಮ: ಗುಂಪು; ತಡೆ: ನಿಲ್ಲಿಸು; ಘಾಯ: ಪೆಟ್ಟು; ಗದೆ: ಮುದ್ಗರ; ನಡು: ಮಧ್ಯ; ಅಪ್ಪಳಿಸು: ಹೊಡೆ; ಮಿಡುಕು: ಅಲುಗಾಟ, ಚಲನೆ; ನಗು: ಹರ್ಷ; ಬಲ: ಸೈನ್ಯ; ತಲೆ: ಶಿರ; ಮಣಿ: ಬಾಗು, ಬಗ್ಗು;
ಪದವಿಂಗಡಣೆ:
ಎಡದ +ದಂಡೆಯೊಳ್+ಒತ್ತಿ +ಹೊಯ್ಗುಳ
ಕಡುಹ +ತಪ್ಪಿಸಿ +ಕೌರವೇಂದ್ರನ
ಮುಡುಹ +ಹೊಯ್ದನು +ಭೀಮ +ಮಝ +ಭಾಪೆನೆ +ಸುರಸ್ತೋಮ
ತಡೆದನಾ +ಘಾಯವನು +ಗದೆಯಲಿ
ನಡುವನ್+ಅಪ್ಪಳಿಸಿದನು+ ಭೀಮನ
ಮಿಡುಕು +ನಿಂದುದು +ನಗುವ +ಪಾಂಡವ +ಬಲದ +ತಲೆ +ಮಣಿಯೆ
ಅಚ್ಚರಿ:
(೧) ಬಿದ್ದನು ಎಂದು ಹೇಳುವ ಪರಿ – ಭೀಮನ ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ