ಬಂದು ಕಂಡು ವಿರಾಟರಾಯಗೆ
ನಿಂದು ಕರಗಳ ಮುಗಿದು ಮಲ್ಲರು
ಬಂದು ಪುರಬಾಹೆಯಲಿ ಬಿಟ್ಟುದ ಹೇಳಿದನು ನೃಪಗೆ
ಮುಂದೆ ಕಳುಹಿದರೆನಲು ನೃಪತಾ
ನೆಂದನಾ ದಾರುಕನ ಕರೆಯೆನ
ಲಂದು ವುರವಣಿಸಿದನು ಭೂಮೀಪಾಲನೋಲಗಕೆ (ವಿರಾಟ ಪರ್ವ, ೪ ಸಂಧಿ, ೧೮ ಪದ್ಯ)
ತಾತ್ಪರ್ಯ:
ದ್ವಾರಪಾಲಕನು ಬಂದು, ಕೌರವನ ಮಲ್ಲರು ಊರ ಹೊರಗೆ ಬಿಡಾರ ಬಿಟ್ಟಿದ್ದಾರೆ, ಸುದ್ದಿಯನ್ನು ಹೇಳಲು ನನ್ನನ್ನು ಕಳಿಸಿದ್ದಾರೆ ಎಂದು ಹೇಳಲು, ವಿರಾಟ ರಾಜನು ತನ್ನ ಸೇವಕ ದಾರುಕನಿಗೆ ಹೇಳಿಕಳಿಸಿ ಅವನು ರಾಜನ ಮುಂದೆ ನಿಂತನು.
ಅರ್ಥ:
ಬಂದು: ಆಗಮಿಸು; ಕಂಡು: ನೋಡು; ರಾಯ: ರಾಜ; ನಿಂದು: ನಿಲ್ಲು; ಕರ: ಕೈ, ಹಸ್ತ; ಕರಮುಗಿದು: ನಮಸ್ಕರಿಸಿ; ಮಲ್ಲ: ಜಟ್ಟಿ; ಪುರ: ಊರು; ಬಾಹೆ: ಹೊರಗೆ; ನೃಪ: ರಾಜ; ಮುಂದೆ: ಎದುರು; ಕರೆ: ಬರೆಮಾಡು; ಉರವಣೆ: ಆತುರ, ಅವಸರ; ಭೂಮೀಪಾಲ: ರಾಜ; ಓಲಗ: ದರ್ಬಾರು;
ಪದವಿಂಗಡಣೆ:
ಬಂದು +ಕಂಡು +ವಿರಾಟರಾಯಗೆ
ನಿಂದು +ಕರಗಳ+ ಮುಗಿದು +ಮಲ್ಲರು
ಬಂದು +ಪುರಬಾಹೆಯಲಿ +ಬಿಟ್ಟುದ +ಹೇಳಿದನು +ನೃಪಗೆ
ಮುಂದೆ +ಕಳುಹಿದರೆನಲು +ನೃಪ+ತಾನ್
ಎಂದನ್+ಆ +ದಾರುಕನ +ಕರೆ+ಎನಲ್
ಅಂದು +ಉರವಣಿಸಿದನು +ಭೂಮೀಪಾಲನ್+ಓಲಗಕೆ
ಅಚ್ಚರಿ:
(೧) ರಾಯ, ನೃಪ, ಭೂಮೀಪಾಲ – ಸಮನಾರ್ಥಕ ಪದ
(೨) ಬಂದು, ನಿಂದು, ಅಂದು – ಪ್ರಾಸ ಪದಗಳು