ಆಗದಾಗದು ಕಷ್ಟವಿದು ತೆಗೆ
ಬೇಗವೆನಲರ್ಜುನನ ಕೃಷ್ಣನ
ನಾಗಳವ ಕೈಕೋಳ್ಲದರಿದನು ಗೋಣನಾ ನೃಪನ
ಹೋಗು ಹೋಗೆಲೆ ಪಾಪಿ ಸುಕೃತವ
ನೀಗಿ ಹುಟ್ಟಿದೆ ರಾಜಋಷಿಯವ
ನೇಗಿದನು ನಿನಗೆನುತ ಬೈದುದು ನಿಖಿಳಪರಿವಾರ (ದ್ರೋಣ ಪರ್ವ, ೧೪ ಸಂಧಿ, ೨೩ ಪದ್ಯ)
ತಾತ್ಪರ್ಯ:
ಇದು ಕಷ್ಟದ ಕಾರ್ಯ. ಬೇಡ, ಬೇಡ, ಬಿಡು ಎಂದು ಕೃಷ್ಣಾರ್ಜುನರು ಹೇಳಿದರೂ ಲೆಕ್ಕಿಸದೆ ಭೂರಿಶ್ರವನ ಕೊರಳನ್ನು ಕತ್ತರಿಸಿದನು. ಭೂರಿಶ್ರವನ ಪರಿವಾರದವರು ಸಾತ್ಯಕಿಯು ಎಲೋ ಪಾಪಿ, ಹೋಗು ತೆರಳು, ನೀನು ಪುಣ್ಯವನ್ನು ಕಳೆದುಕೊಂಡು ಹುಟ್ಟಿದವನು. ಭೂರಿಶ್ರವನು ನಿನಗೇನು ಮಾಡಿದನು ಎಂದು ಜರೆದರು.
ಅರ್ಥ:
ಕಷ್ಟ: ಕಠಿಣ; ತೀ: ಹೊರತರು; ಬೇಗ: ಶೀಘ್ರ; ಅರಿ: ಸೀಳು; ಗೋಣು: ಕುತ್ತಿಗೆ; ನೃಪ: ರಾಜ; ಹೋಗು: ತೆರಳು; ಪಾಪಿ: ದುಷ್ಟ; ಸುಕೃತ: ಒಳ್ಳೆಯ ಕೆಲಸ; ನೀಗು: ನಿವಾರಿಸಿಕೊಳ್ಳು; ಹುಟ್ಟು: ಜನಿಸು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ಏಗು: ಸಾಗಿಸು, ನಿಭಾಯಿಸು; ಬೈದು: ಜರಿ; ನಿಖಿಳ: ಎಲ್ಲಾ; ಪರಿವಾರ: ಬಂಧುಜನ;
ಪದವಿಂಗಡಣೆ:
ಆಗದ್+ಆಗದು +ಕಷ್ಟವಿದು+ ತೆಗೆ
ಬೇಗವೆನಲ್+ಅರ್ಜುನನ +ಕೃಷ್ಣನನ್
ಆಗಳವ +ಕೈಕೋಳ್ಳದ್+ಅರಿದನು +ಗೋಣನಾ +ನೃಪನ
ಹೋಗು +ಹೋಗ್+ಎಲೆ+ ಪಾಪಿ +ಸುಕೃತವ
ನೀಗಿ +ಹುಟ್ಟಿದೆ +ರಾಜಋಷಿಯವನ್
ಏಗಿದನು +ನಿನಗೆನುತ +ಬೈದುದು +ನಿಖಿಳ+ಪರಿವಾರ
ಅಚ್ಚರಿ:
(೧) ಭೂರಿಶ್ರವನನ್ನು ಸಂಬಂಧಿಕರು ಕರೆದ ಪರಿ – ರಾಜಋಷಿ
(೨) ಆಗದಾಗದು, ಹೋಗು ಹೋಗು – ಜೋಡಿ ಪದಗಳ ಬಳಕೆ