ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿನ ಹದನು ತಮಗಿ
ನ್ನೊಂದಬುದವಜ್ಞಾತವುತ್ಕಟವಾಯ್ತುಲಾಯೆಂದ (ವಿರಾಟ ಪರ್ವ, ೧ ಸಂಧಿ, ೨ ಪದ್ಯ)
ತಾತ್ಪರ್ಯ:
ಪಾಂಡವರು ದ್ರೌಪದಿಯೊಡನೆ ಆಲದ ಮರದ ಕೆಳಗೆ ಬಳಲಿಕೆಯಿಮ್ದ ಸ್ವಲ್ಪಕಾಲ ವಿಶ್ರಮಿಸಿಕೊಂಡರು. ಬಳಿಕ ಯುಧಿಷ್ಠಿರನು ಚಿಂತಿಸಿ, ಈ ಹಿಂದೆ ಹನ್ನೆರಡು ವರ್ಷಗಳು ಕಳೆದವು. ಮುಂದೆ ಬರುವ ಯಾತನೆಯು ಅಜ್ಞಾತವಾಸ. ಇದು ಬಹು ಕಷ್ಟ ಇದನ್ನು ಹೇಗೆ ಕಳೆಬೇಕೆಂದು ಕೇಳಿದನು.
ಅರ್ಥ:
ಬಂದು: ಆಗಮಿಸು; ವಟಕುಜ: ಆಲದಮರ; ಅಡಿ: ಕೆಳಗೆ; ಅನಿಬರು: ಅಷ್ಟು ಜನ; ನಿಂದು: ನಿಲ್ಲು ದುರುಪದಿ: ದ್ರೌಪದಿ; ಸಹಿತ: ಜೊತೆ; ಬಳಲಿಕೆ: ಆಯಾಸ; ವಿಶ್ರಮ: ವಿರಾಮ; ಚಿಂತಿಸು: ಯೋಚಿಸು; ನಂದನ: ಮಗ; ಹಿಂದೆ: ನಡೆದ; ಅಬುದ: ವರ್ಷ; ಸವೆದು: ಕಳೆದು; ಮುಂದಣ: ಮುಂದಿನ; ಅನುವು: ರೀತಿ; ಹದ: ಸ್ಥಿತಿ; ಅಜ್ಞಾತ: ಯಾರಿಗೂ ತಿಳಿಯದ; ಉತ್ಕಟ: ಉಗ್ರತೆ, ಆಧಿಕ್ಯ;
ಪದವಿಂಗಡಣೆ:
ಬಂದು +ವಟಕುಜದ್+ಅಡಿಯಲ್+ಅನಿಬರು
ನಿಂದು +ದುರುಪದಿ+ ಸಹಿತ+ ಬಳಲಿಕೆ
ಯಿಂದ +ವಿಶ್ರಮಿಸಿದರು +ಚಿಂತಿಸಿ +ಧರ್ಮ+ನಂದನನು
ಹಿಂದೆ +ಹನ್ನೆರಡ್+ಅಬುದ +ಸವೆದವು
ಮುಂದಣನುವಿನ +ಹದನು +ತಮಗಿನ್
ಒಂದ್+ಅಬುದವ್+ಅಜ್ಞಾತವ್+ಉತ್ಕಟವಾಯ್ತಲಾಯೆಂದ
ಅಚ್ಚರಿ:
(೧) ಬಂದು, ನಿಂದು – ಪ್ರಾಸ ಪದ
(೨) ಹಿಂದೆ, ಮುಂದಣ – ವಿರುದ್ಧ ಪದ