ತಂದು ಹರಹಿದ ಕೀಚಕನ ಮೃತಿ
ಯಂದವನು ನೃಪ ಕೇಳಿ ದೂತಂ
ಗೆಂದ ಮಡುಹಿದ ವೀರನಾವನು ಮರ್ತ್ಯಜಾತಿಯಲಿ
ಇಂದುಮುಖಿಯನು ಕೆಣಕಲಾಗಲೆ
ಬಂದು ಗಂಧರ್ವಕರು ಕೀಚಕ
ವೃಂದವನು ಸವರಿದರು ಕೌರವರಾಯ ಚಿತ್ತೈಸು (ವಿರಾಟ ಪರ್ವ, ೪ ಸಂಧಿ, ೩ ಪದ್ಯ)
ತಾತ್ಪರ್ಯ:
ದೂತರು ಕೀಚಕನ ವಧೆಯ ವೃತ್ತಾಂತವನ್ನು ಕೇಳಿ, ಕೀಚಕನನ್ನು ಕೊಂದ ವೀರನಾರು ಎಂದು ಕೇಳಲು, ದೂತನು ಉತ್ತರಿಸುತ್ತಾ, ಕೀಚಕನು ಒಬ್ಬ ಹೆಂಗಸನ್ನು ಕೆಣಕಿದನು, ಆ ಕ್ಷಣದಲ್ಲೇ ಗಂಧರ್ವರು ಬಂದು ಕೀಚಕರ ವಂಶವನ್ನೇ ಸಂಹರಿಸಿದರು ಎಂದು ಹೇಳಿದನು.
ಅರ್ಥ:
ತಂದು: ಬಂದು, ಆಗಮಿಸು; ಹರಹು: ಪ್ರವಹಿಸು; ಮೃತಿ: ಸಾವು; ನೃಪ: ರಾಜ; ಕೇಳಿ: ಆಲಿಸು; ದೂತ: ಸೇವಕ, ಚರ; ಮಡುಹು: ಕೊಲ್ಲು, ಸಾಯಿಸು; ವೀರ: ಶೂರ, ಪರಾಕ್ರಮಿ; ಮರ್ತ್ಯ: ಮನುಷ್ಯ; ಜಾತಿ: ವಂಶ, ಕುಲ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಸುಂದರಿ; ಕೆಣಕು: ರೇಗಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ವೃಂದ: ಗುಂಪು; ಸವರು: ನಾಶಮಾಡು; ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;
ಪದವಿಂಗಡಣೆ:
ತಂದು +ಹರಹಿದ+ ಕೀಚಕನ +ಮೃತಿ
ಯಂದವನು +ನೃಪ +ಕೇಳಿ+ ದೂತಂಗ್
ಎಂದ +ಮಡುಹಿದ +ವೀರನಾವನು +ಮರ್ತ್ಯ+ಜಾತಿಯಲಿ
ಇಂದುಮುಖಿಯನು +ಕೆಣಕಲ್+ಆಗಲೆ
ಬಂದು +ಗಂಧರ್ವಕರು +ಕೀಚಕ
ವೃಂದವನು +ಸವರಿದರು+ ಕೌರವರಾಯ +ಚಿತ್ತೈಸು
ಅಚ್ಚರಿ:
(೧) ಮೃತಿ, ಮಡುಹು, ಸವರು; ನೃಪ, ರಾಯ – ಸಾಮ್ಯಾರ್ಥಪದಗಳು