ಬಳಲಿದಿರಿ ಹಗಲಿರುಳಕಾಳೆಗ
ದೊಳಗೆ ಕೈಮಾಡಿದಿರಿ ಕಗ್ಗ
ತ್ತಲೆಯ ಬಲುಗಂಡಿಯಲಿ ಸಿಲುಕಿತು ಕಂಗಳಂಗವಣೆ
ನಳಿನರಿಪುವುದಯಿಸಲಿ ಬೆಳುದಿಂ
ಗಳಲಿ ಕೈದುವ ಕೊಳ್ಳಿ ನಿದ್ರೆಯ
ನಿಳಿಯಬಿಡಬೇಕೆಂದು ಸೇನೆಗೆ ಸಾರಿದನು ಪಾರ್ಥ (ದ್ರೋಣ ಪರ್ವ, ೧೭ ಸಂಧಿ, ೬ ಪದ್ಯ)
ತಾತ್ಪರ್ಯ:
ಹಗಲೂ, ಇರುಳು ಯುದ್ಧಮಾಡಿ ಬಳಲಿದ್ದೀರಿ. ಕಗ್ಗತ್ತಲಿನಲ್ಲಿ ಕಣ್ಣು ಕಾಣಿಸುತ್ತಿಲ್ಲ, ಚಂದ್ರನು ಹುಟ್ಟಿದ ಮೇಲೆ ಆಯುಧಗಳನ್ನು ಹಿಡಿಯಿರಿ. ನಿದ್ರಿಸಬೇಡಿ, ಎಂದು ಅರ್ಜುನನು ಸೇನೆಯಲ್ಲಿ ಸಾರಿದನು.
ಅರ್ಥ:
ಬಳಲು: ಆಯಾಸಗೊಳ್ಳು; ಹಗಲು: ದಿನ; ಇರುಳು: ರಾತ್ರಿ; ಕಾಳೆಗ: ಯುದ್ಧ; ಕೈಮಾಡು: ಹೋರಾದು; ಕಗ್ಗತ್ತಲೆ: ದಟ್ಟವಾದ ಅಂಧಕಾರ; ಕಂಡಿ: ರಂಧ್ರ, ತೂತು; ಸಿಲುಕು: ಬಂಧನಕ್ಕೊಳಗಾಗು; ಕಂಗಳು: ಕಣ್ಣು; ಅಂಗವಣೆ: ರೀತಿ, ಬಯಕೆ; ನಳಿನ: ಕಮಲ; ರಿಪು: ವೈರಿ; ಉದಯ: ಹುಟ್ಟು; ಬೆಳುದಿಂಗಳು: ಹುಣ್ಣಿಮೆ; ಕೈದು: ಆಯುಧ; ಕೊಳ್ಳು: ತೆಗೆದುಕೋ; ನಿದ್ರೆ: ಶಯನ; ಇಳಿ: ಜಾರು; ಸೇನೆ: ಸೈನ್ಯ; ಸಾರು: ಪಸರಿಸು;
ಪದವಿಂಗಡಣೆ:
ಬಳಲಿದಿರಿ +ಹಗಲಿರುಳ+ಕಾಳೆಗ
ದೊಳಗೆ +ಕೈಮಾಡಿದಿರಿ +ಕಗ್ಗ
ತ್ತಲೆಯ +ಬಲುಗಂಡಿಯಲಿ +ಸಿಲುಕಿತು +ಕಂಗಳ್+ಅಂಗವಣೆ
ನಳಿನರಿಪು+ಉದಯಿಸಲಿ +ಬೆಳುದಿಂ
ಗಳಲಿ +ಕೈದುವ +ಕೊಳ್ಳಿ +ನಿದ್ರೆಯನ್
ಇಳಿಯಬಿಡಬೇಕೆಂದು +ಸೇನೆಗೆ +ಸಾರಿದನು +ಪಾರ್ಥ
ಅಚ್ಚರಿ:
(೧) ಚಂದ್ರನನ್ನು ನಳಿನರಿಪು ಎಂದು ಕರೆದಿರುವುದು
(೨) ಹಗಲು, ಇರುಳು – ವಿರುದ್ಧ ಪದಗಳು