ಪದ್ಯ ೬: ಗಣಿಕೆಯರ ಸುಗಂಧವು ಹೇಗೆ ಪರಿಣಾಮ ಬೀರಿತು?

ನೇವುರದ ದನಿ ದಟ್ಟಿಸಿತು ವೇ
ದಾವಳಿಯ ನಿರ್ಘೋಷವನು ನಾ
ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ
ಆ ವಧೂಜನದಂಗಗಂಧ
ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ (ಅರಣ್ಯ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ವೇದ ಘೋಷದ ಧ್ವನಿಯನ್ನು ಗಣಿಕೆಯರ ಕಾಲಂದುಗೆಯ ಸದ್ದು ತಡೆಯಿತು. ಅವರು ಧರಿಸಿದ್ದ ನಾನಾ ಆಭರಣಗಳ ಕಾಂತಿಯು ಮುನಿಗಳ ಸಮಾಧಿಯನ್ನು ಕೆಣಕಿತು. ಆ ತರುಣಿಯರ ದೇಹ ಗಂಧವು ಬ್ರಾಹ್ಮಣರು ಹೋಮ ಮಾಡಿದ್ದ ಚರು ಪುರೋಡಾಶಗಳ ಕಂಪನ್ನು ಆವರಿಸಿತು.

ಅರ್ಥ:
ನೇವುರ: ಅಂದುಗೆ, ನೂಪುರ; ದನಿ: ಶಬ್ದ; ದಟ್ಟ: ಒತ್ತಾದುದು, ಸಾಂದ್ರವಾದುದು; ವೇದ: ಶೃತಿ; ಆವಳಿ: ಗುಂಪು, ಸಾಲು; ನಿರ್ಘೋಷ: ದೊಡ್ಡ ಘೋಷಣೆ; ನಾನಾ: ಬಹಳ; ವಿಭೂಷಣ: ಒಡವೆ, ಆಭರಣ; ಕಾಂತಿ: ಪ್ರಕಾಶ; ಕೆಣಕು: ರೇಗಿಸು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ವಧು: ಹೆಂಗಸು, ಸ್ತ್ರೀ; ಅಂಗ: ದೇಹದ ಭಾಗ; ಗಂಧ: ಪರಿಮಳ; ಪ್ರಾವರಣ: ಮೇಲುಹೊದಿಕೆ; ಹುತ: ಹವಿಸ್ಸು; ಚರು: ನೈವೇದ್ಯ, ಹವಿಸ್ಸು; ಪುರೋಡಾಶ: ಯಜ್ಞ ಯಾಗಾದಿಗಳಲ್ಲಿ ಅರ್ಪಿಸುವ ಹವಿಸ್ಸು; ಆವಳಿ: ಗುಂಪು, ಸಾಲು; ಸೌರಭ: ಸುಗಂಧ; ಮುಸುಕು: ಆವರಿಸು; ವನ: ಕಾಡು; ವಳಯ: ಆವರಣ;

ಪದವಿಂಗಡಣೆ:
ನೇವುರದ +ದನಿ +ದಟ್ಟಿಸಿತು +ವೇ
ದಾವಳಿಯ +ನಿರ್ಘೋಷವನು +ನಾ
ನಾ +ವಿಭೂಷಣ +ಕಾಂತಿ +ಕೆಣಕಿತು +ಮುನಿ +ಸಮಾಧಿಗಳ
ಆ +ವಧೂಜನದ್+ಅಂಗ+ಗಂಧ
ಪ್ರಾವರಣ+ ಹುತ +ಚರು+ ಪುರೋಡಾ
ಶಾವಳಿಯ +ಸೌರಭವ +ಮುಸುಕಿತು +ವನದ +ವಳಯದಲಿ

ಅಚ್ಚರಿ:
(೧) ವೇದಾವಳಿ, ಪುರೋಡಾಶಾವಳಿ- ಆವಳಿ ಪದದ ಬಳಕೆ
(೨) ಸುಗಂಧ ಹರಡುವ ಪರಿ – ವಧೂಜನದಂಗಗಂಧ ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ

ನಿಮ್ಮ ಟಿಪ್ಪಣಿ ಬರೆಯಿರಿ