ಪದ್ಯ ೩೭: ದುರ್ಯೋಧನನು ಅಶ್ವತ್ಥಾಮನಿಗೆ ಏನೆಂದು ಉತ್ತರಿಸಿದ?

ಸೇಸೆದಳಿದೆನು ಭೀಷ್ಮಗಗ್ಗದ
ಭಾಷೆ ನಿಮ್ಮಯ್ಯನಲಿ ಗತವಾ
ಯೇಸ ಪತಿಕರಿಸಿದೆನು ಕರ್ಣನನಂದು ನೀನರಿಯ
ಓಸರಿಸಿದನೆ ಮಾದ್ರಪತಿ ಬಳಿ
ಕೀಸು ಬಂದುದು ದೈವದೊಲಹಿನ
ಪೈಸರಕೆ ನೀವೇನ ಮಾಡುವಿರೆಂದನಾ ಭೂಪ (ಗದಾ ಪರ್ವ, ೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಅಶ್ವತ್ಥಾಮನಿಗೆ ಉತ್ತರಿಸುತ್ತಾ, ಮೊದಲು ಭೀಷ್ಮನಿಗೆ ಸೇನಾಧಿಪತ್ಯವನ್ನು ಕೊಟ್ಟು ಸೇಸೆಯನ್ನಿಟ್ಟೆ, ನಿಮ್ಮ ತಂದೆಯು ಮಾಡಿದ ಮಹಾ ಪ್ರತಿಜ್ಞೆಯು ವ್ಯರ್ಥವಾಯಿತು. ಕರ್ಣನನ್ನು ಹೇಗೆ ಮನ್ನಿಸಿ ಸೇನಾಧಿಪತ್ಯವನ್ನು ಕೊಟ್ಟೆನೆಂಬುದು ನೀನು ತಿಳಿದಿರುವೆ. ಶಲ್ಯನೇನು ಜಾರಿಕೊಂಡು ಹೋದನೇ, ಇವೆಲ್ಲದರ ನಂತರ ಹೀಗಾಗಿದೆ, ದೈವದ ಕೃಪೆ ಜಾರಿಹೋದರೆ ನೀವೇನು ಮಾಡೀರಿ ಎಂದನು.

ಅರ್ಥ:
ಸೇಸೆ: ಮಂತ್ರಾಕ್ಷತೆ; ಅಗ್ಗ: ಶ್ರೇಷ್ಠ; ಭಾಷೆ: ಮಾತು; ಅಯ್ಯ: ತಂದೆ; ಗತ: ಹಿಂದೆ ಆದುದು, ಹೋದ; ಪತಿಕರಿಸು: ದಯೆತೋರು, ಅನುಗ್ರಹಿಸು; ಅರಿ: ತಿಳಿ; ಓಸರಿಸು: ಓರೆಮಾಡು, ಹಿಂಜರಿ; ಮಾದ್ರಪತಿ: ಶಲ್ಯ; ಬಳಿಕ: ನಂತರ; ಈಸು: ಇಷ್ಟು; ಬಂದು: ಆಗಮಿಸು; ದೈವ: ಭಗವಂತ; ಒಲವು: ಪ್ರೀತಿ; ಪೈಸರ: ಜಾರುವಿಕೆ, ಹಿಂದಕೆ ಸರಿ; ಭೂಪ: ರಾಜ;

ಪದವಿಂಗಡಣೆ:
ಸೇಸೆ+ತಳಿದೆನು +ಭೀಷ್ಮಗ್+ಅಗ್ಗದ
ಭಾಷೆ +ನಿಮ್ಮಯ್ಯನಲಿ +ಗತವಾಯ್ತ್
ಏಸ +ಪತಿಕರಿಸಿದೆನು+ ಕರ್ಣನನ್+ಅಂದು +ನೀನರಿಯ
ಓಸರಿಸಿದನೆ+ ಮಾದ್ರಪತಿ+ ಬಳಿಕ್
ಈಸು +ಬಂದುದು +ದೈವದ್+ಒಲಹಿನ
ಪೈಸರಕೆ+ ನೀವೇನ +ಮಾಡುವಿರೆಂದನಾ +ಭೂಪ

ಅಚ್ಚರಿ:
(೧) ದೈವದ ಕೃಪೆಯ ಮಹತ್ವ: ದೈವದೊಲಹಿನ ಪೈಸರಕೆ ನೀವೇನ ಮಾಡುವಿರೆಂದನಾ

ನಿಮ್ಮ ಟಿಪ್ಪಣಿ ಬರೆಯಿರಿ