ಪದ್ಯ ೧೬: ಭೀಮನು ಯಾರ ತಲೆಯನ್ನು ಮಕ್ಕಳ ಸಾವಿಗೆ ಹೊಣೆೆ ಎಂದನು?

ಸುತರ ತಲೆಯೈದಕ್ಕೆ ರಿಪುಗುರು
ಸುತನ ತಲೆಯೇ ಹೊಣೆ ಕಣಾ ಬಿಡು
ಸತಿಯೆ ಶೋಕವನೆನುತ ಬಿಟ್ಟನು ಸೂಠಿಯಲಿ ರಥವ
ವ್ಯತಿಕರವಿದವಗಡ ಸಮೀರನ
ಸುತಗೆ ಹರಿಯದು ಬವರ ನಡೆಯೆಂ
ದತಿರಥನ ಬಳಿಸಲಿಸಿದರು ನೃಪ ಹರಿ ಧನಂಜಯರು (ಗದಾ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಐವರು ಪುತ್ರರೂ ಮಡಿದುದನ್ನು ಕೇಳಿ, ಐವರ ಮಕ್ಕಳ ತಲೆಗೆ ಅಶ್ವತ್ಥಾಮನ ತಲೆಯೇ ಹೊಣೆ. ದ್ರೌಪದೀ, ಶೋಕವನ್ನು ಬಿಡು ಎನ್ನುತ್ತಾ ರಥದಲ್ಲಿ ಅತ್ತಕಡೆ ಹೋಗಲು, ಈಗ ಒದಗಿರುವ ಮಹತ್ತಾದ ಕಾರ್ಯವು, ಭೀಮನೊಬ್ಬನಿಂದ ಹರಿಯುವುದಿಲ್ಲ, ಎಂದುಕೊಂಡು ಧರ್ಮಜ, ಶ್ರೀಕೃಷ್ಣ ಅರ್ಜುನರು ಅವನ ಹಿಂದೆಯೇ ಹೋದರು.

ಅರ್ಥ:
ಸುತ: ಮಕ್ಕಳು; ತಲೆ: ಶಿರ; ಐದು: ಹೋಗು; ರಿಪು: ವೈರಿ; ಗುರುಸುತ: ಅಶ್ವತ್ಥಾಮ; ಹೊಣೆ: ಕಾರಣ; ಕಣಾ: ಅಲ್ಲವೇ; ಬಿಡು: ತೊರೆ; ಸತಿ: ಹೆಂಡತಿ; ಶೋಕ: ದುಃಖ; ಬಿಟ್ಟನು: ಹೊರಡು; ಸೂಠಿ: ವೇಗ; ರಥ: ಬಂಡಿ; ವ್ಯತಿಕರ: ತೊಂದರೆ, ಉಪದ್ರವ; ಅವಗಡ: ಅಸಡ್ಡೆ; ಸಮೀರ: ವಾಯು; ಸುತ: ಮಗ; ಹರಿ: ನಿವಾರಣೆಯಾಗು; ಬವರ: ಜಗಳ, ಕಾಳಗ, ಯುದ್ಧ; ನಡೆ: ಚಲಿಸು; ಅತಿರಥ: ಪರಾಕ್ರಮಿ; ಬಳಿ: ಹತ್ತಿರ; ಸಲಿಸು: ದೊರಕಿಸಿ ಕೊಡು, ಪೂರೈಸು; ನೃಪ: ರಾಜ;

ಪದವಿಂಗಡಣೆ:
ಸುತರ +ತಲೆ+ಐದಕ್ಕೆ +ರಿಪು+ಗುರು
ಸುತನ +ತಲೆಯೇ +ಹೊಣೆ +ಕಣಾ +ಬಿಡು
ಸತಿಯೆ +ಶೋಕವನ್+ಎನುತ +ಬಿಟ್ಟನು+ ಸೂಠಿಯಲಿ +ರಥವ
ವ್ಯತಿಕರವಿದ್+ಅವಗಡ +ಸಮೀರನ
ಸುತಗೆ +ಹರಿಯದು +ಬವರ +ನಡೆಯೆಂದ್
ಅತಿರಥನ +ಬಳಿ+ಸಲಿಸಿದರು+ ನೃಪ +ಹರಿ +ಧನಂಜಯರು

ಅಚ್ಚರಿ:
(೧) ಸುತ – ೧,೨, ೫ ಸಾಲಿನ ಮೊದಲ ಪದ
(೨) ಸಮೀರನ ಸುತ – ಭೀಮನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ