ಪದ್ಯ ೨೭: ಭೀಮನು ಕೌರವನನ್ನು ಹೇಗೆ ಅಪ್ಪಳಿಸಿದನು?

ಕಾದುಕೊಳು ಕೌರವ ಗದಾಸಂ
ಭೇದದಭ್ಯಾಸಿಗಳಿಗಿದೆ ದು
ರ್ಭೇದ ನೋಡಾ ಹೊಯ್ಲಿಗಿದು ಮರೆವೊಗು ಮಹೇಶ್ವರನ
ಹೋದೆ ಹೋಗಿನ್ನೆನುತ ಜಡಿದು ವಿ
ಷಾದಭರದಲಿ ಮುಂದುಗಾಣದೆ
ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ (ಗದಾ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಕೌರವ, ಗದಾಯುದ್ಧವನ್ನು ಅಭ್ಯಾಸ ಮಾಡಿದವರಿಗೆ ನಾನೀಗ ಹೊಡೆಯುವ ಹೊಡೆತವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ. ನಿನ್ನನ್ನು ನೀನು ಕಾಪಾಡಿಕೊಳ್ಳಲು ಶಿವನ ರಕ್ಷಣೆಯನ್ನು ಬೇಡು, ನೀನಾದರೋ ಒಬ್ಬ ಅಲ್ಪ ಹೋಗು ಎನ್ನುತ್ತಾ ಭೀಮನು ವಿಷಾದ ಭರದಿಂದ ತನ್ನ ಕೈಯ ಶಕ್ತಿಯನ್ನೆಲ್ಲಾಬಿಟ್ಟು ಕೌರವನನ್ನು ಅಪ್ಪಳಿಸಿದನು.

ಅರ್ಥ:
ಕಾದುಕೋ: ರಕ್ಷಿಸು; ಭೇದ: ಸೀಳು, ಬಿರುಕು, ಛಿದ್ರ; ಸಂಭೇದ: ಸೀಳುವ; ಗದೆ: ಮುದ್ಗರ; ಅಭ್ಯಾಸಿ: ವಿದ್ಯಾರ್ಥಿ; ದುರ್ಭೇದ: ಕಷ್ಟಕರವಾದ; ನೋಡು: ವೀಕ್ಷಿಸು; ಹೊಯ್ಲು: ಹೊಡೆತ; ಮರೆ: ರಕ್ಷಣೆ; ಮಹೇಶ್ವರ: ಈಶ್ವರ; ಹೋದೆ: ಚಿಕ್ಕ ಗಿಡ, ಪೊದೆ; ಜಡಿ: ಗದರಿಸು, ಬೆದರಿಸು; ವಿಷಾದ: ದುಃಖ; ಭರ: ವೇಗ; ಕಾಣು: ತೋರು; ಕೈದಣಿ: ಕೈ ಆಯಾಸಗೊಳ್ಳು; ಅಪ್ಪಳಿಸು: ತಟ್ಟು, ತಾಗು; ಕಲಿ: ಶೂರ;

ಪದವಿಂಗಡಣೆ:
ಕಾದುಕೊಳು +ಕೌರವ +ಗದಾ+ಸಂ
ಭೇದದ್+ಅಭ್ಯಾಸಿಗಳಿಗಿದೆ +ದು
ರ್ಭೇದ +ನೋಡಾ +ಹೊಯ್ಲಿಗಿದು +ಮರೆವೊಗು +ಮಹೇಶ್ವರನ
ಹೋದೆ +ಹೋಗಿನ್ನೆನುತ +ಜಡಿದು +ವಿ
ಷಾದ+ಭರದಲಿ +ಮುಂದುಗಾಣದೆ
ಕೈದಣಿಯಲ್+ಅಪ್ಪಳಿಸಿದನು +ಕಲಿಭೀಮ +ಕುರುಪತಿಯ

ಅಚ್ಚರಿ:
(೧) ಸಂಭೇದ, ದುರ್ಭೇದ – ಪದಗಳ ಬಳಕೆ
(೨) ಕೌರವನನ್ನು ಹಂಗಿಸುವ ಪರಿ – ಹೋದೆ ಹೋಗಿನ್ನೆನುತ
(೩) ಕ ಕಾರದ ತ್ರಿವಳಿ ಪದ – ಕೈದಣಿಯಲಪ್ಪಳಿಸಿದನು ಕಲಿಭೀಮ ಕುರುಪತಿಯ

ಪದ್ಯ ೨೬: ಭೀಮನು ಹೇಗೆ ಎಚ್ಚೆತ್ತನು?

ಮೈಮರೆದನರೆಗಳಿಗೆ ಮಾತ್ರಕೆ
ವೈಮನಸ್ಯದ ಜಾಡ್ಯರೇಖೆಯ
ಸುಯ್ ಮಹಾದ್ಭುತವಾಯ್ತು ಪರಿಣತ ಪಾರವಶ್ಯದಲಿ
ಹಾ ಮಹಾದೇವೆನುತ ಹಗೆವನ
ಕೈಮೆಯನು ಬಣ್ಣಿಸುತಲೆದ್ದನ
ಲೈ ಮರುತ್ಸುತ ಸೂಸಿ ಹಾರಿದ ಗದೆಯ ತಡವರಿಸಿ (ಗದಾ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಧಗಳಿಗೆ ಕಾಲ ಮೈಮರೆದಿದ್ದ ಭೀಮನು ಎಚ್ಚೆತ್ತನು. ವೈರದ ಜಾಡ್ಯ ಮಹಾದ್ಭುತವಾಗಿ ಹೆಚ್ಚಿತು. ಭೀಮನು ಕೌರವನ ಕೈಚಳಕವನ್ನು ಹೊಗಳಿ ಶಿವಶಿವಾ ಎನ್ನುತ್ತಾ ಕೈಯಿಂದ ಸಿಡಿದು ಹೋಗಿದ್ದ ಗದೆಯನ್ನು ಹಿಡಿದನು.

ಅರ್ಥ:
ಮೈಮರೆ: ಎಚ್ಚರತಪ್ಪು; ಅರೆಗಳಿಗೆ: ಸ್ವಲ್ಪ ಸಮಯ; ವೈಮನಸ್ಯ: ಅಪಾರವಾದ ದುಃಖ; ಜಾಡ್ಯ: ನಿರುತ್ಸಾಹ, ಸೋಮಾರಿತನ; ರೇಖೆ: ಗೆರೆ, ಗೀಟು; ಸುಯ್: ಶಬ್ದವನ್ನು ವಿವರಿಸುವ ಪರಿ; ಅದ್ಭುತ: ಆಶ್ಚರ್ಯ; ಪರಿಣತ: ಪರಿಪಕ್ವವಾದುದು; ಪಾರವಶ್ಯ: ಬಾಹ್ಯಪ್ರಜ್ಞೆ ಇಲ್ಲದಿರುವುದು; ಹಗೆ: ವೈರಿ; ಕೈಮೆ: ಕೆಲಸ, ಕಪಟ; ಬಣ್ಣಿಸು: ವಿವರಿಸು; ಮರುತ್ಸುತ: ವಾಯುಪುತ್ರ (ಭೀಮ); ಸೂಸು: ಹರಡು; ಗದೆ: ಮುದ್ಗರ; ತಡವರಿಸು: ಹುಡುಕು, ಸವರು;

ಪದವಿಂಗಡಣೆ:
ಮೈಮರೆದನ್+ಅರೆಗಳಿಗೆ +ಮಾತ್ರಕೆ
ವೈಮನಸ್ಯದ +ಜಾಡ್ಯ+ರೇಖೆಯ
ಸುಯ್ +ಮಹಾದ್ಭುತವಾಯ್ತು+ ಪರಿಣತ+ ಪಾರವಶ್ಯದಲಿ
ಹಾ +ಮಹಾದೇವ+ಎನುತ+ ಹಗೆವನ
ಕೈಮೆಯನು +ಬಣ್ಣಿಸುತಲ್+ಎದ್ದನಲೈ
ಮರುತ್+ಸುತ+ ಸೂಸಿ +ಹಾರಿದ +ಗದೆಯ +ತಡವರಿಸಿ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳುವ ಪರಿ – ಹಗೆವನ ಕೈಮೆಯನು ಬಣ್ಣಿಸುತಲ್

ಪದ್ಯ ೨೫: ಪಾಂಡವರೇಕೆ ಅಳಲಿದರು?

ಒಲೆದು ಬಿದ್ದನು ಭೀಮ ಕುಲಗಿರಿ
ಮಲಗುವಂದದಲೇರಬಾಯಿಂ
ದಿಳಿವ ಶೋಣಿತಧಾರೆ ಮಗ್ಗುಲ ಮುಸುಕಿತವನಿಯಲಿ
ಎಲೆ ಮಹಾದೇವಾ ವೃಕೋದರ
ನಳಿದನೇ ಹಾ ಭೀಮ ಹಾಯೆಂ
ದಳಲಿದುದು ಪರಿವಾರ ಸಾತ್ಯಕಿ ಸೃಂಜಯಾದಿಗಳು (ಗದಾ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕುಲಗಿರಿಯು ಉರುಳ್ವಂತೆ ಭೀಮನು ಒಲೆದು ಬಿದ್ದನು. ಅವನ ಬಾಯಿಂದ ರಕ್ತ ಸುರಿದು ನೆಲ ನೆನೆಯಿತು. ಶಿವಶಿವಾ ಭೀಮನು ಮಡಿದನೇ! ಹಾ ಭೀಮಾ ಎಂದು ಸಾತ್ಯಕಿ ಸಂಜಯ ಮೊದಲಾದ ಪರಿವಾರದವರು ದುಃಖಿಸಿದರು.

ಅರ್ಥ:
ಒಲೆದು: ತೂಗಾಡು; ಬಿದ್ದು: ಬೀಳು; ಕುಲಗಿರಿ: ದೊಡ್ಡ ಬೆಟ್ಟ; ಮಲಗು: ನಿದ್ರಿಸು; ಇಳಿ: ಜಾರು; ಶೋಣಿತ: ರಕ್ತ; ಧಾರೆ: ವರ್ಷ; ಮಗ್ಗುಲು: ಪಕ್ಕ, ಪಾರ್ಶ್ವ; ಮುಸುಕು: ಹೊದಿಕೆ; ಯೋನಿ; ಅವನಿ: ಭೂಮಿ; ಅಳಿ: ಸಾವು; ಅಳಲು: ದುಃಖಿಸು; ಪರಿವಾರ: ಬಂಧುಜನ; ಆದಿ: ಮುಂತಾದ; ಏರ: ಆರೋಹಿಸು;

ಪದವಿಂಗಡಣೆ:
ಒಲೆದು +ಬಿದ್ದನು+ ಭೀಮ +ಕುಲಗಿರಿ
ಮಲಗುವಂದದಲ್+ಏರ+ಬಾಯಿಂ
ದಿಳಿವ +ಶೋಣಿತ+ಧಾರೆ +ಮಗ್ಗುಲ +ಮುಸುಕಿತ್+ಅವನಿಯಲಿ
ಎಲೆ +ಮಹಾದೇವಾ +ವೃಕೋದರನ್
ಅಳಿದನೇ +ಹಾ +ಭೀಮ +ಹಾಯೆಂದ್
ಅಳಲಿದುದು +ಪರಿವಾರ +ಸಾತ್ಯಕಿ+ ಸೃಂಜಯ+ಆದಿಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಒಲೆದು ಬಿದ್ದನು ಭೀಮ ಕುಲಗಿರಿ ಮಲಗುವಂದದಲ್

ಪದ್ಯ ೨೪: ಪಾಂಡವಸೇನೆಯು ಏಕೆ ತಲೆ ತಗ್ಗಿಸಿತು?

ಎಡದ ದಂಡೆಯೊಳೊತ್ತಿ ಹೊಯುಳ
ಕದುಹ ತಪ್ಪಿಸಿ ಕೌರವೇಂದ್ರನ
ಮುಡುಹ ಹೊಯ್ದನು ಭೀಮ ಮಝ ಭಾಪೆನೆ ಸುರಸ್ತೋಮ
ತಡೆದನಾ ಘಾಯವನು ಗದೆಯಲಿ
ನಡುವನಪ್ಪಳಿಸಿದನು ಭೀಮನ
ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ (ಗದಾ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಡದಂಡೆಯಿಂದೊತ್ತಿ, ಹೊಡೆತದ ಭರವನ್ನು ತಪ್ಪಿಸಿ ಭೀಮನು ಕೌರವನ ಮುಡುಹನ್ನು ಹೊಡೆದನು. ದೇವತೆಗಳು ಭಲೇ ಎಂದು ಹೊಗಳಿದರು. ಕೌರವನು ಆ ಪೆಟ್ಟನ್ನು ಗದೆಯಿಂದ ತಪ್ಪಿಸಿ ಭೀಮನ ಸೊಂಟಕ್ಕೆ ಹೊಡೆದನು. ಭೀಮನ ಚಲನೆ ನಿಂತಿತು. ನಗುತ್ತಿದ್ದ ಪಾಂಡವಸೇನೆಯು ನಾಚಿ ತಲೆ ತಗ್ಗಿಸಿತು.

ಅರ್ಥ:
ಎಡ: ವಾಮಭಾಗ; ದಂಡೆ: ಹತ್ತಿರ, ಸಮೀಪ, ದಡ; ಒತ್ತು: ನೂಕು; ಹೊಯ್: ಹೊಡೆ; ಕಡುಹು: ಸಾಹಸ, ಹುರುಪು, ಉತ್ಸಾಹ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಮಝ: ಭಲೇ; ಭಾಪು: ಭಲೇ; ಸುರ: ಅಮರ, ದೇವತೆ; ಸ್ತೋಮ: ಗುಂಪು; ತಡೆ: ನಿಲ್ಲಿಸು; ಘಾಯ: ಪೆಟ್ಟು; ಗದೆ: ಮುದ್ಗರ; ನಡು: ಮಧ್ಯ; ಅಪ್ಪಳಿಸು: ಹೊಡೆ; ಮಿಡುಕು: ಅಲುಗಾಟ, ಚಲನೆ; ನಗು: ಹರ್ಷ; ಬಲ: ಸೈನ್ಯ; ತಲೆ: ಶಿರ; ಮಣಿ: ಬಾಗು, ಬಗ್ಗು;

ಪದವಿಂಗಡಣೆ:
ಎಡದ +ದಂಡೆಯೊಳ್+ಒತ್ತಿ +ಹೊಯ್ಗುಳ
ಕಡುಹ +ತಪ್ಪಿಸಿ +ಕೌರವೇಂದ್ರನ
ಮುಡುಹ +ಹೊಯ್ದನು +ಭೀಮ +ಮಝ +ಭಾಪೆನೆ +ಸುರಸ್ತೋಮ
ತಡೆದನಾ +ಘಾಯವನು +ಗದೆಯಲಿ
ನಡುವನ್+ಅಪ್ಪಳಿಸಿದನು+ ಭೀಮನ
ಮಿಡುಕು +ನಿಂದುದು +ನಗುವ +ಪಾಂಡವ +ಬಲದ +ತಲೆ +ಮಣಿಯೆ

ಅಚ್ಚರಿ:
(೧) ಬಿದ್ದನು ಎಂದು ಹೇಳುವ ಪರಿ – ಭೀಮನ ಮಿಡುಕು ನಿಂದುದು ನಗುವ ಪಾಂಡವ ಬಲದ ತಲೆ ಮಣಿಯೆ

ಪದ್ಯ ೨೩: ಕೌರವನು ಭೀಮನ ಯಾವ ಭಾಗಕ್ಕೆ ಹೊಡೆದನು?

ಘಾಯಗತಿ ಲೇಸಾಯ್ತು ಪೂತುರೆ
ವಾಯುಸುತ ದಿಟ ಸೈರಿಸೆನ್ನಯ
ಘಾಯವನು ಘೋರಪ್ರಹಾರಸಹಿಷ್ಣು ಗಡ ನೀನು
ಕಾಯಲಾಪಡೆ ಫಲುಗುಣನನಬು
ಜಾಯತಾಕ್ಷನ ಕರೆಯೆನುತ ಕುರು
ರಾಯನೆರಗಿದನನಿಲಜನ ಕರ್ಣ ಪ್ರದೇಶದಲಿ (ಗದಾ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಿನ್ನ ಹೊಡೆತದ ರೀತಿ ಬಹಳ ಉತ್ತಮವಾಗಿತ್ತು ಭೀಮ, ಭಲೇ, ನನ್ನ ಹೊಡೆತವನ್ನು ಸಹಿಸಿಕೋ ಎಂದು ಹೇಳುತ್ತಾ ಘೋರವಾದ ಪ್ರಹಾವರು ಬಿದ್ದರೂ ನೀನು ಸಹಿಸಿಕೊಳ್ಳಬಲ್ಲೆ ಆದರೆ ನನ್ನ ಹೊಡೆತದಿಂದ ನೀನು ತಪ್ಪಿಸಿಕೊಳ್ಳಲಾರೆ, ನಿನ್ನನ್ನು ಉಳಿಸಿಕೊಳ್ಳಲು ಅರ್ಜುನನನ್ನೋ, ಕೃಷ್ಣನನ್ನೋ ಕರೆ ಎನ್ನುತ್ತಾ ಕೌರವನು ಭೀಮನ ಕಿವಿಯ ಪ್ರದೇಶಕ್ಕೆ ಹೊಡೆದನು.

ಅರ್ಥ:
ಘಾಯ: ಪೆಟ್ಟು; ಗತಿ: ವೇಗ; ಲೇಸು: ಒಳಿತು; ಪೂತು: ಭಲೇ; ವಾಯುಸುತ: ಭೀಮ; ವಾಯು: ಅನಿಲ; ದಿಟ: ಸತ್ಯ; ಸೈರಿಸು: ತಾಳು; ಘೋರ: ಭಯಂಕರ; ಪ್ರಹಾರ: ಹೊಡೆಯುವಿಕೆ, ಪೆಟ್ಟು; ಸಹಿಷ್ಣು: ತಾಳ್ಮೆಯುಳ್ಳವನು; ಗಡ: ಅಲ್ಲವೆ; ತ್ವರಿತವಾಗಿ; ಕಾಯು: ರಕ್ಷಿಸು; ಅಬುಜಾಯತಾಕ್ಷ: ಕಮಲದಂತ ಕಣ್ಣುಳ್ಳ (ಕೃಷ್ಣ); ಕರೆ: ಬರೆಮಾದು; ರಾಯ: ರಾಜ; ಎರಗು: ಬಾಗು; ಅನಿಲಜ: ವಾಯುಪುತ್ರ; ಕರ್ಣ: ಕಿವಿ; ಪ್ರದೇಶ: ಜಾಗ;

ಪದವಿಂಗಡಣೆ:
ಘಾಯಗತಿ +ಲೇಸಾಯ್ತು +ಪೂತುರೆ
ವಾಯುಸುತ +ದಿಟ +ಸೈರಿಸ್+ಎನ್ನಯ
ಘಾಯವನು +ಘೋರ+ಪ್ರಹಾರ+ಸಹಿಷ್ಣು +ಗಡ +ನೀನು
ಕಾಯಲಾಪಡೆ +ಫಲುಗುಣನನ್+ಅಬು
ಜಾಯತಾಕ್ಷನ+ ಕರೆ+ಎನುತ +ಕುರು
ರಾಯನ್+ಎರಗಿದನ್+ಅನಿಲಜನ +ಕರ್ಣ+ ಪ್ರದೇಶದಲಿ

ಅಚ್ಚರಿ:
(೧) ಭೀಮನನ್ನು ಹಂಗಿಸುವ ಪರಿ – ಕಾಯಲಾಪಡೆ ಫಲುಗುಣನನಬುಜಾಯತಾಕ್ಷನ ಕರೆ

ಪದ್ಯ ೨೨: ಕೌರವನು ಮೂರ್ಛಿತನಾಗಲು ಕಾರಣವೇನು?

ವಟ್ಟಿ ಮುರಿದುದು ಸೀಸಕದ ಗದೆ
ನಟ್ಟುದರಸನ ನೊಸಲ ರುಧಿರದ
ಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ
ಕೊಟ್ಟ ಘಾಯಕೆ ಬಳಲಿ ಮರವೆಗೆ
ಬಿಟ್ಟು ಮನವನು ನಿಮಿಷದಲಿ ಜಗ
ಜಟ್ಟಿ ಕೌರವರಾಯ ಕೊಂಡನು ನಿಜಗದಾಯುಧವ (ಗದಾ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೌರವನ ಸೀಸಕವು ಮುರಿಯಿತು. ಹಣೆಯಲ್ಲಿ ಆಯುಧವು ನೆಟ್ಟು ರಕ್ತದ ಕಟ್ಟೆಯೊಡೆದಂತಾಗಿ ಕೌರವನ ಮೈನೆನೆಯಿತು. ಗಾಯದಿಂದ ಬಳಲಿ ಒಂದು ನಿಮಿಷ ಮೂರ್ಛೆ ಹೋಗಿ ಎದ್ದು ಕೌರವನು ಗದೆಯನ್ನು ತೆಗೆದುಕೊಂಡನು.

ಅರ್ಥ:
ಮುರಿ: ಸೀಳು; ಸೀಸಕ: ಶಿರಸ್ತ್ರಾಣ; ಗದೆ: ಮುದ್ಗರ; ಅರಸ: ರಾಜ; ನೊಸಲು: ಹಣೆ; ರುಧಿರ: ರಕ್ತ; ಕಟ್ಟೆ: ಒಡ್ಡು; ಒಡೆ: ಸೀಳು, ಬಿರುಕು; ಕವಿ: ಆವರಿಸು; ನೃಪ: ರಾಜ; ತನು: ದೇಹ; ನೆನೆ: ತೋಯು; ಕೊಟ್ಟು: ನೀಡು; ಘಾಯ: ಪೆಟ್ಟು; ಬಳಲಿ: ಆಯಾಸ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಬಿಟ್ಟು: ತೊರೆ; ಮನ: ಮನಸ್ಸು; ನಿಮಿಷ: ಕ್ಷಣ ಮಾತ್ರದಲಿ; ಜಗಜಟ್ಟಿ: ಪರಾಕ್ರಮಿ;

ಪದವಿಂಗಡಣೆ:
ವಟ್ಟಿ +ಮುರಿದುದು +ಸೀಸಕದ +ಗದೆ
ನಟ್ಟುದ್+ಅರಸನ +ನೊಸಲ +ರುಧಿರದ
ಕಟ್ಟೆ+ಒಡೆದಂದದಲಿ +ಕವಿದುದು +ನೃಪನ +ತನು +ನನೆಯೆ
ಕೊಟ್ಟ+ ಘಾಯಕೆ +ಬಳಲಿ +ಮರವೆಗೆ
ಬಿಟ್ಟು+ ಮನವನು +ನಿಮಿಷದಲಿ +ಜಗ
ಜಟ್ಟಿ+ ಕೌರವರಾಯ+ ಕೊಂಡನು +ನಿಜ+ಗದಾಯುಧವ

ಅಚ್ಚರಿ:
(೧) ರೂಪಕದ ಪ್ರಯೋಗ – ರುಧಿರದಕಟ್ಟೆಯೊಡೆದಂದದಲಿ ಕವಿದುದು ನೃಪನ ತನು ನನೆಯೆ

ಪದ್ಯ ೨೧: ಗದೆಯು ಏಕೆ ರಕ್ತಸಿಕ್ತವಾಯಿತು?

ತಪ್ಪಿಸಿದನೇ ಘಾಯವನು ಫಡ
ತಪ್ಪಿಸಿನ್ನಾದಡೆಯೆನುತ ಕಡು
ದರ್ಪದಲಿ ಹೊಯ್ದನು ಸಮೀರಾತ್ಮಜನನವನೀಶ
ತಪ್ಪಿತದು ಗದೆ ತನುವ ರಕುತದ
ದರ್ಪನದ ರಹಿಯಾಯ್ತು ಗದೆ ಮಾ
ರಪ್ಪಿತರಸನನೆನಲು ಹೊಯ್ದನು ಭಾಳದಲಿ ಭೀಮ (ಗದಾ ಪರ್ವ, ೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ನನ್ನ ಹೊಡೆತವನ್ನು ತಪ್ಪಿಸಿಕೊಂಡನೋ, ಹಾಗಾದರೆ ಈಗ ತಪ್ಪಿಸಿಕೋ ಎಂದು ಕೌರವನು ಹೊಡೆಯಲು, ಆ ಹೊಡೆತ ತಪ್ಪಿತು, ಗದೆಯು ಕೌರವನನ್ನು ಅಪ್ಪಿತೋ ಎಂಬಂತೆ ಭೀಮನು ವೈರಿಯ ಹಣೆಗೆ ಹೊಡೆದನು. ಗದೆಯು ರಕ್ತಸಿಕ್ತವಾಯಿತು.

ಅರ್ಥ:
ಘಾಯ: ಪೆಟ್ಟು; ಫಡ: ತಿರಸ್ಕಾರದ ನುಡಿ; ಕಡು: ಬಹಳ; ದರ್ಪ: ಅಹಂಕಾರ; ಸಮೀರ: ವಾಯು; ಅಮೀರಾತ್ಮಜ: ಭೀಮ; ಅವನೀಶ: ರಾಜ; ಗದೆ: ಮುದ್ಗರ; ತನು: ದೇಹ; ರಕುತ: ನೆತ್ತರು; ದರ್ಪಣ: ಮುಕುರ; ರಹಿ: ರೀತಿ, ಪ್ರಕಾರ; ಅರಸ: ರಾಜ; ಹೊಯ್ದು: ಹೊಡೆ; ಭಾಳ: ಹಣೆ;

ಪದವಿಂಗಡಣೆ:
ತಪ್ಪಿಸಿದನೇ +ಘಾಯವನು +ಫಡ
ತಪ್ಪಿಸಿನ್ನಾದಡೆ+ಎನುತ +ಕಡು
ದರ್ಪದಲಿ+ ಹೊಯ್ದನು+ ಸಮೀರಾತ್ಮಜನನ್+ಅವನೀಶ
ತಪ್ಪಿತದು+ ಗದೆ+ ತನುವ +ರಕುತದ
ದರ್ಪಣದ +ರಹಿಯಾಯ್ತು +ಗದೆ +ಮಾರ್
ಅಪ್ಪಿತ್+ಅರಸನನ್+ಎನಲು +ಹೊಯ್ದನು+ ಭಾಳದಲಿ +ಭೀಮ

ಅಚ್ಚರಿ:
(೧) ಭೀಮನನ್ನು ಸಮೀರಾತ್ಮಜ; ದುರ್ಯೋಧನನನ್ನು ಅವನೀಶ, ಅರಸ ಎಂದು ಕರೆದಿರುವುದು
(೨) ತಪ್ಪಿಸಿ, ತಪ್ಪಿತದು – ೧,೨,೪ ಸಾಲಿನ ಮೊದಲ ಪದ

ಪದ್ಯ ೨೦: ದುರ್ಯೋಧನನು ಭೀಮನ ಮೇಲೆ ಹೇಗೆ ಆಕ್ರಮಣ ಮಾಡಿದನು?

ಲಾಗಿಸುತ ಲಳಿಯೆದ್ದು ಭೀಮನ
ತಾಗಿಸಿದನವನೀಶನಾತನ
ಭಾಗಧೇಯವನೇನನೆಂಬೆನು ಹೊಯ್ಲು ಹೊರಗಾಯ್ತು
ಬೇಗುದಿಯಲುಬ್ಬೆದ್ದು ನೃಪತಿ ವಿ
ಭಾಗಿಸಿದನನಿಲಜನ ತನುವನು
ಬೇಗದಲಿ ಕಳಚಿದನು ಪವನಜ ಪಯದ ಬವರಿಯಲಿ (ಗದಾ ಪರ್ವ, ೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೌರವನು ಲೆಕ್ಕಹಾಕಿ ವೇಗದಿಂದ ಭೀಮನನ್ನು ಹೊಡೆಯಲು, ಅವನ ದುರದೃಷ್ಟದಿಂದ ಹೊಡೆತ ಭೀಮನಿಂದ ದೂರವಾಗಿತ್ತು. ಆ ಕ್ರೋಧದಿಂದ ಭೀಮನನ್ನು ಸೀಳಲು ಗದೆಯಿಂದ ಹೊಡೆಯಲು, ಭೀಮನು ಚಲಿಸಿ ವೇಗವಾಗಿ ತನ್ನ ಪಾದದ ಚಲನೆಯಿಂದ ಆ ಹೊಡೆತದಿಂದ ತಪ್ಪಿಸಿಕೊಂಡನು.

ಅರ್ಥ:
ಲಾಗು: ನೆಗೆಯುವಿಕೆ, ಲಂಘನ; ಲಳಿ: ರಭಸ; ತಾಗು: ಮುಟ್ಟು; ಅವನೀಶ: ರಾಜ್; ಭಾಗದೇಯ: ಅದೃಷ್ಟ; ಹೊಯ್ಲು: ಹೊಡೆತ; ಹೊರಗೆ: ಆಚೆ, ದೂರ; ಬೇಗುದಿ: ತೀವ್ರವಾದ ಬೇಗೆ, ಅತ್ಯುಷ್ಣ; ಉಬ್ಬು: ಹೆಚ್ಚು, ಅಧಿಕ; ನೃಪತಿ: ರಾಜ; ವಿಭಾಗಿಸು: ಒಡೆ, ಸೀಳು; ಅನಿಲಜ: ಭೀಮ; ತನು: ದೇಹ; ಬೇಗ: ಶೀಘ್ರ; ಕಳಚು: ಸಡಲಿಸು; ಪಯ: ಪಾದ; ಬವರಿ:ತಿರುಗುವುದು; ಬವರ: ಕಾಳಗ, ಯುದ್ಧ;

ಪದವಿಂಗಡಣೆ:
ಲಾಗಿಸುತ +ಲಳಿಯೆದ್ದು +ಭೀಮನ
ತಾಗಿಸಿದನ್+ಅವನೀಶನ್+ಆತನ
ಭಾಗಧೇಯವನ್+ಏನನೆಂಬೆನು +ಹೊಯ್ಲು+ ಹೊರಗಾಯ್ತು
ಬೇಗುದಿಯಲ್+ಉಬ್ಬೆದ್ದು+ ನೃಪತಿ +ವಿ
ಭಾಗಿಸಿದನ್+ಅನಿಲಜನ +ತನುವನು
ಬೇಗದಲಿ +ಕಳಚಿದನು +ಪವನಜ +ಪಯದ +ಬವರಿಯಲಿ

ಅಚ್ಚರಿ:
(೧) ಜೋಡಿ ಪದಗಳ ಬಳಕೆ – ಲಾಗಿಸುತ ಲಳಿಯೆದ್ದು; ಹೊಯ್ಲು ಹೊರಗಾಯ್ತು; ಪವನಜ ಪಯದ
(೨) ಬ ಕಾರದ ಪದಗಳ ಬಳಕೆ – ಭಾಗಧೇಯ, ಬೇಗುದಿ, ಬೇಗ, ಬವರಿ