ಪದ್ಯ ೨೪: ಕರ್ಣನು ಯಾವ ರೀತಿ ಕಂಡನು?

ರಾಯನಣುಗರ ಗಂಡ ಕೌರವ
ರಾಯದಳ ಶೃಂಗಾರ ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
ಜೀಯ ಜಯಜಯಯೆಂಬ ಪಂಡಿತ
ಗಾಯಕರ ಮಧ್ಯದಲಿ ಬೆರಳಲಿ
ಸಾಯಕವ ತಿರುಹುವನು ತಾ ಕಲಿಕರ್ಣ ನೋಡೆಂದ (ಭೀಷ್ಮ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೌರವರಾಯನಿಗೆ ಅತ್ಯಂತ ಪ್ರೀತಿಪಾತ್ರನಾದವನೂ, ಕೌರವ ಸೈನ್ಯಕ್ಕೆ ಶ್ರೇಷ್ಠನಾದವನೂ, ನಿಜವಾದ ಪರಾಕ್ರಮಿಯೂ, ಶತ್ರುರಾಜರನ್ನು ಮರ್ದಿಸುವವನೆಂಬ ಬಿರುದಾಂಕಿತನೂ, ಮೊರೆಯುವ ಕಹಳೆಗಳ ಹಿಂದೆ ಜಯಕಾರಮಾಡುವ ಪಂಡಿತರು, ಗಾಯಕರ ನಡುವೆ ಬೆರಳ್ಲಿ ಬಾಣವನ್ನು ತುಗುತ್ತಾ ನಿಂತ ವೀರ ಕರ್ಣನನ್ನು ನೋಡು ಎಂದು ಕೃಷ್ಣನು ಅರ್ಜುನನಿಗೆ ತೋರಿಸಿದನು.

ಅರ್ಥ:
ರಾಯ: ರಾಜ; ಅಣುಗ: ಪ್ರೀತಿಪಾತ್ರನಾದವನು; ಗಂಡ: ಪರಾಕ್ರಮಿ; ದಳ: ಸೈನ್ಯ; ಶೃಂಗಾರ: ಚೆಲುವು; ಮಲೆ: ಗರ್ವಿಸು, ಪ್ರತಿಭಟಿಸು; ಅರಿ: ವೈರಿ; ಮರ್ದನ: ಪುಡಿ ಮಾಡುವುದು; ಬಿರುದು: ಗೌರವ ಸೂಚಕ ಹೆಸರು; ಉಲಿ: ಧ್ವನಿ; ಕಹಳೆ: ಕಾಳೆ, ತುತ್ತೂರಿ; ಜೀಯ: ಒಡೆಯ; ಜಯ: ಉಘೇ; ಪಂಡಿತ: ವಿದ್ವಾಂಸ; ಗಾಯಕ: ಹಾಡುಗಾರ; ಮಧ್ಯ: ನಡುವೆ; ಬೆರಳು: ಅಂಗುಲಿ; ಸಾಯಕ: ಬಾಣ;ತಿರುಹು: ಅಲಾಡಿಸು, ತಿರುಗಿಸು; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ರಾಯನ್+ಅಣುಗರ +ಗಂಡ +ಕೌರವ
ರಾಯದಳ +ಶೃಂಗಾರ +ಮಲೆವ್+ಅರಿ
ರಾಯ+ಮರ್ದನನೆಂಬ +ಬಿರುದಿನಲ್ +ಉಲಿವ +ಕಹಳೆಗಳ
ಜೀಯ +ಜಯ+ಜಯ+ಎಂಬ+ ಪಂಡಿತ
ಗಾಯಕರ+ ಮಧ್ಯದಲಿ +ಬೆರಳಲಿ
ಸಾಯಕವ+ ತಿರುಹುವನು+ ತಾ +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಕರ್ಣನ ಹೆಗ್ಗಳಿಕೆ – ರಾಯನಣುಗರ ಗಂಡ, ಕೌರವ ರಾಯದಳ ಶೃಂಗಾರ, ಮಲೆವರಿ
ರಾಯಮರ್ದನನೆಂಬ ಬಿರುದಿನಲುಲಿವ ಕಹಳೆಗಳ
(೨) ರಾಯ ಪದದ ಬಳಕೆ, ರಾಯ, ಕೌರವರಾಯ, ಅರಿರಾಯ

ನಿಮ್ಮ ಟಿಪ್ಪಣಿ ಬರೆಯಿರಿ