ಪದ್ಯ ೧೫: ದ್ರೌಪದಿಯ ದುಃಖಕ್ಕೆ ಕಾರಣವೇನು?

ಏನಿದೇನದುಭುತವೆನುತ ದು
ಮ್ಮಾನದಲಿ ಹರಿತಂದು ಹಿಡಿದನು
ಮಾನಿನಿಯ ಕೈಗಳನು ಕಂಬನಿದೊಡೆದು ಸೆರಗಿನಲಿ
ಹಾನಿಯೇನೆನೆ ಮಡಿದರೆನ್ನಯ
ಸೂನುಗಳು ತನ್ನನುಜರೆನೆ ಪವ
ಮಾನಸುತ ಕೇಳಿದನು ಕೋಳಾಹಳವ ಗುರುಸುತನ (ಗದಾ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧರ್ಮಜನು ಇದೇನಾಶ್ಚರ್ಯ ಎಂದು ಚಿಂತಿಸುತ್ತಾ ದುಃಖದಿಂದ ದ್ರೌಪದಿಯ ಕೈಗಳನ್ನು ಹಿಡಿದು ಸೆರಗಿನಿಂದ ಅವಳ ಕಣ್ಣೀರನ್ನೊರಸಿದನು. ಏನಾಯಿತು ಎಂದು ಕೇಳಲು, ದ್ರೌಪದಿಯು ದುಃಖದಿಂದ ನನ್ನ ಮಕ್ಕಳೂ, ಸಹೋದರರೂ ಮಡಿದರು ಎಂದು ನಡೆದ ಸಂಗತಿಯನ್ನು ಹೇಳಲು, ಭೀಮನು ಅಶ್ವತ್ಥಾಮನ ಈ ಹಾವಳಿಯನ್ನು ಕೇಳಿದನು.

ಅರ್ಥ:
ಅದುಭುತ: ಆಶ್ಚರ್ಯ; ದುಮ್ಮಾನ: ದುಃಖ; ಹರಿತಂದು: ವೇಗವಾಗಿ ಚಲಿಸುತ, ಆಗಮಿಸು; ಹಿಡಿ: ಗ್ರಹಿಸು; ಮಾನಿನಿ: ಹೆಣ್ಣು; ಕೈ: ಹಸ್ತ; ಕಂಬನಿ: ಕಣ್ಣೀರು; ಸೆರಗು: ಸೀರೆಯ ಅಂಚು; ಹಾನಿ: ನಾಶ; ಮಡಿ: ಸಾವು; ಸೂನು: ಮಕ್ಕಳು; ಅನುಜ: ತಮ್ಮ; ಪವಮಾನ: ವಾಯು; ಸುತ: ಮಗ; ಕೇಳು: ಆಲಿಸು; ಕೋಳಾಹಲ: ಗದ್ದಲ; ಗುರು: ಆಚಾರ್ಯ; ಗುರುಸುತ: ಅಶ್ವತ್ಥಾಮ;

ಪದವಿಂಗಡಣೆ:
ಏನಿದೇನ್+ಅದುಭುತವ್+ಎನುತ +ದು
ಮ್ಮಾನದಲಿ +ಹರಿತಂದು +ಹಿಡಿದನು
ಮಾನಿನಿಯ +ಕೈಗಳನು +ಕಂಬನಿದೊಡೆದು +ಸೆರಗಿನಲಿ
ಹಾನಿಯೇನ್+ಎನೆ +ಮಡಿದರ್+ಎನ್ನಯ
ಸೂನುಗಳು +ತನ್ನ್+ಅನುಜರ್+ಎನೆ +ಪವ
ಮಾನಸುತ+ ಕೇಳಿದನು+ ಕೋಳಾಹಳವ +ಗುರುಸುತನ

ಅಚ್ಚರಿ:
(೧) ಸುತ ಪದದ ಬಳಕೆ – ಪವಮಾನಸುತ, ಗುರುಸುತ
(೨) ಏನಿದೇನ್, ಎನುತ, ಎನೆ, ಎನ್ನಯ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ