ಪದ್ಯ ೩೭: ಅರ್ಜುನನು ಯಾರನ್ನು ಕಡಿದಟ್ಟಿದನು?

ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಅರ್ಜುನನು ಕೆರಳಿದರೆ ಇದಿರಾಳಿಗಳು ಗೆಲ್ಲಲು ಸಾಧ್ಯವೇ? ಮುಂದೆ ಬಂದ ಆನೆಗಳು, ಎಡಕ್ಕೆ ಮುತ್ತಿದ ರಥಗಳು, ಬಲಕ್ಕೆ ಆಕ್ರಮಿಸಿದ ರಾವುತರು, ಸಿಡಿದೆದ್ದ ಕಾಲಾಳುಗಳು ಎಲ್ಲವನ್ನೂ ನಿಶ್ಯಂಕೆಯಿಂದ ಅವನು ಕಡಿದೊಟ್ಟಿದನು.

ಅರ್ಥ:
ಮುಂಕುಡಿ: ಮುಂದೆ; ಹಿಡಿ: ಗ್ರಹಿಸು; ಆನೆ: ಗಜ; ಎಡವಂಕ: ವಾಮಭಾಗ; ಔಕು: ಒತ್ತು, ಹಿಚುಕು; ರಥ: ಬಂಡಿ; ಚಯ: ಗುಂಪು; ಬಲವಂಕ: ಬಲಭಾಗ; ಒತ್ತು: ಮುತ್ತು; ರಾವುತ: ಕುದುರೆಸವಾರ; ಉಬ್ಬೆದ್ದ: ಹೆಚ್ಚಾಗು; ಪಯದಳ: ಕಾಲಾಳು; ಶಂಕೆ: ಅನುಮಾನ; ಕಾಣು: ತೋರು; ಬಲ: ಸೈನ್ಯ; ತರಿ: ಸೀಳು; ಒಟ್ಟು: ರಾಶಿ, ಗುಂಪು; ಮಾರಂಕ: ಪ್ರತಿಯುದ್ಧ; ನಿಲುವು: ಇರುವಿಕೆ, ಸ್ಥಿತಿ; ಮುನಿ: ಕೋಪ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂಕುಡಿಯ+ ಹಿಡಿದ್+ಆನೆಗಳನ್+ಎಡ
ವಂಕಕ್+ಔಕಿದ +ರಥಚಯವ +ಬಲ
ವಂಕಕ್+ಒತ್ತಿದ +ರಾವುತರನ್+ಉಬ್ಬೆದ್ದ+ ಪಯದಳವ
ಶಂಕೆಯನು +ನಾ +ಕಾಣೆ +ಬಲನ್+ಎಡ
ವಂಕವನು +ತರಿದೊಟ್ಟಿದನು +ಮಾ
ರಂಕ +ನಿಲುವುದೆ +ಪಾರ್ಥ +ಮುನಿದಡೆ+ ಭೂಪ +ಕೇಳೆಂದ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ