ಪದ್ಯ ೯: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕುಶಲವೇ ಕುರುರಾಯನೂಳಿಗ
ವೆಸಕದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಂಗಳಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತಲಾ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ನೋಡಿ, ನೀವು ಕುಶಲವೇ, ಕೌರವನ ಆಟೋಪವು ನಿಮ್ಮ ಮೇಲೆ ಉಪಟಳ ಮಾಡುತ್ತಿಲ್ಲವೆ? ವನವಾಸದ ಅವಧಿಯು ತೀರುತ್ತಾ ಬಂದಿತೇ? ಕಾಡು ಮೇಡುಗಳಲ್ಲಿ ಅಲೆದಾಡಿದಿರಲ್ಲವೇ? ಶಿವನ ಬಾಣವು ಅರ್ಜುನನಿಗೆ ವಶವಾಯಿತಲ್ಲವೇ? ನಿಮ್ಮನ್ನು ನೋಡಿದ ಈ ಗಳಿಗೆ ನಮಗೆ ಶುಭಕರವಾಯಿತು ಎಂದು ಹೇಳಿ ಧರ್ಮಜನನ್ನು ಆಲಿಂಗಿಸಿಕೊಂಡನು.

ಅರ್ಥ:
ಕುಶಲ: ಕ್ಷೇಮ; ಊಳಿಗ: ಕೆಲಸ, ಕಾರ್ಯ; ಎಸಕ: ಕೆಲಸ, ಕಾಂತಿ; ಅವಧಿ: ಗಡು, ಸಮಯದ ಪರಿಮಿತಿ; ದೆಸೆ: ದಿಕ್ಕು; ಸಮೀಪ: ಹತ್ತಿರ; ತೊಳಲು: ಅಲೆದಾಡು, ತಿರುಗಾಡು; ವನ: ಕಾಡು; ಪಶುಪತಿ: ಶಂಕರ; ಅಂಬು: ಬಾಣ; ಕೈವರ್ತಿಸು: ವಶವಾಯಿತು; ಒಸಗೆ: ಶುಭ; ಪುಣ್ಯ: ಸದಾಚಾರ; ಹರಿ: ಕೃಷ್ಣ; ಮಹೀಪತಿ: ರಾಜ;

ಪದವಿಂಗಡಣೆ:
ಕುಶಲವೇ+ ಕುರುರಾಯನ್+ಊಳಿಗವ್
ಎಸಕದಲೆ+ ನಿಮ್ಮತ್ತಲ್+ಅವಧಿಯ
ದೆಸೆ +ಸಮೀಪವೆ +ತೊಳಲಿದಿರೆಲಾ +ವನವನಂಗಳಲಿ
ಪಶುಪತಿಯು +ಹಿಡಿವ್+ಅಂಬು +ಕೈವ
ರ್ತಿಸಿತಲಾ +ಪಾರ್ಥಂಗೆ +ನಮಗಿಂದ್
ಒಸಗೆಯಾಯಿತು +ಪುಣ್ಯವೆಂದನು +ಹರಿ +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ಸರಳತೆ: ನಮಗಿಂದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ

ಪದ್ಯ ೮: ಕೃಷ್ಣನು ಪಾಂಡವರನ್ನು ಹೇಗೆ ಮನ್ನಿಸಿದನು?

ಇಳಿದು ದಂಡಿಗೆಯಿಂದ ಕರುಣಾ
ಜಲಧಿ ಬಂದನು ಕಾಲುನಡೆಯಲಿ
ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ
ಬಳಿಕ ಭೀಮಾರ್ಜುನರ ಯಮಳರ
ನೊಲಿದುಮನ್ನಿಸಿ ಸತಿಯಲೋಚನ
ಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ (ಅರಣ್ಯ ಪರ್ವ, ೧೫ ಸಂಧಿ, ೮ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಪಲ್ಲಕ್ಕಿಯಿಂದಿಳಿದು, ಕಾಲು ನಡೆಯಲ್ಲಿ ಬಂದು, ಇದೇನು ಇಂತಹ ರಭಸ ಎನ್ನುತ್ತಾ ಧರ್ಮಜನನ್ನು ಬಿಗಿದಪ್ಪಿದನು, ಭೀಮಾರ್ಜುನ ನಕುಲ ಸಹದೇವರನ್ನು ಮನ್ನಿಸಿ, ದ್ರೌಪದಿಯ ಕಣ್ಣೀರನ್ನು ತನ್ನ ಉತ್ತರಿಯದಿಂದ ಒರೆಸಿ ಸಂತೈಸಿದನು.

ಅರ್ಥ:
ಇಳಿದು: ಕೆಳಗೆ ಬಂದು; ದಂಡಿಗೆ: ಪಲ್ಲಕ್ಕಿ; ಕರುಣ: ದಯೆ; ಜಲಧಿ: ಸಾಗರ; ಬಂದು: ಆಗಮಿಸು; ಕಾಲುನಡೆ: ಚಲಿಸು, ಮುನ್ನಡೆ; ಸೆಳೆ: ಎಳೆತ, ಸೆಳೆತ; ಬಿಗಿ: ಭದ್ರ, ಗಟ್ಟಿ; ಅಪ್ಪು: ಆಲಿಂಗನ; ಆಸುರ: ರಭಸ; ಬಳಿಕ: ನಂತರ; ಯಮಳ: ಅಶ್ವಿನಿ ದೇವತೆಗಳು, ಅವಳಿ ಮಕ್ಕಳು; ಒಲಿದು: ಪ್ರೀತಿಸು; ಮನ್ನಿಸು: ಗೌರವಿಸು; ಸತಿ: ಗರತಿ; ಲೋಚನ: ಕಣ್ಣು; ಜಲ: ನೀರು; ಸೆರಗು: ಬಟ್ಟೆಯ ಅಂಚು; ಒರಸು: ಸಾರಿಸು, ಅಳಿಸು; ಸಂತೈಸು: ಸಾಂತ್ವನಗೊಳಿಸು; ಬಾಲಕಿ: ಹೆಣ್ಣು;

ಪದವಿಂಗಡಣೆ:
ಇಳಿದು +ದಂಡಿಗೆಯಿಂದ +ಕರುಣಾ
ಜಲಧಿ +ಬಂದನು +ಕಾಲುನಡೆಯಲಿ
ಸೆಳೆದು +ಬಿಗಿ+ಅಪ್ಪಿದನ್ +ಇದೇನ್+ಆಸುರವ್+ಇದೇನೆನುತ
ಬಳಿಕ+ ಭೀಮಾರ್ಜುನರ +ಯಮಳರನ್
ಒಲಿದು+ಮನ್ನಿಸಿ +ಸತಿಯ+ಲೋಚನ
ಜಲವ +ಸೆರಗಿನೊಳ್+ಒರಸಿ +ಸಂತೈಸಿದನು +ಬಾಲಕಿಯ

ಅಚ್ಚರಿ:
(೧) ಕೃಷ್ಣನ ಸರಳತೆ – ಕರುಣಾಜಲಧಿ ಬಂದನು ಕಾಲುನಡೆಯಲಿ ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ; ಸತಿಯಲೋಚನಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ

ಪದ್ಯ ೭: ಧರ್ಮಜನು ಕೃಷ್ಣನ ಬಳಿ ಹೇಗೆ ತಲುಪಿದನು?

ಹಳುವವನು ಹೊರವಂಟು ಗರುಡನ
ಹಲವಿಗೆಯ ದೂರದಲಿ ಕಂಡನು
ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ
ತಳಿತರೋಮಾಂಚದಲಿ ಸಮ್ಮುದ
ಪುಳಕದಲಿ ಪೂರಾಯದುಬ್ಬಿನ
ಲಿಳೆಯೊಡೆಯ ಮೈಯಿಕ್ಕುತೈದಿದನಖಿಳ ಜನಸಹಿತ (ಅರಣ್ಯ ಪರ್ವ, ೧೫ ಸಂಧಿ, ೭ ಪದ್ಯ)

ತಾತ್ಪರ್ಯ:
ಧರ್ಮಜನು ತಾನಿದ್ದ ಕಾಡಿನಿಂದ ಹೊರಟು ಕೃಷ್ಣನ ಬರುವ ಮಾರ್ಗದಲ್ಲಿ ಮುನ್ನಡೆದನು, ದೂರದಲ್ಲಿ ಗರುಡ ಧ್ವಜವನ್ನು ಕಂಡನು. ಆನಂದ ಬಾಷ್ಪಗಳು ಸೂಸಲು, ರೋಮಾಂಚನಗೊಂಡು ಮತ್ತೆ ಮತ್ತೆ ನಮಸ್ಕರಿಸುತ್ತಾ ಶ್ರೀಕೃಷ್ಣನತ್ತ ನಡೆತಂದನು.

ಅರ್ಥ:
ಹಳುವ: ಕಾಡು; ಹೊರವಂಟು: ಹೊರಟು; ಗರುಡ: ವಿಷ್ಣುವಿನ ವಾಹನ; ಹಳವಿಗೆ: ಬಾವುಟ; ದೂರ: ಅಂತರ; ಕಂಡು: ನೋಡು; ತುಳುಕು: ಹೊರ ಚೆಲ್ಲು; ಸಂತೋಷ: ಹರ್ಷ; ಜಲ: ನೀರು; ನಿಟ್ಟೆಸಳುಗಂಗಳು: ಹೂವಿನದಳದಂತೆ ದೀರ್ಘವಾದ ಕಣ್ಣುಗಳು; ತಳಿತ: ಚಿಗುರಿದ; ರೋಮಾಂಚನ: ಪುಳಕ; ಸಮ್ಮುದ: ಸಂತೋಷ; ಪುಳಕ: ಮೈನವಿರೇಳುವಿಕೆ; ಪೂರಾಯ: ಪರಿಪೂರ್ಣ; ಉಬ್ಬು: ಅಧಿಕ; ಇಳೆ: ಭೂಮಿ; ಇಳೆಯೊಡೆಯ: ರಾಜ; ಮೈಯಿಕ್ಕು: ನಮಸ್ಕರಿಸು; ಐದು: ಬಂದುಸೇರು; ಅಖಿಳ: ಎಲ್ಲಾ; ಜನ: ಜನರು; ಸಹಿತ; ಜೊತೆ;

ಪದವಿಂಗಡಣೆ:
ಹಳುವವನು +ಹೊರವಂಟು +ಗರುಡನ
ಹಳವಿಗೆಯ+ ದೂರದಲಿ +ಕಂಡನು
ತುಳುಕಿದವು +ಸಂತೋಷಜಲ+ ನಿಟ್ಟೆಸಳುಗಂಗಳಲಿ
ತಳಿತ+ರೋಮಾಂಚದಲಿ+ ಸಮ್ಮುದ
ಪುಳಕದಲಿ+ ಪೂರಾಯದ್+ಉಬ್ಬಿನಲ್
ಇಳೆಯೊಡೆಯ+ ಮೈಯಿಕ್ಕುತ್+ಐದಿದನ್+ಅಖಿಳ +ಜನಸಹಿತ

ಅಚ್ಚರಿ:
(೧) ಧರ್ಮಜನ ಸಂಭ್ರಮ – ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ ತಳಿತರೋಮಾಂಚದಲಿ ಸಮ್ಮುದ ಪುಳಕದಲಿ ಪೂರಾಯದುಬ್ಬಿನಲಿಳೆಯೊಡೆಯ ಮೈಯಿಕ್ಕುತೈದಿದನ

ಪದ್ಯ ೬: ಧರ್ಮಜನು ಏನನ್ನು ಯೋಚಿಸುತ್ತಾ ಹೊರಟನು?

ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸಲು ತಮ್ಮೊಳಗೆ ಕೃಪೆಯಲ
ರೋಚಕವನಾದೈವ ಮಾಡದೆನುತ್ತ ಹೊರವಂಟ (ಅರಣ್ಯ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಶಕುನವು ಶ್ರೀ ಕೃಷ್ಣನ ಆಗಮನವನ್ನು ಸೂಚಿಸಿದವು. ಆ ಹಿರಿಯನು ಮತ್ತೆ ಕಾಣಿಸಿಕೊಂಡನು. ಸಹಸ್ರಾರು ಜನ್ಮಗಳಲ್ಲಿ ನಾವು ಮಾಡಿದ ಪುಣ್ಯವೇನಿರಬಹುದು! ಯಾರನ್ನು ಸೂಚಿಸಲು ವೇದಗಳು ಕೈಲಾಗದೇ ನಾಚಿದವೋ, ಆ ದೈವವು ನಮ್ಮಲ್ಲಿ ಕೃಪೆದೋರಲು ಎಂದಿಗೂ ಬೇಸರ ಪಡುವುದಿಲ್ಲ ಎನ್ನುತ್ತಾ ಧರ್ಮಜನು ಹೊರಟನು.

ಅರ್ಥ:
ಸೂಚಿಸು: ತೋರಿಸು, ಹೇಳು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಪುನರಪಿ: ಪುನಃ; ಗೋಚರಿಸು: ತೋರು; ಗರುವ: ಶ್ರೇಷ್ಠ; ನಿಧಿ: ಸಂಪತ್ತು, ಐಶ್ವರ್ಯ; ಆಚರಿಸು: ಮಾಡಿದ; ಭವ: ಜನ್ಮ; ಸಹಸ್ರ: ಸಾವಿರ; ನಾಚು: ಅವಮಾನ ಹೊಂದು; ನಿಗಮ: ವೇದ; ಕೃಪೆ: ದಯೆ; ರೋಚಕ: ತೇಜಸ್ಸುಳ್ಳ; ದೈವ: ಭಗವಂತ; ಹೊರವಂಟ: ನಡೆದ;

ಪದವಿಂಗಡಣೆ:
ಸೂಚಿಸಿದವೇ +ಶಕುನ +ಪುನರಪಿ
ಗೋಚರಿಸಿತೇ +ಗರುವನಿಧಿ+ ನಾವ್
ಆಚರಿಸಿತ್+ಏನೋ +ಶಿವಾ +ಭವಭವ+ ಸಹಸ್ರದಲಿ
ನಾಚಿದವು+ ನಿಗಮಂಗಳ್+ಆವನ
ಸೂಚಿಸಲು+ ತಮ್ಮೊಳಗೆ +ಕೃಪೆಯಲ
ರೋಚಕವನ್+ಆ+ದೈವ +ಮಾಡದೆನುತ್ತ+ ಹೊರವಂಟ

ಅಚ್ಚರಿ:
(೧) ಸೂಚಿಸು, ಗೋಚರಿಸು – ಸಾಮ್ಯಾರ್ಥ ಪದಗಳು
(೨) ಕೃಷ್ಣನ ಮಹಿಮೆ – ನಾಚಿದವು ನಿಗಮಂಗಳಾವನ ಸೂಚಿಸಲು

ಪದ್ಯ ೫: ಯಾರ ಆಗಮನವನ್ನು ದೂತ ತಿಳಿಸಿದನು?

ಇದಕೆ ಕೃಷ್ಣಾಗಮನವೇ ಫಲ
ದುದಯ ವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಆಗಮನವನ್ನೇ ಈ ಶುಭಶಕುನಗಳೂ ಸೂಚಿಸುತ್ತಿರಬೇಕು ಎಂದುಕೊಳ್ಳುತ್ತಿರುವಾಗ, ದ್ವಾರಕೆಯಿಮ್ದ ದೂತನೊಬ್ಬನು ಬಂದು ಯುಧಿಷ್ಠಿರನ ಸಮ್ಮುಖದಲ್ಲಿ ನಿಂತನು. ಇದೋ ಕೃಪಾನಿಧಿ ಶ್ರೀಕೃಷ್ಣನು ಬಂದನು, ರಾಕ್ಷಸರ ಅಭ್ಯುದಯವನ್ನು ಮುರಿಯುವವನು ಬಂದನು, ಶತ್ರುಗಳೆಂಬ ಮನ್ಮಥನ ಮದವನ್ನು ದಹಿಸುವ ಶಿವನು ಬಂದನು ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಆಗಮನ: ಬರುವಿಕೆ; ಫಲ: ಪ್ರಯೋಜನ; ಉದಯ: ಹುಟ್ಟು; ಐಸಲೆ: ಅಲ್ಲವೆ; ಬಂದು: ಆಗಮನ; ಇದಿರು: ಎದುರು; ನಿಂದನು: ನಿಲ್ಲು; ದೂತ: ಸೇವಕ; ಅಮಲ: ನಿರ್ಮಲ; ಪುರ: ಊರು; ಕೃಪಾನಿಧಿ: ಕರುಣಾಸಾಗರ; ಅಸುರ: ರಾಕ್ಷಸ; ಅಭ್ಯುದಯ: ಏಳಿಗೆ; ಘಾತ: ಹೊಡೆತ, ಪೆಟ್ಟು; ರಿಪು: ವೈರಿ; ಬಲ: ಶಕ್ತಿ; ಮದನ: ಮನ್ಮಥ; ಮದ: ಅಹಂಕಾರ; ಹರ: ಶಿವ; ಮಹೀಪತಿ: ರಾಜ;

ಪದವಿಂಗಡಣೆ:
ಇದಕೆ +ಕೃಷ್ಣಾಗಮನವೇ +ಫಲವ್
ಉದಯವ್ + ಐಸಲೆ+ಎನುತಲಿರೆ+ ಬಂದ್
ಇದಿರೆ +ನಿಂದನು +ದೂತನ್+ಅಮಲ +ದ್ವಾರಕಾಪುರದ
ಇದೆ+ ಕೃಪಾನಿಧಿ+ಬಂದನ್+ಅಸುರ
ಅಭ್ಯುದಯ +ಘಾತಕ +ಬಂದ +ರಿಪು+ಬಲ
ಮದನ+ಮದ+ಹರ +ಬಂದನಿದೆ+ಎಂದನು +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ವರ್ಣನೆ – ಕೃಪಾನಿಧಿಬಂದನಸುರಾಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ