ಕೇಳಿದನು ಹರುಷಾಶ್ರು ಹೊದಿಸಿ ದು
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ
ಬಾಲೆಯರ ಬರಹೇಳು ರತ್ನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮಂಡಿತ ಚರಣನೆದ್ದನು ಬಂದನಿದಿರಾಗಿ (ಅರಣ್ಯ ಪರ್ವ, ೧೩ ಸಂಧಿ, ೫೭ ಪದ್ಯ)
ತಾತ್ಪರ್ಯ:
ದೇವೇಂದ್ರನು ಸಂತೋಷದ ವಿಷಯವನ್ನು ಕೇಳಿ ಅವನ ಸಾವಿರ ಕಣ್ಣುಗಳು ಆನಂದಾಶ್ರುಗಳನ್ನು ಹೊರಸೂಸಿದವು. ಅವನು ರೋಮಾಂಚನಗೊಂಡು ಸಂಪೂರ್ಣ ಸಂತೋಷದಲ್ಲಿ ಮುಳುಗಿದನು. ರತ್ನದಾರತಿಗಳನ್ನು ತೆಗೆದುಕೊಂಡು ಯುವತಿಯರು ಬರಲಿ, ಅರ್ಜುನನಿಗೆ ದೃಷ್ಟಿತೆಗೆಯಲಿ ಎನ್ನುತ್ತಾ ದೇವೆಂದ್ರನು ಎದ್ದು ನನಗಿದಿರಾಗಿ ಬಂದನು.
ಅರ್ಥ:
ಕೇಳು: ಆಲಿಸು; ಹರುಷ: ಸಂತಸ; ಆಶ್ರು: ಕಣ್ಣಿರು; ಹೊದಿ: ಧರಿಸಿಕೊಳ್ಳು; ಆಲಿ: ಕಣ್ಣು; ಸಾವಿರ: ಸಹಸ್ರ; ಉಬ್ಬು: ಹಿಗ್ಗು; ಮೇಲು: ಹೆಚ್ಚಾದ; ಮದ: ಮತ್ತು, ಸೊಕ್ಕು; ರೋಮ: ಕೂದಲ; ಪುಳಕ: ರೋಮಾಂಚನ; ಪೂರ್ಣ: ತುಂಬ; ಸೌಖ್ಯ: ಸುಖ; ಬಾಲೆ: ಹೆಣ್ಣು; ಬರಹೇಳು: ಆಗಮಿಸು; ರತ್ನ: ಬೆಲೆಬಾಳುವ ಮಣಿ; ನಿವಾಳಿಸು: ದೃಷ್ಟಿತೆಗೆಯುವುದು; ತರಹೇಳು: ಬರೆಮಾಡು; ಸುರಮೌಳಿ: ಇಂದ್ರ; ಮಂಡಿತ: ಅಲಂಕೃತವಾದ; ಚರಣ: ಪಾದ; ಎದ್ದು; ಮೇಲೇಳು; ಬಂದು: ಆಗಮಿಸು; ಇದಿರು: ಎದುರು;
ಪದವಿಂಗಡಣೆ:
ಕೇಳಿದನು +ಹರುಷ+ಆಶ್ರು+ ಹೊದಿಸಿದುವ್
ಆಲಿಗಳ+ ಸಾವಿರವನ್+ಉಬ್ಬಿದ
ಮೇಲು+ಮದದ+ ಸರೋಮ+ಪುಳಕದ+ ಪೂರ್ಣ+ಸೌಖ್ಯದಲಿ
ಬಾಲೆಯರ+ ಬರಹೇಳು +ರತ್ನ+ ನಿ
ವಾಳಿಗಳ+ ತರಹೇಳ್+ಎನುತ +ಸುರ
ಮೌಳಿ+ ಮಂಡಿತ+ ಚರಣನೆದ್ದನು+ ಬಂದನ್+ಇದಿರಾಗಿ
ಅಚ್ಚರಿ:
(೧) ಇಂದ್ರನನ್ನು ಕರೆದ ಪರಿ – ಸುರಮೌಳಿ, ಆಲಿಗಳ ಸಾವಿರವನ್;
(೨) ಸಂತೋಷಗೊಂಡನೆಂದು ಹೇಳುವ ಪರಿ – ಹರುಷಾಶ್ರು ಹೊದಿಸಿ ದುವಾಲಿಗಳ ಸಾವಿರವನುಬ್ಬಿದ ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ