ಪದ್ಯ ೨೦: ಕೃಪಾಚಾರ್ಯರಲ್ಲಿ ಮಕ್ಕಳು ಯಾವ ವಿದ್ಯೆಯನ್ನು ಕಲೆತರು?

ಆ ಕೃಪಾಚಾರಿಯನ ದೆಸೆಯಿಂ
ದೀ ಕುಮಾರರು ನಿಖಿಳ ತರ್ಕ
ವ್ಯಾಕರಣ ಮೊದಲೆನೆ ಚತುರ್ದಶ ವಿದ್ಯೆಗಳನರಿದು
ಲೋಕ ವೈದಿಕ ಮುಖ್ಯ ಸಕಲಕ
ಲಾಕುಶಲರಾದರು ಧನುಃ ಪ್ರವಿ
ವೇಕ ವಿಪುಣರನರಸುತ್ತಿದ್ದನು ಮತ್ತೆ ಗಾಂಗೇಯ (ಆದಿ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೃಪಚಾರ್ಯರಲ್ಲಿ ಕೌರವ ಪಾಂಡವರು ಹದಿನಾಲ್ಕು ವಿದ್ಯೆಗಳನ್ನು (ನಾಲ್ಕು ವೇದ, ಆರು ವೇದಾಂತ, ಧರ್ಮಶಾಸ್ತ್ರ, ಪುರಾಣ, ಮೀಮಾಂಸ, ನ್ಯಾಯ, ತರ್ಕ) ಕಲಿತರು. ಲೌಕಿಕ ವೈದಿಕ ಕಲೆಗಳಲ್ಲಿ ನಿಪುಣರಾದರು. ಧರ್ನುವಿದ್ಯೆಯನ್ನು ಕಲಿಸಲು ಯಾರಾದರು ನಿಪುಣರಾದ ಗುರುಗಳನ್ನು ಭೀಷ್ಮನು ಹುಡುಕುತ್ತಿದ್ದನು.

ಅರ್ಥ:
ದೆಸೆ: ಕಾರಣ; ನಿಖಿಳ: ಎಲ್ಲಾ; ತರ್ಕ: ಆರು ದರ್ಶನಗಳಲ್ಲಿ ಒಂದು; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಮೊದಲು: ಮುಂತಾದ; ಚತುರ್ದಶ: ಹದಿನಾಲ್ಕು; ವಿದ್ಯೆ: ಜ್ಞಾನ; ಅರಿ: ತಿಳಿ; ಲೋಕ: ಜಗತ್ತು; ವೈದಿಕ: ವೇದಗಳಿಗೆ ಸಂಬಂಧಿಸಿದ; ಮುಖ್ಯ: ಪ್ರಮುಖ; ಸಕಲ: ಎಲ್ಲಾ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಕುಶಲ: ಪಾಂಡಿತ್ಯ; ಧನು: ಬಿಲ್ಲು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ನಿಪುಣ: ಪಾರಂಗತ; ಅರಸು: ಹುಡುಕು; ಮತ್ತೆ: ಪುನಃ; ಗಾಂಗೇಯ: ಭೀಷ್ಮ;

ಪದವಿಂಗಡಣೆ:
ಆ+ ಕೃಪಾಚಾರಿಯನ +ದೆಸೆಯಿಂದ್
ಈ+ ಕುಮಾರರು +ನಿಖಿಳ +ತರ್ಕ
ವ್ಯಾಕರಣ+ ಮೊದಲೆನೆ+ ಚತುರ್ದಶ+ ವಿದ್ಯೆಗಳನರಿದು
ಲೋಕ +ವೈದಿಕ +ಮುಖ್ಯ +ಸಕಲ+ಕ
ಲಾ+ಕುಶಲರಾದರು +ಧನುಃ +ಪ್ರವಿ
ವೇಕ +ವಿಪುಣರನ್+ಅರಸುತ್ತಿದ್ದನು +ಮತ್ತೆ+ ಗಾಂಗೇಯ

ನಿಮ್ಮ ಟಿಪ್ಪಣಿ ಬರೆಯಿರಿ