ಆಹಹ ಶಿವ ಶಿವ ದೈತ್ಯರಾಹು
ಗ್ರಹಣವಾಯಿತು ಕರ್ಣಸೂರ್ಯನ
ಮಹಿಮೆ ಮಸುಳಿತಕಟಕಟಾಯೆನುತಖಿಳಬಲ ಬೆದರೆ
ಅಹಿತನಿಟ್ಟಳಕಳುಕಿ ಕೆಲದಲಿ
ಮಿಹಿರನಂದನನೆಚ್ಚಡಂಬಿನ
ಲಹರಿ ಮಸಗಿತು ಖಳನ ಖಡುಗವ ಕಾಣೆನಾಕ್ಷಣಕೆ (ದ್ರೋಣ ಪರ್ವ, ೧೬ ಸಂಧಿ, ೪೬ ಪದ್ಯ)
ತಾತ್ಪರ್ಯ:
ಕೌರವ ಸೈನ್ಯವು ಕರ್ಣ ಸೂರ್ಯನಿಗೆ ರಾಕ್ಷಸರಾಹುವಿನ ಗ್ರಹಣವಾಯಿತು. ಕರ್ಣನ ಹಿರಿಮೆ ಮಾಸಿತು ಅಯ್ಯೋ ಎನ್ನುತ್ತಾ ಹೆದರಿತು. ವೈರಿಯ ಹೊಡೆತಕ್ಕೆ ಹೆದರಿ ಕರ್ಣನು ಪಕ್ಷಕ್ಕೆ ಸರಿದು ಬಾಣಗಳಿಂದ ವೈರಿಯ ಖಡ್ಗವನ್ನು ತುಂಡುಮಾಡಿದನು.
ಅರ್ಥ:
ದೈತ್ಯ: ರಾಕ್ಷಸ; ಗ್ರಹಣ: ಹಿಡಿಯುವುದು; ಸೂರ್ಯ: ರವಿ; ಮಹಿಮೆ: ಶ್ರೇಷ್ಠತೆ; ಮಸುಳು: ಕಾಂತಿಹೀನವಾಗು; ಅಕಟಕಟ: ಅಯ್ಯೋ; ಅಖಿಳ: ಎಲ್ಲಾ; ಬಲ: ಸೈನ್ಯ; ಬೆದರು: ಭಯ, ಅಂಜಿಕೆ; ಅಹಿತ: ವೈರಿ; ಅಳಕು: ಹೆದರು; ಕೆಲ: ಪಕ್ಕ; ಮಿಹಿರ: ನೇಸರು, ಸೂರ್ಯ; ನಂದನ: ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಲಹರಿ: ರಭಸ, ಆವೇಗ; ಮಸಗು:ಕೆರಳು; ತಿಕ್ಕು; ಖಳ: ದುಷ್ಟ; ಖಡುಗ: ಕತ್ತಿ; ಕಾಣು: ತೋರು;
ಪದವಿಂಗಡಣೆ:
ಆಹಹ +ಶಿವ +ಶಿವ +ದೈತ್ಯ+ರಾಹು
ಗ್ರಹಣವಾಯಿತು +ಕರ್ಣ+ಸೂರ್ಯನ
ಮಹಿಮೆ +ಮಸುಳಿತ್+ಅಕಟಕಟಾ+ಎನುತ್+ಅಖಿಳ+ಬಲ +ಬೆದರೆ
ಅಹಿತನಿಟ್ಟ್+ ಅಳಕಳುಕಿ+ ಕೆಲದಲಿ
ಮಿಹಿರ+ನಂದನನ್+ಎಚ್ಚಡ್+ಅಂಬಿನ
ಲಹರಿ +ಮಸಗಿತು +ಖಳನ +ಖಡುಗವ +ಕಾಣೆನಾಕ್ಷಣಕೆ
ಅಚ್ಚರಿ:
(೧) ಸೂರ್ಯ, ಮಿಹಿರ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ದೈತ್ಯರಾಹು ಗ್ರಹಣವಾಯಿತು ಕರ್ಣಸೂರ್ಯನ ಮಹಿಮೆ ಮಸುಳಿತ್
(೩) ಮಿಹಿರನಂದನನೆಚ್ಚಡಂಬಿನ – ಒಂದೇ ಪದವಾಗಿ ರಚನೆ