ಪದ್ಯ ೨೩: ಭೂರಿಶ್ರವನ ಸಂಬಂಧಿಕರು ಯಾರಿಗೆ ಬೈದರು?

ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೋಳ್ಲದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ (ದ್ರೋಣ ಪರ್ವ, ೧೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇದು ಕಷ್ಟದ ಕಾರ್ಯ. ಬೇಡ, ಬೇಡ, ಬಿಡು ಎಂದು ಕೃಷ್ಣಾರ್ಜುನರು ಹೇಳಿದರೂ ಲೆಕ್ಕಿಸದೆ ಭೂರಿಶ್ರವನ ಕೊರಳನ್ನು ಕತ್ತರಿಸಿದನು. ಭೂರಿಶ್ರವನ ಪರಿವಾರದವರು ಸಾತ್ಯಕಿಯು ಎಲೋ ಪಾಪಿ, ಹೋಗು ತೆರಳು, ನೀನು ಪುಣ್ಯವನ್ನು ಕಳೆದುಕೊಂಡು ಹುಟ್ಟಿದವನು. ಭೂರಿಶ್ರವನು ನಿನಗೇನು ಮಾಡಿದನು ಎಂದು ಜರೆದರು.

ಅರ್ಥ:
ಕಷ್ಟ: ಕಠಿಣ; ತೀ: ಹೊರತರು; ಬೇಗ: ಶೀಘ್ರ; ಅರಿ: ಸೀಳು; ಗೋಣು: ಕುತ್ತಿಗೆ; ನೃಪ: ರಾಜ; ಹೋಗು: ತೆರಳು; ಪಾಪಿ: ದುಷ್ಟ; ಸುಕೃತ: ಒಳ್ಳೆಯ ಕೆಲಸ; ನೀಗು: ನಿವಾರಿಸಿಕೊಳ್ಳು; ಹುಟ್ಟು: ಜನಿಸು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ಏಗು: ಸಾಗಿಸು, ನಿಭಾಯಿಸು; ಬೈದು: ಜರಿ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ;

ಪದವಿಂಗಡಣೆ:
ಆಗದ್+ಆಗದು +ಕಷ್ಟವಿದು+ ತೆಗೆ
ಬೇಗವೆನಲ್+ಅರ್ಜುನನ +ಕೃಷ್ಣನನ್
ಆಗಳವ +ಕೈಕೋಳ್ಳದ್+ಅರಿದನು +ಗೋಣನಾ +ನೃಪನ
ಹೋಗು +ಹೋಗ್+ಎಲೆ+ ಪಾಪಿ +ಸುಕೃತವ
ನೀಗಿ +ಹುಟ್ಟಿದೆ +ರಾಜಋಷಿಯವನ್
ಏಗಿದನು +ನಿನಗೆನುತ +ಬೈದುದು +ನಿಖಿಳ+ಪರಿವಾರ

ಅಚ್ಚರಿ:
(೧) ಭೂರಿಶ್ರವನನ್ನು ಸಂಬಂಧಿಕರು ಕರೆದ ಪರಿ – ರಾಜಋಷಿ
(೨) ಆಗದಾಗದು, ಹೋಗು ಹೋಗು – ಜೋಡಿ ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ