ಅರಸ ಹೊಲ್ಲೆಹವೇನು ಪಾರ್ಥನ
ಸರಿಸದಲಿ ನಿಲುವೆದೆಯ ಬಲುಹು
ಳ್ಳರನು ದೇವಾಸುರರೊಳರಿಯೆನು ಮನುಜರೇನಹರು
ತಿರುಗಬೇಕವಗಡಿಸಿದರೆ ಸಂ
ಗರವ ಹೊಗುವುದು ಸರಿದರಿದಿರುವ
ನರಿದು ಕಾದುವುದಿದರಲಾವುದು ಕೊರತೆ ಹೇಳೆಂದ (ಭೀಷ್ಮ ಪರ್ವ, ೯ ಸಂಧಿ, ೨ ಪದ್ಯ)
ತಾತ್ಪರ್ಯ:
ಭೀಷ್ಮನು ಸುಯೋಧನನಿಗೆ ಉತ್ತರಿಸುತ್ತಾ, ರಾಜ, ಇದರಲ್ಲಿ ತಪ್ಪೇನು ಬಂತು? ಅರ್ಜುನನಿಗೆ ಸರಿ ಸಮಾನರಾದವರು ದೇವತೆಗಳಲ್ಲಾಗಲಿ, ರಾಕ್ಷಸರಲ್ಲಾಗಲಿ ಇಲ್ಲ, ಇನ್ನು ಮನುಷ್ಯರ ಗತಿಯೇನು ಅವನು ಮುನ್ನುಗ್ಗಿದರೆ ಹಿಮ್ಮೆಟ್ಟಬೇಕು, ಹಿಂದಕ್ಕೆ ಸರಿದರೆ ಮುನ್ನುಗ್ಗಬೇಕು, ಎದುರಾಳಿಯನ್ನು ನೋಡಿ ಹೋರಾಡಬೇಕು ಇದರಲ್ಲೇನಿದೆ ಕೊರತೆ ಎಂದು ಭೀಷ್ಮರು ಹೇಳಿದರು.
ಅರ್ಥ:
ಅರಸ: ರಾಜ; ಹೊಲ್ಲೆಹ: ದೋಷ; ಸರಿಸ: ನೇರ, ಸರಳ, ಯೋಗ್ಯ; ನಿಲುವು: ಘನತೆ, ಔನ್ನತ್ಯ; ಬಲುಹು: ಶಕ್ತಿ; ದೇವ: ಅಮರರು; ಅಸುರ: ರಾಕ್ಷಸ; ಅರಿ: ತಿಳಿ; ಮನುಜ: ನರ; ತಿರುಗು: ಚಲಿಸು, ಸುತ್ತು; ಅವಗಡಿಸು: ಕಡೆಗಣಿಸು, ಸೋಲಿಸು; ಸಂಗರ: ಯುದ್ಧ; ಹೊಗು: ಸೇರು; ಸರಿ: ಆಚೆ ಹೋಗು; ಕಾದು: ಹೋರಾಡು; ಕೊರತೆ: ನ್ಯೂನತೆ; ಹೇಳು: ತಿಳಿಸು; ನಿಲುವೆದೆ: ಶೂರ;
ಪದವಿಂಗಡಣೆ:
ಅರಸ +ಹೊಲ್ಲೆಹವೇನು +ಪಾರ್ಥನ
ಸರಿಸದಲಿ+ ನಿಲುವೆದೆಯ+ ಬಲುಹು
ಳ್ಳರನು +ದೇವ+ಅಸುರರೊಳ್+ಅರಿಯೆನು+ ಮನುಜರೇನಹರು
ತಿರುಗಬೇಕ್+ಅವಗಡಿಸಿದರೆ+ ಸಂ
ಗರವ+ ಹೊಗುವುದು +ಸರಿದರ್+ಇದಿರುವನ್
ಅರಿದು +ಕಾದುವುದ್+ಇದರಲಾವುದು +ಕೊರತೆ +ಹೇಳೆಂದ
ಅಚ್ಚರಿ:
(೧) ಪಾರ್ಥನ ಹಿರಿಮೆ – ಪಾರ್ಥನ ಸರಿಸದಲಿ ನಿಲುವೆದೆಯ ಬಲುಹುಳ್ಳರನು ದೇವಾಸುರರೊಳರಿಯೆನು ಮನುಜರೇನಹರು