ಪದ್ಯ ೨೯: ಕೌರವ ಸೈನ್ಯದವರು ಹೇಗೆ ಯುದ್ಧ ಮಾಡಿದರು?

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ (ದ್ರೋಣ ಪರ್ವ, ೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ದ್ರೋಣನ ಯುದ್ಧದ ಪರಿಯನ್ನು ಕೇಳು, ದೇವತೆಗಳು ಮತ್ತು ದಾನವರ ನಡುವೆ ನಡೆದ ಯುದ್ಧದ ಪರಿ, ಅದ್ಭುತ ಯುದ್ಧವೇ ನಡೆಯಿತು. ನಿನ್ನ ಸೈನ್ಯದ ಸುಭಟರೇನು ಪರಾಕ್ರಮವಿಲ್ಲದವರೇ? ಅವರ ಆಕ್ರಮನವನ್ನು ತಡೆದುಕೊಳ್ಳಲು ಯಾರಿಗೆ ಸಾಧ್ಯ ಎಂದು ಕೇಳಿದನು.

ಅರ್ಥ:
ಹೇಳು: ತಿಳಿಸು; ದಾನವ: ರಾಕ್ಷಸ; ಅಮರ: ದೇವತೆ; ಅದುಭುತ: ಆಶ್ಚರ್ಯ; ಆಹವ: ಯುದ್ಧ; ನಿರಂತರ: ಸದಾ; ವಿಕ್ರಮ: ಪರಾಕ್ರಮ; ಉನ್ನತ: ಹೆಚ್ಚು; ಭಟ: ಸೈನಿಕ; ಬವರ: ಕಾಳಗ, ಯುದ್ಧ; ನೂಕು: ತಳ್ಳು; ಸೂನು: ಮಗ; ಸುಭಟ: ಪರಾಕ್ರಮಿ; ಪರಾಕ್ರಮ: ಶಕ್ತಿ; ಹೀನ: ತೊರೆದ, ತ್ಯಜಿಸು; ಕೇಳು: ಆಲಿಸು; ಸಂಗರ: ಯುದ್ಧ;

ಪದವಿಂಗಡಣೆ:
ಏನ +ಹೇಳುವೆನ್+ಇತ್ತಲ್+ಆದುದು
ದಾನವ+ಅಮರರ್+ಅದುಭುತ+ಆಹವವ್
ಆ+ ನಿರಂತರ +ವಿಕ್ರಮ+ಉನ್ನತ+ ಭಟರ +ಬವರದಲಿ
ಆನಲಾರಿಗೆ+ ನೂಕುವುದು +ತವ
ಸೂನುವಿನ +ಸುಭಟರು +ಪರಾಕ್ರಮ
ಹೀನರೇ +ಧೃತರಾಷ್ಟ್ರ +ಕೇಳೈ +ದ್ರೋಣ +ಸಂಗರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಾನವಾಮರರದುಭುತಾಹವವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ

ನಿಮ್ಮ ಟಿಪ್ಪಣಿ ಬರೆಯಿರಿ