ಪದ್ಯ ೧೧: ಪಾಂಡುರಾಜರನ್ನು ಯಾರು ಬೇಟೆಗೆ ಕರೆದರು?

ಧರಿಸಿದಳು ಗಾಂಧಾರಿ ಗರ್ಭೋ
ತ್ಕರವನಿತ್ತ ನಿಜಾಶ್ರಮಕೆ ಮುನಿ
ತಿರುಗಿದನು ದಿನದಿನದೊಳುಬ್ಬಿತು ರಾಯನಭ್ಯುದಯ
ಅರಸ ಕೇಳೈ ಬೇಂಟೆಗಾರರು
ಕರೆಯ ಬಂದರು ಮೃಗನಿಕಾಯದ
ನೆರವಿಗಳ ನೆಲೆಗೊಳಿಸಿ ಪಾಂಡುನೃಪಾಲಕನೋಲಗಕೆ (ಆದಿ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಂತ್ರಪಿಂಡವನ್ನು ಸೇವಿಸಿ, ಗರ್ಭವತಿಯಾದಳು. ವೇದವ್ಯಾಸರು ಆಶ್ರಮಕ್ಕೆ ಹಿಂದಿರುಗಿದರು. ಹೀಗೆ ರಾಜನ ಅಭ್ಯುದಯವಾಗುತ್ತಿರಲು, ರಾಜ ಜನಮೇಜಯ ಕೇಳು, ಬೇಟೆಗಾರರು ಪಾಂಡುರಾಜನ ಓಲಗಕ್ಕೆ ಬಂದು, ಪ್ರಾಣಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೇಟೆಗೆ ಬರಬೇಕೆಂದು ಕರೆದರು.

ಅರ್ಥ:
ಧರಿಸು: ಹೊರು; ಗರ್ಭ: ಹೊಟ್ಟೆ; ಉತ್ಕರ: ರಾಶಿ, ಸಮೂಹ; ಆಶ್ರಮ: ಕುಟೀರ; ಮುನಿ: ಋಷಿ; ತಿರುಗು: ಹಿಂತಿರುಗು, ಹೊರಡು; ದಿನ: ವಾರ; ಉಬ್ಬು: ಹೆಚ್ಚಾಗು; ರಾಯ: ರಾಜ; ಅಭ್ಯುದಯ: ಏಳಿಗೆ; ಅರಸ: ರಾಜ; ಕೇಳು: ಆಲಿಸು; ಬೇಂಟೆಗಾರ: ಬೇಡ; ಕರೆ: ಕೂಗು; ಬಂದು: ಆಗಮಿಸು; ಮೃಗ: ಪ್ರಾಣಿ; ನಿಕಾಯ: ವಾಸಸ್ಥಳ; ನೆರವಿ: ಗುಂಪು, ಸಮೂಹ; ನೆಲೆ: ವಾಸಸ್ಥಳ; ನೃಪಾಲ: ರಾಜ; ಓಲಗ: ದರಬಾರು;

ಪದವಿಂಗಡಣೆ:
ಧರಿಸಿದಳು +ಗಾಂಧಾರಿ +ಗರ್ಭೋ
ತ್ಕರವನ್+ಇತ್ತ+ ನಿಜಾಶ್ರಮಕೆ +ಮುನಿ
ತಿರುಗಿದನು +ದಿನದಿನದೊಳ್+ಉಬ್ಬಿತು +ರಾಯನ್+ಅಭ್ಯುದಯ
ಅರಸ+ ಕೇಳೈ +ಬೇಂಟೆಗಾರರು
ಕರೆಯ +ಬಂದರು +ಮೃಗ+ನಿಕಾಯದ
ನೆರವಿಗಳ +ನೆಲೆಗೊಳಿಸಿ +ಪಾಂಡು+ನೃಪಾಲಕನ್+ಓಲಗಕೆ

ಅಚ್ಚರಿ:
(೧) ರಾಯ, ಅರಸ – ಸಮಾನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ