ಪದ್ಯ ೩೨: ವ್ಯಾಸರು ಯಾವ ಆಶ್ರಮಕ್ಕೆ ಮರಳಿದರು?

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ (ಆದಿ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯೋಜನಗಮ್ಧಿಯು ವೇದವ್ಯಾಸರು ತನ್ನ ಮಗ ಹೇಳಿದ ಮಾತು ವೇದವಾಕ್ಯವೆಂದು ಒಪ್ಪಿ ತನ್ನ ಸೊಸೆಯಂದಿರ ಜೊತೆಗೆ ತಪೋವನಕ್ಕೆ ಹೊರಟು ಹೋದಳು. ವೇದವ್ಯಾಸರು ಬದರಿಕಾಶ್ರಮಕ್ಕೆ ಹಿಂದಿರುಗಿದರು. ಭೀಷ್ಮನು ಕೌರವ ಪಾಂಡವರನ್ನು ರಕ್ಷಿಸಿದನು.

ಅರ್ಥ:
ನಿಜ: ತನ್ನ, ದಿಟ; ನಂದನ: ಮಗ; ನುಡಿ: ಮಾತು; ಸಿದ್ಧ: ಸಾಧಿಸಿದ, ಅಣಿ; ಸೊಸೆ: ಮಗನ ಹೆಂಡತಿ; ಸಹಿತ: ಜೊತೆ; ನಡೆ: ಚಲಿಸು; ವರ: ಶ್ರೇಷ್ಠ; ತಪೋವನ: ಆಶ್ರಮ; ಮುನಿಪ: ಋಷಿ; ನಂದನ: ತೋಟ, ಉದ್ಯಾನ; ಮರಳು: ಹಿಂದಿರುಗು; ತನುಜ: ಮಗ; ಸಲಹು: ರಕ್ಶಿಸು; ಅಖಿಳ: ಎಲ್ಲಾ; ವ್ರಜ: ಗುಂಪು;

ಪದವಿಂಗಡಣೆ:
ಎನಲು+ ಯೋಜನಗಂಧಿ +ನಿಜ +ನಂ
ದನನ +ನುಡಿಯೇ +ವೇದಸಿದ್ಧವಿ
ದೆನುತ +ಸೊಸೆಯರು +ಸಹಿತ +ನಡೆದಳು +ವರ +ತಪೋವನಕೆ
ಮುನಿಪನ್+ಅತ್ತಲು +ಬದರಿಕಾ +ನಂ
ದನಕೆ +ಮರಳಿದನ್+ಇತ್ತ +ಗಂಗಾ
ತನುಜ+ ಸಲಹಿದನ್+ಅಖಿಳ +ಪಾಂಡವ +ಕೌರವ +ವ್ರಜವ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಜ ನಂದನನ ನುಡಿಯೇ
(೨) ನಿಜನಂದನ, ಬದರಿಕಾ ನಂದನಕೆ- ನಂದನ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ