ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಖಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಿನ ಸಖನಪರಾಂಬುರಾಶಿಯ
ನಿಲುಕುತೈದನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆಂದ ಯಮಸೂನು (ಅರಣ್ಯ ಪರ್ವ, ೧೭ ಸಂಧಿ, ೪೯ ಪದ್ಯ)
ತಾತ್ಪರ್ಯ:
ಧರ್ಮಜನು ಮುನಿಗಳ ಮಾತುಗಳನ್ನು ಕೇಳಿ, ಮುನೀಶ್ವರ ನಿಮ್ಮ ಮಾತು ತಪ್ಪದೆ ನಿಲ್ಲುವಂತಹದು, ಈ ಲೋಕ ಪರಲೋಕಗಳ ತಗಿಯ ನಿಮ್ಮ ಭಕ್ತಿ ಕೃಷ್ನನ ಒಲುಮೆಗಳಿರುವಾಗ ನಿಶ್ಚಿತವಾಗಿ ದೊರಕುತ್ತದೆ, ನಿಮಗೆ ಅಸಾಧ್ಯವೆನ್ನುವುದಿಲ್ಲ. ಈಗ ಸೂರ್ಯನು ಇನ್ನೇನು ಮುಳುಗಲಿದ್ದಾನೆ, ಮುನಿವೃಂದವು ಹಸಿದಿದೆ. ದಯೆಯಿಟ್ಟು ಊಟಕ್ಕೆ ದಯಮಾಡಿ ಎಂದು ಧರ್ಮಜನು ಮುನಿವೃಂದವನ್ನು ಆಹ್ವಾನಿಸಿದನು.
ಅರ್ಥ:
ಮುನಿ: ಋಷಿ; ನುಡಿ: ಮಾತು; ಸ್ಖಲಿತ: ತಪ್ಪಾದ; ಇಹಪರ: ಈ ಲೋಕ ಮತ್ತು ಪರಲೋಕ; ಗತಿ: ಇರುವ ಸ್ಥಿತಿ, ಅವಸ್ಥೆ; ಒಲವು: ಸ್ನೇಹ, ಪ್ರೀತಿ; ಕೂರ್ಮೆ: ಪ್ರೀತಿ, ನಲ್ಮೆ; ಅರಿ: ನಾಶಮಾಡು; ನಳಿನ: ಕಮಲ; ಸಖ: ಸ್ನೇಹಿತ; ಅಪರ: ಪಶ್ಚಿಮದಿಕ್ಕು; ಅಂಬುರಾಶಿ: ಸಮುದ್ರ; ಅಂಬು: ನೀರು; ನಿಲುಕು: ಹತ್ತಿರ, ಸನ್ನಿಹಿತ; ಐದು: ಹೋಗಿಸೇರು; ಹಸಿ:ಆಹಾರವನ್ನು ಬಯಸು, ಹಸಿವಾಗು; ಮುನಿ: ಋಷಿ; ಬಳಗ: ಗುಂಪು; ಆರೋಗಣೆ: ಊಟ, ಭೋಜನ; ಚಿತ್ತವಿಸು: ಗಮನಕೊಡು; ಸೂನು: ಮಗ;
ಪದವಿಂಗಡಣೆ:
ಎಲೆ +ಮುನೀಶ್ವರ +ನಿಮ್ಮ +ನುಡಿಯ
ಸ್ಖಲಿತವಿದು +ಇಹಪರದ +ಗತಿ +ನಿನ್
ಒಲವು +ಕೃಷ್ಣನ +ಕೂರ್ಮೆಯಿರಲ್+ಇನ್ನಾವುದ್+ಅರಿದೆಮಗೆ
ನಳಿನ +ಸಖನ್+ಅಪರ+ಅಂಬುರಾಶಿಯ
ನಿಲುಕುತ್+ಐದನೆ +ಹಸಿದುದೀ+ ಮುನಿ
ಬಳಗವ್+ಆರೋಗಣೆಗೆ +ಚಿತ್ತವಿಸೆಂದ +ಯಮಸೂನು
ಅಚ್ಚರಿ:
(೧) ಸಂಜೆಯಾಯಿತು ಎಂದು ಹೇಳಲು – ನಳಿನಸಖನಪರಾಂಬುರಾಶಿಯನಿಲುಕುತೈದನೆ
(೨) ಸಮುದ್ರವನ್ನು ಅಂಬುರಾಶಿ, ಸೂರ್ಯನನ್ನು ನಳಿನಸಖ ಎಂದು ಕರೆದಿರುವುದು