ಪದ್ಯ ೨೮: ದ್ರೌಪದಿಯು ಎಲ್ಲಿಗೆ ಬಂದು ಸೇರಿದಳು?

ಬರವ ಕಂಡು ಸುದೇಷ್ಣೆ ಮನದಲಿ
ಹರುಷಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನಿನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ (ವಿರಾಟ ಪರ್ವ, ೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಕಂಡು ಸುದೇಷ್ಣೆಯು ಹಿಗ್ಗಿ ಆ ಯುವತಿ ಯಾರು? ಅವಳನ್ನು ಕರೆದುಕೊಂಡು ಬನ್ನಿ, ಎಂದು ಸಖಿಯರನ್ನು ಕಳಿಸಿದಳು. ಅರಳಿದ ಕಮಲದ ಸೌಂದರ್ಯವನ್ನು ಒಳಗೊಂಡ ದೇಹ ಅದಕ್ಕೆ ಮೊದಲೇ ಬರುವ ಪರಿಮಳವನ್ನು ಬೀರುತ್ತಾ ದ್ರೌಪದಿಯು ಬಂದಳು.

ಅರ್ಥ:
ಬರವ: ಆಗಮನ; ಕಂಡು: ನೋಡು; ಮನ: ಮನಸ್ಸು; ಹರುಷ: ಸಂತಸ; ಹೊಂಗು: ಉತ್ಸಾಹ, ಹುರುಪು; ಕರೆ: ಬರೆಮಾಡು; ತರುಣಿ: ಹೆಂಗಸು; ಅಟ್ಟು: ಕಳುಹಿಸು; ಕೆಳದಿ:ಗೆಳತಿ, ಸ್ನೇಹಿತೆ; ಅನಿಬರು: ಅಷ್ಟು ಜನ; ಸರಸಿಜ: ಕಮಲ; ಆಯತ: ವಿಶಾಲವಾದ; ಅಂದ: ಚೆಲುವು; ಮೋಹರ: ಗುಂಪು, ಸಮೂಹ; ಮುಂಚು: ಮೊದಲು; ಪರಿಮಳ: ಸುಗಂಧ; ಬೀರು: ಹರಡು; ಹೊಕ್ಕು: ಸೇರು; ರಾಜಮಂದಿರ: ಅರಮನೆ;

ಪದವಿಂಗಡಣೆ:
ಬರವ +ಕಂಡು +ಸುದೇಷ್ಣೆ +ಮನದಲಿ
ಹರುಷಮಿಗೆ +ಹೊಂಗಿದಳು +ಕರೆ+ ಕರೆ
ತರುಣಿ+ಆರೆಂದ್+ಅಟ್ಟಿದಳು +ಕೆಳದಿಯರನ್+ಇನಿಬರನು
ಸರಸಿಜಾಯತದ್+ಅಂದವನು +ಮೋ
ಹರಿಸಿ+ ಮುಂಚುವ +ಪರಿಮಳವನಂ
ದರಸಿ+ ಬೀರುತ +ಬಂದು +ಹೊಕ್ಕಳು +ರಾಜ+ಮಂದಿರವ

ಅಚ್ಚರಿ:
(೧) ದ್ರೌಪದಿಯ ಸೊಬಗು – ಸರಸಿಜಾಯತದಂದವನು ಮೋಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ

ನಿಮ್ಮ ಟಿಪ್ಪಣಿ ಬರೆಯಿರಿ