ಪದ್ಯ ೧೪: ಅರ್ಜುನನು ಭೀಷ್ಮನನ್ನು ಹೇಗೆ ಹಂಗಿಸಿದನು?

ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರ ಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಳ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲೈ ಕಲಿ ಪಾರ್ಥ (ಭೀಷ್ಮ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಭೀಷ್ಮನನ್ನು ಎದುರಿಸುತ್ತಾ, ನೀನಾದರೂ ಮುದುಕ, ನೀನೆಲ್ಲಿ ಯುವಕನಾದ ನಾನೆಲ್ಲಿ, ಕೈಲಾಗದ ಯೋಧರನ್ನು ಬೆದರಿಸಿದ ಮಾತ್ರಕ್ಕೆ ನೀನು ಹೆಚ್ಚಿನ ವೀರನಾಗಲಾರೆ, ತೊಲಗು, ತೊಲಗು ಎನ್ನುತ್ತಾ ಕೆಂಪಾದ ಗರಿಗಳುಳ್ಳ ಬಾಣಗಳನ್ನು ಪ್ರಯೋಗಿಸಲು ಭೂಮಿ ಯಾವುದು, ಆಕಾಶವಾವುದು ಯಾವುದು ಯಾವ ದಿಕ್ಕು ಎಂದು ತಿಳಿಯದಂತಾಯಿತು.

ಅರ್ಥ:
ತೊಲಗು: ದೂರ ಸರಿ; ಕಲಿ: ಶೂರ; ವೃದ್ಧ: ವಯಸ್ಸಾದವನು, ಮುದುಕ; ಎಳ: ಚಿಕ್ಕ; ಭಟ: ಸೈನಿಕ; ಕೂಡು: ಸೇರು; ಅಂತರ: ದೂರ; ಅಳಿಬಲ: ನಾಶವಾಗುವ ಸೈನ್ಯ; ಹೆದರಿಸು: ಬೆದರಿಸು; ಹೆಕ್ಕಳ: ಹೆಚ್ಚಳ, ಅತಿಶಯ; ಸಾರು: ಡಂಗುರ ಹೊಡೆಸು, ಪ್ರಕಟಿಸು; ತುಳುಕು: ಹೊರಸೂಸುವಿಕೆ; ಕೆಂಗೋಲ: ಕೆಂಪಾದ ಬಾಣ; ಜಲಧಿ: ಸಾಗರ; ನೆಲ: ಭೂಮಿ; ದಿಕ್ಕು: ದಿಸೆಹ್; ಸಲೆ: ವಿಸ್ತೀರ್ಣ; ನಭೋ: ಆಗಸ; ಮಂಡಲ: ನಾಡಿನ ಒಂದು ಭಾಗ; ಕಲಿ: ಶೂರ;

ಪದವಿಂಗಡಣೆ:
ತೊಲತೊಲಗು +ಕಲಿ +ಭೀಷ್ಮ +ವೃದ್ಧರಿಗ್
ಎಳಭಟರ+ ಕೂಡಾವುದ್+ಅಂತರವ್
ಅಳಿಬಲರ +ಹೆದರಿಸಿದ +ಹೆಕ್ಕಳವೇಕೆ+ ಸಾರೆನುತ
ತುಳುಕಿದನು +ಕೆಂಗೋಳ +ಜಲಧಿಯ
ನೆಲನದ್+ಆವುದು +ದಿಕ್ಕದ್+ಆವುದು
ಸಲೆ +ನಭೋಮಂಡಲವದ್+ಆವುದ್+ಎನಲೈ +ಕಲಿ +ಪಾರ್ಥ

ಅಚ್ಚರಿ:
(೧) ಭೀಷ್ಮನನ್ನು ಹಂಗಿಸುವ ಪರಿ – ತೊಲತೊಲಗು ಕಲಿ ಭೀಷ್ಮ ವೃದ್ಧರಿಗೆಳಭಟರ ಕೂಡಾವುದಂತರ

ನಿಮ್ಮ ಟಿಪ್ಪಣಿ ಬರೆಯಿರಿ