ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರೆವುದು ಬಂಧು ವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ (ದ್ರೋಣ ಪರ್ವ, ೧ ಸಂಧಿ, ೯ ಪದ್ಯ)
ತಾತ್ಪರ್ಯ:
ಧೃತರಾಷ್ಟ್ರನು ತನ್ನ ಮಾತನ್ನು ಮುಂದುವರಿಸುತ್ತಾ, ಮಗನೇ ಪಾಂಡವರೊಡನೆ ಸಂಧಿಯನ್ನು ಮಾಡಿಕೋ, ದ್ವೇಷವನ್ನು ಬೆಳೆಸಬೇಡ, ಶ್ರೀಕೃಷ್ಣನೊಡನೆ ಕದನ ಮಾಡುವುದು ಒಳಿತಲ್ಲ, ಅವನು ಪರಮಾತ್ಮ, ನಮ್ಮ ಹವಣಿಕೆ ತಪ್ಪಿದ ಮೇಲೆ ವಿನಯದಿಂದ ಸಂಧಿಯನ್ನು ಮಾಡಿಕೊಳ್ಳಬೇಕು, ಬಂಧುಗಳೊಡನೆ ಛಲ ಸ್ಪರ್ಧೆ ಸಲ್ಲದು ಎಂದು ನಾನವನಿಗೆ ಹೇಳಿದುದು ನಿನಗೆ ತಿಳಿದಿಲ್ಲವೇ ಎಂದು ಕೇಳಿದನು.
ಅರ್ಥ:
ಬೇಡ: ತ್ಯಜಿಸು; ಮಗ: ಸುತ; ಸಂಧಿ: ಒಡಂಬಡಿಕೆ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಕೂಡೆ: ಜೊತೆ; ವಿಗ್ರಹ: ಯುದ್ಧ; ಹಗೆ: ವೈರ; ಹೊಲ್ಲ: ಕೆಟ್ಟುದು; ದೈವ: ಭಗವಂತ; ಪಾಡು: ಸ್ಥಿತಿ; ಬಳಿಕ: ನಂತರ; ವಿನಯ: ಸೌಜನ್ಯ; ಮೆರೆ: ಹೊಳೆ; ಬಂಧು: ಸಂಬಂಧಿಕರು; ವರ್ಗ: ಗುಂಪು; ವಾಸಿ: ಸ್ಪರ್ಧೆ; ಮನ: ಮನಸ್ಸು; ಅರಿ: ತಿಳಿ;
ಪದವಿಂಗಡಣೆ:
ಬೇಡ+ ಮಗನೇ +ಪಾಂಡು+ಸುತರಲಿ
ಮಾಡು +ಸಂಧಿಯನ್+ಅಸುರರಿಪುವಿನ
ಕೂಡೆ +ವಿಗ್ರಹವ್+ಒಳ್ಳಿತೇ +ಹಗೆ +ಹೊಲ್ಲ +ದೈವದಲಿ
ಪಾಡು +ತಪ್ಪಿದ+ ಬಳಿಕ+ ವಿನಯವ
ಮಾಡಿ +ಮೆರೆವುದು +ಬಂಧು +ವರ್ಗದ
ಕೂಡೆ +ವಾಸಿಗಳೇತಕ್+ಎನ್ನೆನೆ +ನಿನ್ನ +ಮನವರಿಯೆ
ಅಚ್ಚರಿ:
(೧) ಬುದ್ಧಿಮಾತು – ಹಗೆ ಹೊಲ್ಲ ದೈವದಲಿ; ಬಂಧು ವರ್ಗದ ಕೂಡೆ ವಾಸಿಗಳೇತಕೆ