ಪದ್ಯ ೪೫: ದುಶ್ಯಾಸನು ಅಭಿಮನ್ಯುವನ್ನು ಹೇಗೆ ಆಕ್ರಮಣ ಮಾಡಿದನು?

ಕಾತರಿಸದಿರು ಬಾಲ ಭಾಷೆಗ
ಳೇತಕಿವು ನೀ ಕಲಿತ ಬಲುವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ (ದ್ರೋಣ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುಶ್ಯಾಸನನು ಉತ್ತರಿಸುತ್ತಾ, ಸಲ್ಲದ ಮಾತಾಡಬೇಡ, ನಿನ್ನ ಬಿಲ್ಲುಗಾರಿಕೆಯ ಚಾತುರ್ಯವಿದ್ದರೆ ಅದನ್ನು ತೋರಿಸು, ಹೆದರುಪುಕ್ಕರನು ಸೋಲಿಸಿ ಅಹಂಕಾರದ ಅತಿರೇಕಕ್ಕೆ ತೆರಳುವ ಜಾಗವಿದಲ್ಲ ಎಂದು ನೂರುಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಕಾತರ: ಕಳವಳ, ಉತ್ಸುಕತೆ; ಬಾಲ: ಚಿಕ್ಕವ, ಮಗು; ಭಾಷೆ: ಮಾತು; ಕಲಿತ: ಅಭ್ಯಾಸಮಾಡಿದ; ಬಲು: ಶಕ್ತಿ; ಅತಿಶಯ: ಹೆಚ್ಚು, ಅಧಿಕ; ತೋರು: ಪ್ರದರ್ಶಿಸು; ಕೈಗುಣ: ಚಾಣಾಕ್ಷತೆ; ಭೀತ: ಭಯ; ಭಟ: ಸೈನಿಕ; ಹೊಳ್ಳು: ಸಾರವಿಲ್ಲದ; ಮದ: ಅಹಂಕಾರ; ಅತಿರೇಕ: ಅತಿಶಯ, ರೂಢಿಗೆ ವಿರೋಧವಾದ ನಡೆ; ಠಾವು: ಎಡೆ, ಸ್ಥಳ, ತಾಣ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಬಾಣ: ಅಂಬು, ಶರ; ಇಂದ್ರ: ಸುರೇಶ; ಸುತ: ಮಗ;

ಪದವಿಂಗಡಣೆ:
ಕಾತರಿಸದಿರು +ಬಾಲ +ಭಾಷೆಗಳ್
ಏತಕಿವು +ನೀ +ಕಲಿತ +ಬಲುವ್
ಇದ್ +ಅತಿಶಯವುಂಟಾದಡ್+ಎಮ್ಮೊಳು +ತೋರು +ಕೈಗುಣವ
ಭೀತ +ಭಟರನು +ಹೊಳ್ಳು+ಕಳೆದ +ಮದ
ಅತಿರೇಕದ +ಠಾವಿದಲ್ಲೆಂದ್
ಈತನ್+ಎಚ್ಚನು +ನೂರು +ಬಾಣದಲ್+ಇಂದ್ರಸುತ+ ಸುತನ

ಅಚ್ಚರಿ:
(೧) ಅಭಿಮನ್ಯುವನ್ನು ಇಂದ್ರಸುತಸುತನ ಎಂದು ಕರೆದಿರುವುದು
(೨) ಅಭಿಮನ್ಯುವನ್ನು ಹಂಗಿಸುವ ಪರಿ – ಭೀತ ಭಟರನು ಹೊಳ್ಳುಗಳೆದ ಮದಾತಿರೇಕದ ಠಾವಿ

ನಿಮ್ಮ ಟಿಪ್ಪಣಿ ಬರೆಯಿರಿ