ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತರ
ಬಲುಹು ಮಾನ್ಯರ ನಿರಿಯವೇ ತಂಗಾಳಿ ಧಾರ್ಮಿಕನೇ
ಖಳನಲಾ ಮಾಕಂದ ಲೋಕದ
ಕೊಲೆಗಡಿಕನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇ ಎಂದ (ವಿರಾಟ ಪರ್ವ, ೨ ಸಂಧಿ, ೩೧ ಪದ್ಯ)
ತಾತ್ಪರ್ಯ:
ಸೈರಂಧ್ರಿ, ದುಂಬಿಯು ಕ್ಷುದ್ರಕೀಟವಲ್ಲವೇ? ಕೋಗಿಲೆಯು ಬಾಯ್ಬಡುಕನಲ್ಲವೇ? ವಸಂತ ಚಂದ್ರರು ಇವನು ಸಜ್ಜನ ಎಂದು ಬಿಡುವರೇ? ಅವರನ್ನು ಪೀಡಿಸುವುದಿಲ್ಲವೇ? ತಂಗಾಳಿಯು ಧಾರ್ಮಿಕ ಮನೋಭಾವವನ್ನು ಹೊಂದಿದೆಯೇ? ಇವರೆಲ್ಲರ ಸಹಾಯ ಪಡೆದ ಮನ್ಮಥನು ಕೊಲೆಗಡಿಕನಲ್ಲವೇ? ಅವನನ್ನು ತಿರಸ್ಕರಿಸಲು ಆಗುವುದೇ? ಪಾಪೀ ನನಗೆ ಒಲಿಯದೆ ನನ್ನನ್ನು ಕೊಲ್ಲಬಹುದೇ ಎಂದು ಕೀಚಕನು ಕೇಳಿದನು.
ಅರ್ಥ:
ಹುಳುಕು: ಕ್ಷುದ್ರವಾದ, ನೀಚವಾದ; ತುಂಬಿ: ದುಂಬಿ, ಜೇನು ನೊಣ; ಕೋಗಿಲೆ: ಪಿಕ; ಗಳಹ: ಮಾತಾಳಿ; ಶಶಿ: ಚಂದ್ರ; ಬಲುಹು: ಬಲ, ಶಕ್ತಿ; ಮಾನ್ಯ: ಸಜ್ಜನ; ನಿರಿ: ಕೊಲ್ಲು, ಸಾಯಿಸು; ತಂಗಾಳಿ: ತಂಪಾದ ವಾಯು; ಧಾರ್ಮಿಕ: ಸಜ್ಜನ; ಖಳ: ದುಷ್ಟ; ಮಾಕಂದ: ಮಾವಿನಮರ; ಲೋಕ: ಜಗತ್ತು; ಕೊಲೆ: ಸಾಯಿಸು; ಮನೋಭವ: ಕಾಮ, ಮನ್ಮಥ; ಇಳಿಕೆ: ತಿರಸ್ಕಾರ, ತಾತ್ಸಾರ; ಪಾಪಿ: ದುಷ್ಟ; ಒಲಿ: ಪ್ರೀತಿ; ಕೊಲು: ಸಾಯಿಸು;
ಪದವಿಂಗಡಣೆ:
ಹುಳುಕನಲ್ಲಾ+ ತುಂಬಿ +ಕೋಗಿಲೆ
ಗಳಹನಲ್ಲಾ+ ಶಶಿ+ ವಸಂತರ
ಬಲುಹು+ ಮಾನ್ಯರ+ ನಿರಿಯವೇ+ ತಂಗಾಳಿ +ಧಾರ್ಮಿಕನೇ
ಖಳನಲಾ +ಮಾಕಂದ +ಲೋಕದ
ಕೊಲೆಗಡಿಕನಲ್ಲಾ +ಮನೋಭವನ್
ಇಳಿಕೆ+ಕೊಂಬರೆ +ಪಾಪಿ+ಒಲಿಯದೆ+ ಕೊಲುವರೇ +ಎಂದ
ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಲೋಕದ ಕೊಲೆಗಡಿಕನಲ್ಲಾ ಮನೋಭವ ನಿಳಿಕೆಗೊಂಬರೆ