ಪದ್ಯ ೪೬: ಧರ್ಮಜನೇಕೆ ನಿಟ್ಟುಸಿರು ಬಿಟ್ಟನು?

ಹರಿದು ದೂತರು ನೃಪನ ಕಾಣದೆ
ಮರಳಿದರು ಯಮಸೂನು ದುಗುಡದ
ಭರದ ಭಾರವಣೆಯಲಿ ಹೊಕ್ಕನು ತನ್ನ ಪಾಳೆಯವ
ಕುರುನೃಪತಿ ತಪ್ಪಿದನು ಭೀಷ್ಮಾ
ದ್ಯರ ವಿಜಯ ವ್ಯಥೆಯಾಯ್ತು ಹಸ್ತಿನ
ಪುರದ ಸಿರಿ ಜಾರಿದಳು ತನಗೆಂದರಸ ಬಿಸುಸುಯ್ದ (ಗದಾ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ದೂತರು ಕೌರವನನ್ನು ಕಾಣದೆ ಹಿಂದಿರುಗಿದರು. ಭೀಷ್ಮಾದಿಗಳನ್ನು ಗೆದ್ದರೂ ಕೊನೆಗೆ ಈ ವ್ಯಥೆ ಸಂಭವಿಸಿತು. ಹಸ್ತಿನಪುರದ ಐಶ್ವರ್ಯ ಲಕ್ಷ್ಮಿಯು ನನ್ನಿಂದ ತಪ್ಪಿಸಿಕೊಂಡಳು ಎಂದು ಧರ್ಮಜನು ನಿಟ್ಟುಸಿರು ಬಿಟ್ಟನು.

ಅರ್ಥ:
ಹರಿ: ಹರಡು; ದೂತ: ಸೇವಕ; ನೃಪ: ರಾಜ; ಕಾಣು: ತೋರು; ಮರಳು: ಹಿಂದಿರುಗು; ಸೂನು: ಮಗ; ದುಗುಡ: ದುಃಖ; ಭರ: ಹೊರೆ; ಭಾರವಣೆ: ಘನತೆ, ಗೌರವ; ಹೊಕ್ಕು: ಸೇರು; ಪಾಳೆಯ: ಬಿಡಾರ; ನೃಪತಿ: ರಾಜ; ತಪ್ಪು: ಸರಿಯಲ್ಲದ; ಆದಿ: ಮುಂತಾದ; ವಿಜಯ: ಗೆಲುವು; ವ್ಯಥೆ: ನೋವು, ಯಾತನೆ; ಸಿರಿ: ಐಶ್ವರ್ಯ; ಜಾರು: ಬೀಳು; ಅರಸ: ರಾಜ; ಬಿಸುಸುಯ್: ನಿಟ್ಟುಸಿರು ಬಿಡು;

ಪದವಿಂಗಡಣೆ:
ಹರಿದು +ದೂತರು +ನೃಪನ +ಕಾಣದೆ
ಮರಳಿದರು +ಯಮಸೂನು +ದುಗುಡದ
ಭರದ+ ಭಾರವಣೆಯಲಿ +ಹೊಕ್ಕನು +ತನ್ನ +ಪಾಳೆಯವ
ಕುರುನೃಪತಿ +ತಪ್ಪಿದನು +ಭೀಷ್ಮಾ
ದ್ಯರ +ವಿಜಯ +ವ್ಯಥೆಯಾಯ್ತು +ಹಸ್ತಿನ
ಪುರದ +ಸಿರಿ+ ಜಾರಿದಳು +ತನಗೆಂದ್+ಅರಸ +ಬಿಸುಸುಯ್ದ

ಅಚ್ಚರಿ:
(೧) ರಾಜ್ಯತಪ್ಪಿತು ಎಂದು ಹೇಳುವ ಪರಿ – ಹಸ್ತಿನಪುರದ ಸಿರಿ ಜಾರಿದಳು

ನಿಮ್ಮ ಟಿಪ್ಪಣಿ ಬರೆಯಿರಿ