ಲಾಯ ನೀಡಿತು ಮುಂದೆ ರಾವುತ
ಪಾಯಕರಿಗೆಡವಂಕ ಮಂತ್ರಿ ಪ
ಸಾಯತರು ಕರ್ಣಾದಿಗಳಿಗೆಡೆಯಾಯ್ತು ಬಲವಂಕ
ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವ
ರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ (ಅರಣ್ಯ ಪರ್ವ, ೧೯ ಸಂಧಿ, ೨ ಪದ್ಯ)
ತಾತ್ಪರ್ಯ:
ಮುಂದೆ ಆನೆ ಕುದುರೆಗಳ ಲಾಯಗಳಿದ್ದವು, ಪದಾತಿಗಳು, ರಾವುತರು ಅರಮನೆಯ ಎಡಕ್ಕಿದ್ದವು, ಕರ್ಣಾದಿಗಳ ಅರಮನೆಯು ಬಲಭಾಗಕ್ಕಿದ್ದವು. ಕೌರವನ ಅರಮನೆಗೆ ಮುತ್ತಿನ ಕಳಶದಿಂದ ಅಲಂಕರಿಸಲಾಗಿತ್ತು, ಆ ಕಲಶದ ಕಾಂತಿಯು ಪಾಂಡವರ ಕುಟೀರವನ್ನು ನೋಡಿ ನಗುತ್ತಿದ್ದವೋ ಎನ್ನುವಂತಿತ್ತು.
ಅರ್ಥ:
ಲಾಯ: ಆನೆ ಕುದುರೆಗಳನ್ನು ಕಟ್ಟುವ ಸ್ಥಳ, ಅಶ್ವಶಾಲೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಪಸಾಯ: ಉಡುಗೊರೆ, ಬಹುಮಾನ; ಆದಿ: ಮುಂತಾದ; ಎಡೆ: ಅವಕಾಶ, ಸಂದರ್ಭ; ಅಂಕ: ವಿಭಾಗ; ರಾಯ: ರಾಜ; ಅರಮನೆ: ರಾಜರ ಆಲಯ; ಮೌಕ್ತಿಕ: ನವರತ್ನಗಳಲ್ಲಿ ಒಂದು ಮುತ್ತು; ಕಳಶ: ಕುಂಭ; ಆಯತ: ವಾಸಸ್ಥಾನ, ನೆಲೆ; ಬೆಳಗು: ಮುಂಜಾವ, ಪ್ರಾತಃಕಾಲ; ನೆಲೆ: ಸ್ಥಾನ; ನಗು: ಹರ್ಷ; ನವಾಯಿ: ಠೀವಿ;
ಪದವಿಂಗಡಣೆ:
ಲಾಯ +ನೀಡಿತು +ಮುಂದೆ +ರಾವುತ
ಪಾಯಕರಿಗ್+ಎಡವಂಕ +ಮಂತ್ರಿ +ಪ
ಸಾಯತರು +ಕರ್ಣಾದಿಗಳಿಗ್+ಎಡೆಯಾಯ್ತು +ಬಲವಂಕ
ರಾಯನ್+ಅರಮನೆ +ಮೌಕ್ತಿಕದ +ಕಳಶ
ಆಯತದ +ಬೆಳಗಿನಲಿ +ಪಾಂಡವ
ರಾಯ +ನೆಲೆವನೆಗಳನು +ನಗುತಿದ್ದುದು +ನವಾಯಿಯಲಿ
ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವರ್ಣಿಸುವ ಪರಿ – ರಾಯನರಮನೆ ಮೌಕ್ತಿಕದ ಕಳ
ಶಾಯತದ ಬೆಳಗಿನಲಿ ಪಾಂಡವರಾಯ ನೆಲೆವನೆಗಳನು ನಗುತಿದ್ದುದು ನವಾಯಿಯಲಿ