ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ದಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ಬಿಡುತ (ವಿರಾಟ ಪರ್ವ, ೩ ಸಂಧಿ, ೯೫ ಪದ್ಯ)
ತಾತ್ಪರ್ಯ:
ಕಾವಲಿನವರು ತಮ್ಮ ಕೈಯಲ್ಲಿ ದೀವಟಿಗೆ ಗಳನ್ನು ಹಿಡಿದು ಕೀಚಕನ ಶವವನ್ನು ನೋಡಿ,ಅವನ ತಮ್ಮಂದಿರಿಗೆ ಈ ಸುದ್ದಿಯನ್ನು ಬೇಗನೆ ತಿಳಿಸಿದರು. ಅವನ ತಮ್ಮಂದಿರು ಈ ವಿಷಯವನ್ನು ತಿಳಿದ ಕೂಡಲೆ ಬಾಯಿಬಡಿದುಕೊಂಡು, ಎದೆಯಲ್ಲಿ ಜ್ವಾಲೆಯು ಹೆಚ್ಚಾಗಿ, ತಲೆಗೆದರಿಕೊಂಡು ಬಾಯಿ ಬಿಡುತ್ತಾ ಬಂದರು.
ಅರ್ಥ:
ಅರಸಿ: ಹುಡುಕಿ; ದೀವಿಗೆ: ಸೊಡರು, ದೀಪಿಕೆ; ಕೈದೀವಿಗೆ: ಕೈಯಲ್ಲಿ ಹಿಡಿಯುವ ದೀಪ; ಪರಿ: ರೀತಿ; ಕಂಡು: ನೋಡು; ಕಾಹಿನ: ರಕ್ಷಿಸುವವ; ಹರಿ: ನೆರೆದುದು; ಹೇಳು: ತಿಳಿಸು; ಅನುಜಾತ: ಒಡಹುಟ್ಟಿದವರು; ಬೇಗ: ಶೀಘ್ರ; ಕರ: ಹಸ್ತ; ಹೊಯ್ದು: ಹೊಡೆದು; ಹೃದಯ: ಎದೆ; ಉರಿ: ಜ್ವಾಲೆ; ಚಡಾಳ: ಹೆಚ್ಚಳ; ಬಿಟ್ಟ: ತೊರೆದ; ಮಡೆ: ತಲೆ; ಬಂದು: ಆಗಮಿಸು; ಸೋದರ: ತಮ್ಮ;
ಪದವಿಂಗಡಣೆ:
ಅರಸಿ +ಕೈದೀವಿಗೆಯಲ್+ಅವನ್+ಇಹ
ಪರಿಯ +ಕಂಡರು +ಕಾಹಿನವದಿರು
ಹರಿದು+ ಹೇಳಿದರ್+ಆತನ್+ಅನುಜಾತರಿಗೆ +ಬೇಗದಲಿ
ಕರದಿ +ಬಾಯ್ಗಳ +ಹೊಯ್ದು +ಹೃದಯದೊಳ್
ಉರಿ +ಚಡಾಳಿಸೆ +ಬಿಟ್ಟ +ಮಂಡೆಯೊಳ್
ಇರದೆ +ಬಂದರು +ಕೀಚಕನ+ ಸೋದರರು +ಬಾಯ್ಬಿಡುತ
ಅಚ್ಚರಿ:
(೧) ಅನುಜಾತ, ಸೋದರ – ಸಮನಾರ್ಥಕ ಪದ