ಪದ್ಯ ೩: ಕೃಷ್ಣನು ಏನೆಂದು ಮನದಲ್ಲಿ ನಿಶ್ಚಯಿಸಿದನು?

ಧುರದ ಕೋಳಾಹಳದ ಢಗೆ ಡಾ
ವರಿಸಿ ಬಳಲಿ ಧನಂಜಯನು ವರ
ಸರಸಿಯಲಿ ಮುಳುಗಿರಲು ನಸು ನಗುತೊಂದುಪಾಯದಲಿ
ನರನೊಳಿನ್ನರುಹುವೆನು ಘನ ಸಂ
ಗರದೊಳಡಗಿದ ರಾಜ ಕುವರನ
ಮರಣವಾರ್ತೆಯನೆಂದು ಮನದಲಿ ನೆನೆದನಸುರಾರಿ (ದ್ರೋಣ ಪರ್ವ, ೮ ಸಂಧಿ, ೩ ಪದ್ಯ)

ತಾತ್ಪರ್ಯ:
ಯುದ್ಧ ಕೋಲಾಹಲದಿಂದ ಆಯಾಸಗೊಂಡಿದ್ದ ಅರ್ಜುನನು ಸರೋವರದಲ್ಲಿ ಮುಳುಗಿದನು. ಆಗ ಶ್ರೀಕೃಷ್ಣನು ನಗುತ್ತಾ ಒಂದು ಉಪಾಯದ ಮಾಡಿದನು. ಅರ್ಜುನನು ಮುಳುಗಿರಲು ಈ ಮಹಾ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯುವಿನ ಮರಣವಾರ್ತೆಯನ್ನು ಅರ್ಜುನನಿಗೆ ತಿಳಿಸಲು ಮನದಲ್ಲಿ ನಿಶ್ಚಯಿಸಿದನು.

ಅರ್ಥ:
ಧುರ: ಯುದ್ಧ; ಕೋಳಾಹಳ: ಗೊಂದಲ; ಢಗೆ: ಕಾವು, ದಗೆ; ಡಾವರಿಸು: ಸುತ್ತು, ತಿರುಗಾಡು; ಬಳಲು: ಆಯಾಸಗೊಳ್ಳು; ವರ: ಶ್ರೇಷ್ಠ; ಸರಸಿ: ಸರೋವರ; ಮುಳುಗು: ನೀರಿನಲ್ಲಿ ಮೀಯು; ನಸು: ಸ್ವಲ್ಪ; ನಗು: ಸಂತಸ; ಉಪಾಯ: ಯುಕ್ತಿ; ನರ: ಅರ್ಜುನ; ಉರುಹು: ಹೇಳು; ಘನ: ಶ್ರೇಷ್ಠ, ದೊಡ್ಡ; ಸಂಗರ: ಯುದ್ಧ; ಅಡಗು: ಅವಿತುಕೊಳ್ಳು, ಮರೆಯಾಗು; ಕುವರ: ಮಗ; ಮರಣ: ಸಾವು; ವಾರ್ತೆ: ವಿಚಾರ; ಮನ: ಮನಸ್ಸು; ನೆನೆ: ಜ್ಞಾಪಿಸು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಧುರದ +ಕೋಳಾಹಳದ +ಢಗೆ +ಡಾ
ವರಿಸಿ +ಬಳಲಿ +ಧನಂಜಯನು +ವರ
ಸರಸಿಯಲಿ +ಮುಳುಗಿರಲು +ನಸು +ನಗುತ್+ಒಂದ್+ಉಪಾಯದಲಿ
ನರನೊಳ್+ಇನ್ನ್+ಅರುಹುವೆನು +ಘನ +ಸಂ
ಗರದೊಳ್+ಅಡಗಿದ +ರಾಜ +ಕುವರನ
ಮರಣ+ವಾರ್ತೆಯನೆಂದು +ಮನದಲಿ +ನೆನೆದನ್+ಅಸುರಾರಿ

ಅಚ್ಚರಿ:
(೧) ಧುರ, ಸಂಗರ – ಸಮಾನಾರ್ಥಕ ಪದ
(೨) ಸತ್ತ ಎಂದು ಹೇಳಲು – ಘನ ಸಂಗರದೊಳಡಗಿದ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ